ಸಾರಾಂಶ
ಗೋಕಾಕ: ರಾಜ್ಯ ಸರ್ಕಾರದ ಆದೇಶದನ್ವಯ ನಗರದ ಅಂಗಡಿ, ಮುಂಗಟ್ಟುಗಳ ಮೇಲೆ ಅಳವಡಿಸಿರುವ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕ ಮಂಗಳವಾರ ನಗರದಲ್ಲಿ ಜಾಗೃತಿ ಜಾಥಾ ಹಮ್ಮಿಕೊಂಡು ಅಂಗಡಿ, ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಅಳವಡಿಸಿದ ಅಂಗಡಿ ಮಾಲೀಕರಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಗೋಕಾಕ
ರಾಜ್ಯ ಸರ್ಕಾರದ ಆದೇಶದನ್ವಯ ನಗರದ ಅಂಗಡಿ, ಮುಂಗಟ್ಟುಗಳ ಮೇಲೆ ಅಳವಡಿಸಿರುವ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕ ಮಂಗಳವಾರ ನಗರದಲ್ಲಿ ಜಾಗೃತಿ ಜಾಥಾ ಹಮ್ಮಿಕೊಂಡು ಅಂಗಡಿ, ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಅಳವಡಿಸಿದ ಅಂಗಡಿ ಮಾಲೀಕರಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಅಂಗಡಿ, ಮುಂಗಟ್ಟು ಮೇಲೆ ಕನ್ನಡ ನಾಮಫಲಕ ಅಳವಡಿಸುವಂತೆ ಸರ್ಕಾರ ಕಾನೂನು ರೂಪಿಸಿದ್ದು, ನಗರದ ಎಲ್ಲಾ ಅಂಗಡಿಕಾರರು ತಮ್ಮ ಅಂಗಡಿ, ಆಸ್ಪತ್ರೆ, ಹೋಟೆಲ್ಗಳ ಮೇಲೆ ಮಾ.15ರ ಒಳಗಾಗಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕು. ಈಗಾಗಲೇ ಗೋಕಾಕ್ ನಗರಸಭೆ ವತಿಯಿಂದ ಹಲವು ಬಾರಿ ನಗರದಲ್ಲಿ ಸಂಚರಿಸಿ ನಮಫಲಕಗಳಲ್ಲಿ ಕನ್ನಡ ಭಾಷೆ ಬಳಸದ ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಿ, ನಾಮಫಲಕಗಳನ್ನು ತೆರವುಗೊಳಿಸಿ ಎಚ್ಚರಿಕೆ ನೀಡಿದ್ದಾರೆ. ನಗರಸಭೆಯ ಎಚ್ಚರಿಕೆಯಿಂದ ಹಲವಾರು ಅಂಗಡಿಕಾರರು ಕನ್ನಡ ಭಾಷೆಯ ನಾಮಫಲಕ ಅಳವಡಿಸಿ ಸಹಕರಿಸಿದ್ದಾರೆ. ಕೆಲವರು ಅಳವಡಿಸಿಲ್ಲ. ಕನ್ನಡ ನಾಮಫಲಕ ಅಳವಡಿಸದ ಅಂಗಡಿಕಾರರು ಸರ್ಕಾರದ ಆದೇಶದಂತೆ ಮಾ.15ರ ಒಳಗೆ ಅಳವಡಿಸಬೇಕು ಇಲ್ಲದಿದ್ದರೆ ಅಂತಹ ನಾಮಫಲಕಗಳನ್ನು ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಕರವೇ ಸಾದಿಕ್ ಹಲ್ಯಾಳ, ದೀಪಕ ಹಂಜಿ, ಪಪ್ಪು ಹಂದಿಗುಂದ, ಹನೀಫ್ ಸನದಿ, ಬಸವರಾಜ ಗಾಡಿವಡ್ಡರ, ಅಶೋಕ ಬಂಡಿವಡ್ಡರ, ಮಹಾದೇವ ಮಕಳಗೇರಿ, ಮಲ್ಲು ಸಂಪಗಾರ, ಮಾರುತಿ ಬಂಡಿವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.