ಸಾರಾಂಶ
ಬೆಂಗಳೂರು : ಆದರ್ಶ ಸುಗಮ ಸಂಗೀತ ಅಕಾಡೆಮಿಯ ವತಿಯಿಂದ ನೀಡಲಾಗುವ ಕನ್ನಡ ನಿತ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಸುಗಮ ಸಂಗೀತ ಕಲಾವಿದೆ ಮಾಲತಿ ಶರ್ಮ ಅವರಿಗೆ ನೀಡಿ ಗೌರವಿಸಲಾಯಿತು.
ಅಕಾಡೆಮಿಯು ನಗರದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕರ್ನಾಟಕ ಸುಗಮಸಂಗೀತ ಪರಿಷತ್ತಿನ ಅಧ್ಯಕ್ಷ ವೈ ಕೆ ಮುದ್ದುಕೃಷ್ಣ ಅವರು ಉದ್ಘಾಟಿಸಿ ಮಾತನಾಡಿದರು. ಕಳೆದ ಮೂವತ್ತು ವರ್ಷಗಳಿಂದ ಆದರ್ಶ ಸುಗಮಸಂಗೀತ ಅಕಾಡೆಮಿಯ ಕಾರ್ಯಕ್ರಮವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ, ಅಕಾಡೆಮಿ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ರಾಜ್ಯಾದ್ಯಂತ ಉತ್ತಮ ಹೆಸರು ಗಳಿಸಿರುವ ಸೇವೆ ಶ್ಲಾಘನೀಯ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಖ್ಯಾತ ಗಾಯಕಿ ಮಾಲತಿ ಶರ್ಮ ಅವರು, ಸ್ವತಃ ಪ್ರಖ್ಯಾತ ಗಾಯಕರಾದ ಸಿ. ಅಶ್ವಥ್ ಅವರೇ ಉದ್ಘಾಟಿಸಿದ ಆದರ್ಶ ಸುಗಮಸಂಗೀತ ಅಕಾಡೆಮಿಯು ಇಂದು ಹೆಮ್ಮರವಾಗಿ ಬೆಳೆದಿದೆ. ನನಗೆ ನೀಡಿರುವ ಕನ್ನಡ ನಿತ್ಯೋತ್ಸವ ಪ್ರಶಸ್ತಿಯು ಇನ್ನೂ ಹೆಚ್ಚು ಸೇವೆ ಸಲ್ಲಿಸಲು ಸ್ಪೂರ್ತಿ ನೀಡಿದೆ. ಕಿಕ್ಕೇರಿ ಅವರು ಸುಗಮಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅನನ್ಯವಾದದ್ದು ಹಾಗೂ ಮಾದರಿಯಾಗಿದೆ ಎಂದರು.
ಡಾ.ಕಿಕ್ಕೇರಿ ಕೃಷ್ಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು, ಗಾಯಕ ನಗರ ಶ್ರೀನಿವಾಸ ಉಡುಪ, ಡಾ.ಅಪ್ಪಗೆರೆ ತಿಮ್ಮರಾಜು ಅವರು ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಖ್ಯಾತ ಕಲಾವಿದರಾದ ಜಯರಾಂ, ಜಯಕುಮಾರ್, ಸುದರ್ಶನ್, ಕಾರ್ತಿಕ್, ಶಿವಶಂಕರ್, ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಅಕಾಡೆಮಿಯ ವಿದ್ಯಾರ್ಥಿಗಳು ಸುಗಮಸಂಗೀತ ಕಾರ್ಯಕ್ರಮ ಹಾಗೂ ವಾದ್ಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.