ಸಾರಾಂಶ
- 20ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಎಚ್ ಎಂ ಮರುರು ಸಿದ್ದಯ್ಯ ಪಟೇಲ್ ಗೆ ಅಧಿಕೃತ ಆಹ್ವಾನ
ಕನ್ನಡಪ್ರಭ ವಾರ್ತೆ, ತರೀಕೆರೆಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಪ್ರಬುದ್ಧತೆ ಇದೆ ಎಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದ್ದಾರೆ.
ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕಸಾಪ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ 20ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ, ಹಿರಿಯ ಸಂಶೋಧಕ ಮರುಳಸಿದ್ದಯ್ಯ ಪಟೇಲ್ ಅವರಿಗೆ ಅಧಿಕೃತ ಆಹ್ವಾನ ನೀಡುವ ಸಮಾರಂಭದಲ್ಲಿ ಮಾತನಾಡಿದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಗೊರು ಚನ್ನಬಸಪ್ಪ ಈ ನೆಲದವರು. ಜಿಲ್ಲೆಯಲ್ಲಿ ಈ ವರೆಗೆ 19 ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿವೆ. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಬಹುದೊಡ್ಡ ಇತಿಹಾಸ ಹೊಂದಿದೆ ಎಂದರು.ಮಾರ್ಚ್ 7 ಮತ್ತು 8 ರಿಂದ ತರೀಕೆರೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆಯಲಿರುವ ಚಿಕ್ಕಮಗಳೂರು 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿಗಳು, ಹಿರಿಯ ಸಂಶೋಧಕ ರಂಗೇನಹಳ್ಳಿ ಡಾ.ಎಚ್.ಎಂ.
ಮರುಳಸಿದ್ದಯ್ಯ ಪಟೇಲ್ ಆಯ್ಕೆಯಾಗಿರುವುದು ಸಂತೋಷ ಮತ್ತು ಹೆಮ್ಮೆಯ ಸಂಗತಿ. ಸಮ್ಮೇಳನಾಧ್ಯಕ್ಷರ ಅಧಿಕೃತ ಆಹ್ವಾನ ಸಮಾರಂಭವೇ ಇಷ್ಟೊಂದು ಅದ್ಧೂರಿ, ಅರ್ಥಪೂರ್ಣವಾಗಿ ಆಯೋಜನೆಗೊಂಡಿರುವಾಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗುವುದು ನಿಶ್ಚಿತ ಎಂದು ತಿಳಿಸಿದರು. ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ, ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮಾತನಾಡಿ, ಡಾ.ಎಚ್.ಎಂ. ಮರುಳಸಿದ್ದಯ್ಯ ಪಟೇಲ್ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿರುವುದು ಎಲ್ಲರಿಗೂ ಸಂತೋಷ ತಂದಿದೆ. ಎಲ್ಲರೂ ಉತ್ಸುಕರಾಗಿದ್ದೇವೆ, ಸಮ್ಮೇಳನ ಯಶಸ್ವಿಯಾಗಿ ನಡೆಯಲು ನಮ್ಮ ಪೂರ್ಣ ಸಹಕಾರ ಇದೆ. ಕನ್ನಡಕ್ಕೆ ಎರಡೂ ಸಾವಿರ ವರ್ಷಗಳಷ್ಟು ಇತಿಹಾಸವಿದೆ. ಕನ್ನಡವನ್ನು ಉಳಿಸಿ, ಬೆಳೆಸಲು ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿ ನಮ್ಮ ಊರಿನ ಸಾಹಿತಿ, ಹಿರಿಯ ಸಂಶೋಧಕ ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್ 20ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಮ್ಮೇಳನಾಧ್ಯಕ್ಷ ರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಫಲತಾಂಬೂಲ ನೀಡಿ ಸನ್ಮಾನಿಸಿ, ಅಧಿಕೃತ ಆಹ್ವಾನ ನೀಡಲಾಯಿತು.ಜಿಲ್ಲಾ ಕಸಾಪ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್, ತಾ.ಕಸಾಪ ಅಧ್ಯಕ್ಷರವಿ ದಳವಾಯಿ, ಸಮ್ಮೇಳನ ಸ್ವಾಗತ ಸಮಿತಿ ಕೋಶಾಧ್ಯಕ್ಷ ಮಿಲ್ಟ್ರಿ ಶ್ರೀನಿವಾಸ್, ಲೇಖಕ ತ.ಮ.ದೇವಾನಂದ್, ಮಹಿಳಾ ಘಟಕ ಅಧ್ಯಕ್ಷೆ ಸುನಿತಾ ಕಿರಣ್, ಜಿಲ್ಲಾ ಕನ್ನಡ ಜಾನಪದ ಜಿಲ್ಲಾದ್ಯಕ್ಷೆ ವಿಶಾಲಾಕ್ಷಮ್ಮ, ಸ್ಮರಣ ಸಂಚಿಕೆ ಸಂಪಾದಕರಾದ ಉಮಾ ಪ್ರಕಾಶ್, ಕೆ.ಎಸ್.ಶಿವಣ್ಣ, ಸೈಯದ್ ಮುಹೀಬುಲ್ಲಾ, ನವೀನ್ ಪೆನ್ನಯ್ಯ, ಜಯಸ್ವಾಮಿ, ಟಿ.ಎನ್.ಜಗದೀಶ್, ಚಿಕ್ಕ ಮಗಳೂರು ಕಸಾಪ ಅಧ್ಯಕ್ಷ ದಯಾನಂದ್, ನಾಟಕ ಅಕಾಡಮಿ ಸದಸ್ಯರಾದ ಬಿ.ಎಸ್.ಸೋಮಶೇಖರ್, ಅರ್ಚನಾ, ರಶ್ಮಿ, ಮತ್ತಿತರರು ಭಾಗವಹಿಸಿದ್ದರು.10ಕೆಟಿಆರ್.ಕೆ.1ಃ
ತರೀಕೆರೆ ಸಮೀಪದ ರಂಗೇನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ 20ನೇ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಮರುಳಸಿದ್ದಯ್ಯ ಪಟೇಲ್ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾ.ಕಸಾಪ ಅಧ್ಯಕ್ಷ ರವಿದಳವಾಯಿ, ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಇದ್ದರು.