ಸವಾಲುಗಳು ಮಧ್ಯೆ ಕನ್ನಡ ಭಾಷೆ: ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ

| Published : Dec 03 2024, 12:32 AM IST

ಸವಾಲುಗಳು ಮಧ್ಯೆ ಕನ್ನಡ ಭಾಷೆ: ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ
Share this Article
  • FB
  • TW
  • Linkdin
  • Email

ಸಾರಾಂಶ

ಆಂಗ್ಲ ಮತ್ತು ಅನ್ಯಭಾಷೆಗಳ ವ್ಯಾಮೋಹ ನಮ್ಮನ್ನು ಆವರಿಸಿಕೊಂಡು ಕನ್ನಡ ಉಳಿಸಲು ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.

ಕಲಘಟಗಿ:

ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದ ಪ್ರಾತಿನಿಧಿಕ ಸಂಸ್ಥೆಯಾಗಿದ್ದು ಪರಿಷತ್ತು ರಚನಾತ್ಮಕ ಕಾರ್ಯಕ್ರಮ ಸಂಘಟಿಸುವ ಮೂಲಕ ಕನ್ನಡದ ಉಳುವಿಗೆ ಶ್ರಮಿಸುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ತಾಲೂಕು ಮಟ್ಟದ ಕಸಾಪ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆಗೆ ಹಲವಾರು ಸವಾಲುಗಳಿವೆ. ಸ್ಥಳೀಯ ಪ್ರಜ್ಞಾವಂತರು ಜಾಗೃತರಾಗಿ ಕನ್ನಡದ ಸೇವಕರಾಗಿ ಕಾರ್ಯನಿರ್ವಹಿಸುವುದು ಅಗತ್ಯವಿದೆ ಎಂದರು.

ಕೆಪಿಸಿಸಿ ಸದಸ್ಯ ಎಸ್‌.ಆರ್. ಪಾಟೀಲ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಟ್ಟುವ ಕೆಲಸದ ಜತೆಗೆ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಕನ್ನಡ ನಾಡು-ನುಡಿಯ ಬೆಳವಣಿಗೆಗೆ ಪರಿಷತ್ತಿನ ಸಾಧನೆ ಅಗಾಧವಾಗಿದ್ದು ತಾಲೂಕಿನಲ್ಲಿ ಸಾಹಿತ್ಯಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದರು.

ಜಿಪಂ ಮಾಜಿ ಸದಸ್ಯ ಐ.ಸಿ. ಗೋಕುಲ ಮಾತನಾಡಿ,‌ ಆಂಗ್ಲ ಮತ್ತು ಅನ್ಯಭಾಷೆಗಳ ವ್ಯಾಮೋಹ ನಮ್ಮನ್ನು ಆವರಿಸಿಕೊಂಡು ಕನ್ನಡ ಉಳಿಸಲು ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಕನ್ನಡಿಗರು ಆತ್ಮಲೋಕನ ಮಾಡಿಕೊಳ್ಳುವ ಜತೆಗೆ ಜಾಗೃತರಾಗಿಬೇಕಿದೆ ಎಂದು ಹೇಳಿದರು.

ತಾಲೂಕು ತನ ಕಸಾಪ ಅಧ್ಯಕ್ಷ ರಮೇಶ ಸೋಲಾರಗೊಪ್ಪ ಅವರಿಗೆ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ್ ಅಂಗಡಿ ಪರಿಷತ್ತಿನ ಧ್ವಜ ಹಸ್ತಾಂತರಿಸಿದರು. ಇದೇ ವೇಳೆ ನೂತನ ಪದಾಧಿಕಾರಿಗಳಾದ ಗೌರವ ಕಾರ್ಯದರ್ಶಿಗಳಾದ ಗಿರೀಶ ಮುಕ್ಕಲ್, ಪ್ರಭುಲಿಂಗ ರಂಗಾಪುರ, ಕೋಶ್ಯಾಧ್ಯಕ್ಷ ಬಸವರಾಜ ದಾಸನಕೊಪ್ಪ ಸೇರಿದಂತೆ ಎಲ್ಲ ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷರು ಪ್ರಮಾಣ ವಚನ ಬೋಧಿಸಿದರು.

ಬಿ.ವೈ. ಪಾಟೀಲ, ನಿಂಗಪ್ಪ ಸುತಗಟ್ಟಿ, ಪರಶುರಾಮ ಎತ್ತಿನಗುಡ್ಡ, ಪಿಎಸ್ಐ ಬಸವರಾಜ್ ಯಲ್ಲದಗುಡ ಸೇರಿದಂತೆ ಇತರರು ಮಾತನಾಡಿದರು. ಮುಕ್ಕಲ್ ಪಿಡಿಇ ನಾಗರಾಜಕುಮಾರ ಬಿದರಳ್ಳಿ ಡಾ.ಎಚ್.ಎಸ್. ಅನುಪಮಾ ಅವರ ಭೀಮಯಾನ ಮತ್ತು ಪ್ರೊ. ಎಂ. ಅಬ್ದುಲ್ ರೆಹಮಾನ್ ಪಾಷಾ ಅವರ ಸರಳ ಓದಿಗಾಗಿ ಭಾರತದ ಸಂವಿಧಾನ ಎಂಬ ₹ 1 ಲಕ್ಷ ಮೌಲ್ಯದ ಪುಸ್ತಕಗಳನ್ನು ತಾಲೂಕು ಕಸಾಪಕ್ಕೆ ಕೊಡುಗೆಯಾಗಿ ನೀಡಿದರು.

ಅಭಿನವ ಮಡಿವಾಳೇಶ್ವರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ ವೈ.ಜಿ. ಭಗವತಿ, ಅಶೋಕ ಅರ್ಕಸಾಲಿ, ಕೆ.ಬಿ. ಪಾಟೀಲ, ತಾಲೂಕು ನೌಕರ ಸಂಘದ ಅಧ್ಯಕ್ಷ ಜಗದೀಶ ವಿರಕ್ತಮಠ, ಬಿಇಒ ಉಮಾದೇವಿ ಬಸಾಪುರ, ತಾಪಂ ಇಒ ಪಿ.ವೈ. ಸಾವಂತ್, ಮಂಜುನಾಥ ಮುರಳ್ಳಿ, ಸಿ.ಎಸ್. ಗ್ಯಾನಪ್ಪನವರ, ಎಂ.ವೈ. ಅಂಚಟಗೇರಿ, ಡಾ. ಮಹೇಶ ಹೊರಕೇರಿ, ಮಂಜುನಾಥ ಅಂಗಡಿ, ನವೀನ ಗೋಳೇರ್ ರಫೀಕ್ ಸುಂಕದ ಸೇರಿದಂತೆ ಕಸಾಪ ಸದಸ್ಯರು, ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಬಳಿಕ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು.