ನವೆಂಬರ್‌ಗೆ ಸೀಮಿತವಾಗದಿರಲಿ ಕನ್ನಡದ ಪ್ರೀತಿ

| Published : Nov 02 2025, 03:15 AM IST

ಸಾರಾಂಶ

ಕರ್ನಾಟಕ ಏಕೀಕರಣ ಚಳವಳಿ ಹುಟ್ಟುಹಾಕಿದ್ದು ಧಾರವಾಡ ಜಿಲ್ಲೆ. ಆಲೂರ ವೆಂಕಟರಾಯರು ಇದರ ಮೂಲ ಪುರುಷರು. ಏಕೀಕರಣ ಚಳವಳಿಯ ಪ್ರಮುಖರಾದ ರಾ.ಹ. ದೇಶಪಾಂಡೆ, ಡೆ. ಚನ್ನಬಸಪ್ಪರವರು, ಅದರಗುಂಚಿ ಶಂಕರಗೌಡ ಪಾಟೀಲರು ಹಾಗೂ ಕನ್ನಡ ಭಾಷಾ ಬೆಳವಣಿಗೆಗೆ ಕೊಡುಗೆ ನೀಡಿದ ನಾಡಿನ ಹೆಸರಾಂತ ಕವಿ, ಸಾಹಿತಿ, ಸಂಗೀತಗಾರರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ.

ಧಾರವಾಡ:

ನಾಡು, ನುಡಿಯ ಪ್ರೀತಿಯನ್ನು ಕೇವಲ ನವೆಂಬರ್‌ ತಿಂಗಳಿಗೆ ಮಾತ್ರ ಸೀಮಿತವಾಗಿಸದೆ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ಕನ್ನಡದಲ್ಲಿಯೇ ವ್ಯವಹರಿಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ ಎಂದು ಪಣತೊಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಜಿಲ್ಲಾಡಳಿತ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಕರ್ನಾಟಕ ಏಕೀಕರಣ ಚಳವಳಿ ಹುಟ್ಟುಹಾಕಿದ್ದು ಧಾರವಾಡ ಜಿಲ್ಲೆ. ಆಲೂರ ವೆಂಕಟರಾಯರು ಇದರ ಮೂಲ ಪುರುಷರು. ಏಕೀಕರಣ ಚಳವಳಿಯ ಪ್ರಮುಖರಾದ ರಾ.ಹ. ದೇಶಪಾಂಡೆ, ಡೆ. ಚನ್ನಬಸಪ್ಪರವರು, ಅದರಗುಂಚಿ ಶಂಕರಗೌಡ ಪಾಟೀಲರು ಹಾಗೂ ಕನ್ನಡ ಭಾಷಾ ಬೆಳವಣಿಗೆಗೆ ಕೊಡುಗೆ ನೀಡಿದ ನಾಡಿನ ಹೆಸರಾಂತ ಕವಿ, ಸಾಹಿತಿ, ಸಂಗೀತಗಾರರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನಾರದ ಜಿಲ್ಲೆಯ ಶಿಕ್ಷಣ ತಜ್ಞ ಹಾಗೂ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ. ರವೀಂದ್ರ ಕೋರಿಶೆಟ್ಟರ್‌, ಚಿತ್ರಕಲಾವಿದ ಬಿ. ಮಾರುತಿ ಅವರಿಗೆ ಜಿಲ್ಲೆಯ ಪರವಾಗಿ ಅಭಿನಂದನೆಯನ್ನು ಸಚಿವರು ತಿಳಿಸಿದರು.

ವಿಪ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ, ಜಿಪಂ ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ ಆರ್ಯ, ಐಎಎಸ್ ಪ್ರೊಬೆಷನರಿ ಅಧಿಕಾರಿ ರೀತಿಕಾ ವರ್ಮಾ ಸೇರಿದಂತೆ ಅನೇಕರಿದ್ದರು. ಪಥ ಸಂಚಲನ...

ಜಿಲ್ಲಾ ಶಸಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್, ಪೊಲೀಸ್ ಆಯುಕ್ತರ ಮಹಿಳಾ ತಂಡ, ಗೃಹರಕ್ಷಕ ದಳ, ಅಗ್ನಿಶಾಮಕ ಇಲಾಖೆ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಎನ್‌ಸಿಸಿ, 24 ಬಟಾಲಿಯನ್, ವಿದ್ಯಾರಣ್ಯ ಹೈಸ್ಕೂಲ್, ಆದರ್ಶ ಹೈಸ್ಕೂಲ್, ಪ್ರಸೆಂಟೇಷನ್, ಸೆಂಟ್ ಜೋಸೆಪ್ಸ್, ಕೆಎನ್‌ಕೆ ಬಾಲಕಿಯರ ಪ್ರೌಢಶಾಲೆ, ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆ ವತಿಯಿಂದ ನಾಯಕರ ಪಥ ಸಂಚಲನ ನಡೆಯಿತು. ಇದರಲ್ಲಿ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆ ಪ್ರಥಮ, ಸಿನಿಯರ್ ಎನ್‌ಸಿಸಿ 24 ಬಟಾಲಿಯನ್ ದ್ವಿತೀಯ, ಸಮಾಜ ಕಲ್ಯಾಣ ಇಲಾಖೆ ಬಾಲಕಿಯರ 2ನೇ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.ಸಾಂಸ್ಕೃತಿಕ ಕಾರ್ಯಕ್ರಮ

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಸತಿ ನಿಲಯದ ವಿದ್ಯಾರ್ಥಿನಿಯರ ಕಲಾತಂಡ, ಶಾಲಾ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕೈ ಕೊಟ್ಟ ಕರೆಂಟ್‌....

ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಂತ್ರಿಕ ಕಾರಣಗಳಿಂದ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿ ಕಾರ್ಯಕ್ರಮ ವಿಳಂಬವಾಯಿತು. ಒಂದು ತಿಂಗಳ ಮೊದಲೇ ಪೂರ್ವಭಾವಿ ಸಭೆ ಜರುಗಿಸಿ, ಪಾಲಿಕೆಗೆ ಕಾರ್ಯಕ್ರಮದ ವೇದಿಕೆ, ಅಲಂಕಾರ ಹಾಗೂ ಕಾರ್ಯಕ್ರಮದಲ್ಲಿ ಧ್ವನಿವರ್ಧಕ, ವೇದಿಕೆ ಸಿದ್ಧತೆ ಜವಾಬ್ದಾರಿ ನೀಡಲಾಗಿತ್ತು. ಆದರೂ ತಾಂತ್ರಿಕ ಕಾರಣಗಳಿಂದ ವಿದ್ಯುತ್ ಪೂರೈಕೆ ಸಮಸ್ಯೆಯಾಗಿದ್ದು, ಪರಿಶೀಲಿಸಿ ಸಂಬಂಧಿಸಿದ ಪಾಲಿಕೆ ಅಧಿಕಾರಿ ಮತ್ತು ಅಭಿಯಂತರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.