ಸಾರಾಂಶ
ಕನ್ನಡ ಭಾಷೆ ರಕ್ಷಣೆ ಮತ್ತು ಬೆಳವಣಿಗೆಯಾಗಬೇಕಿದೆ. ನಾಡಿನಲ್ಲಿ ಕೆಲವೆಡೆ ಹೋರಾಟ, ಚಳುವಳಿಗಳು ನಡೆಯುತ್ತಲೇ ಇವೆ. ಆದರೆ ಬಹುಪಾಲು ಕನ್ನಡಿಗರು ನಿರಭಿಮಾನ ಶೂನ್ಯರಾಗಿ ಅವುಗಳನ್ನು ನೋಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಕನ್ನಡ ಭಾಷೆ ರಕ್ಷಣೆ ಮತ್ತು ಬೆಳವಣಿಗೆಯಾಗಬೇಕಿದೆ. ನಾಡಿನಲ್ಲಿ ಕೆಲವೆಡೆ ಹೋರಾಟ, ಚಳುವಳಿಗಳು ನಡೆಯುತ್ತಲೇ ಇವೆ. ಆದರೆ ಬಹುಪಾಲು ಕನ್ನಡಿಗರು ನಿರಭಿಮಾನ ಶೂನ್ಯರಾಗಿ ಅವುಗಳನ್ನು ನೋಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹೇಳಿದರು.ನಗರದ ಗುಂಚಿ ವೃತ್ತದ ಪದ್ಮಶ್ರೀ ಬಿ.ಶಿವಮೂರ್ತಿ ಶಾಸ್ತ್ರಿಗಳ ಉದ್ಯಾನವನದಲ್ಲಿ ಜಿಲ್ಲಾ ಕಸಾಪ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಭಾಷಾ ವ್ಯಾಮೋಹ, ಭಾಷಾಂತರ ಹಾಗೂ ಜಾಗತೀಕರಣದಂತಹ ಹಲವಾರು ಸವಾಲುಗಳ ನಡುವೆ ಕನ್ನಡ ನಲುಗುತ್ತಿದೆ ಎಂದರು.
ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ವಿಶ್ವವಿದ್ಯಾನಿಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆಯ ಫಲಶ್ರುತಿ ಪಠ್ಯಪುಸ್ತಕಗಳಲ್ಲಿ ಅಳವಡಿಕೆಯಾಗುತ್ತಿಲ್ಲ. ವಿಜ್ಞಾನ ವಿಷಯದ ಸಂಶೋಧನೆಗಳು ಕನ್ನಡ ಭಾಷೆಯಲ್ಲಿ ನಡೆಯದೆ ಇರುವುದರಿಂದ ಕನ್ನಡವನ್ನು ಬೆಳೆಸಲು ಹೇಗೆ ಸಾಧ್ಯವಾಗುತ್ತದೆ. ಕನ್ನಡ ಭಾಷಾ ಬೆಳವಣಿಗೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸಬೇಕು ಎಂದರು.ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದ ಪದ್ಮಶ್ರೀ ಪುರಸ್ಕೃತ ಬಿ.ಶಿವಮೂರ್ತಿ ಶಾಸ್ತ್ರಿಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಕಸಾಪ ತಾಲ್ಲೂಕು ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಜಿ.ಹೆಚ್.ಮಹದೇವಪ್ಪ, ನಟರಾಜ್, ಚಾಂದು, ಗಾಂಧಿವಾದಿ ಎಂ.ಬಸವಯ್ಯ, ನಗರಪಾಲಿಕೆ ಸದಸ್ಯ ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.