ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ಕನ್ನಡ ಭಾಷೆಗೆ ಅಳಿವಿಲ್ಲ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ. ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ 1ಕ್ಕೆ ಸೀಮಿತವಾಗದೆ ವರ್ಷಪೂರ್ತಿ ಆಚರಿಸುವಂತಾಗಬೇಕು. ಕನ್ನಡಿಗರು ಕನ್ನಡ ಭಾಷೆ, ನಾಡು, ಸಂಸ್ಕೃತಿಯನ್ನು ನನ್ನದು ಎಂಬ ಭಾವನೆಯಿಂದ ನೋಡಿದಾಗ ಮಾತ್ರ ಕನ್ನಡವನ್ನು ಶ್ರೀಮಂತಗೊಳಿಸಲು ಸಾಧ್ಯ ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ.ಜಯಚಂದ್ರ ಹೇಳಿದರು.ಅವರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದ ವತಿಯಿಂದ ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದ ಆವರಣದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಭಾರತ ಭೂಪಟದಲ್ಲಿ ಕನ್ನಡ ನಾಡಿಗೆ ತನ್ನದೇ ಆದ ಇತಿಹಾಸವಿದೆ. ಇಂತಹ ಕನ್ನಡ ನಾಡನ್ನು ರಕ್ಷಣೆ ಮಾಡುವ, ಕನ್ನಡ ನಾಡನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. 1973ರಲ್ಲಿ ದೇವರಾಜ ಅರಸು ಅವರು ಕರ್ನಾಟಕ ಎಂದು ಮರು ನಾಮಕರಣ ಮಾಡಿದರು. ಇಂದಿಗೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ಕಳೆಯಿತು. ಈ ಹಿನ್ನೆಲೆಯಲ್ಲಿ ಅತ್ಯಂತ ಸಂತೋಷದಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ ಎಂದರು.
ಶಿರಾ ನಗರದಲ್ಲಿ ಈಗಾಗಲೇ ಕನ್ನಡ ಭವನ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಿರ್ಮಾಣವಾಗಿದೆ. ಆದರೆ ಅದು ಕಾಲೇಜಿಗೆ ಒಳಪಡುವುದರಿಂದ ನಗರದ ಹಳೇ ತಾಲೂಕು ಕಚೇರಿ ಮುಂಭಾಗ ಕನ್ನಡ ಭವನ ಮತ್ತು ಗಾಂಧಿ ಭವನ ನಿರ್ಮಿಸಲಾಗುವುದು. ಕನ್ನಡ ಭವನಕ್ಕೆ 50 ಲಕ್ಷ ರು., ಗಾಂಧಿ ಭವನಕ್ಕೆ 35 ಲಕ್ಷ ರು.ಗಳ ಅನುದಾನ ನೀಡಲಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯ ಚಿದಾನಂದ್ ಗೌಡ, ತಹಸೀಲ್ದಾರ್ ಸಚ್ಚಿದಾನಂದ ಕುಚನೂರು ಮಾತನಾಡಿ, ಕರ್ನಾಟಕದ ಎಲ್ಲಾ ಭಾಗದ ಜನತೆಯಲ್ಲಿ ನಾವೆಲ್ಲಾ ಒಂದು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಶಿರಾ ತಾಲೂಕು ಕರ್ನಾಟಕದ ಮಧ್ಯಭಾಗದಲ್ಲಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಣ, ಕೈಗಾರಿಕೆ, ರಸ್ತೆ ಸಂರ್ಪಕ ಎಲ್ಲದರಲ್ಲೂ ಅಭಿವೃದ್ಧಿ ಹೊಂದಿ ಶಕ್ತಿ ಕೇಂದ್ರವಾಗಲಿದೆ ಎಂದರು.
20 ಸಾಧಕರಿಗೆ ರಾಜ್ಯೊತ್ಸವ ಪ್ರಶಸ್ತಿ:ಕಾರ್ಯಕ್ರಮದಲ್ಲಿ ತಾಲೂಕು ಆಡಳಿತದಿಂದ 20 ಮಂದಿ ವಿವಿಧ ಕ್ಷೇತ್ರಗಳ ಸಾಧಕರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಎಸ್ಎಸ್ಎಲ್ ಸಿ, ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮೂದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಸದಸ್ಯರಾದ ಎಸ್.ಎಲ್.ರಂಗನಾಥ್, ರಫಿವುಲ್ಲಾ, ಅಜಯ್ಕುಮಾರ್, ಫಯಾಜ್ ಖಾನ್, ಬಿ.ಎಂ.ರಾಧಾಕೃಷ್ಣ, ಆಶ್ರಯ ಸಮಿತಿ ಸದಸ್ಯ ನೂರುದ್ದೀನ್, ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ, ಮಾಜಿ ಅಧ್ಯಕ್ಷ ಡಾ.ಬಿ.ಗೋವಿಂದಪ್ಪ, ಕಸಬಾ ಕಸಾಪ ಅಧ್ಯಕ್ಷೆ ರೇಣುಕಮ್ಮ, ಮಾಜಿ ತಾಪಂ ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ನಗರಸಭೆ ಪೌರಾಯುಕ್ತ ರುದ್ರೇಶ್, ಬಿಇಒ ಸಿ.ಎನ್.ಕೃಷ್ಣಪ್ಪ, ತಾಪಂ ಇಒ ಹರೀಶ್, ಡಿವೈಎಸ್ಪಿ ಬಿ.ಕೆ.ಶೇಖರ್, ಮುಖಂಡರಾದ ಫರ್ಮಾನ್, ಖಾದರ್, ಮಜರ್ ಸಾಬ್ ಸೇರಿ ಹಲವರು ಹಾಜರಿದ್ದರು.