ಲಕ್ಷ್ಮೀನರಸಿಂಹ ಯುವಕರ ಸಂಘದಿಂದ ಕನ್ನಡ ರಾಜ್ಯೋತ್ಸವ

| Published : Nov 19 2024, 12:50 AM IST

ಸಾರಾಂಶ

೬೯ನೇ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ೨೧ರಿಂದ ನಾಲ್ಕು ದಿನ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಉತ್ಸಾಹದಿಂದ ನಾಡಹಬ್ಬದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು ವಿನಂತಿಸಿದರು. ಹೊಳೆನರಸೀಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎಚ್.ವಿ.ಪುಟ್ಟರಾಜು ಮಾಹಿತಿ । 21ರಿಂದ 4 ದಿನ ಆಚರಣೆ

ಹೊಳೆನರಸೀಪುರ: ಪಟ್ಟಣದಲ್ಲಿ ಶ್ರೀ ಲಕ್ಷ್ಮೀನರಸಿಂಹ ಯುವಕರ ಸಂಘದ ವತಿಯಿಂದ ೬೯ನೇ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ೨೧ರಿಂದ ನಾಲ್ಕು ದಿನ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಉತ್ಸಾಹದಿಂದ ನಾಡಹಬ್ಬದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕಲಾವಿದರನ್ನು ಪ್ರೋತ್ಸಾಹಿಸುವ ಜತೆಗೆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು ವಿನಂತಿಸಿದರು.

ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯೋಜನೆ ಮಾಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನ. ೨೧ರ ಗುರುವಾರ ಸಂಜೆ ಕನ್ನಡ ಜೀ ವಾಹಿನಿಯ ಸರಿಗಮಪ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮವನ್ನು ಬಸವನಗುಡಿ ಬೀದಿಯಲ್ಲಿ ನಿರ್ಮಿಸುತ್ತಿರುವ ಪುನೀತ್ ರಾಜ್‌ಕುಮಾರ್ ವೇದಿಕೆಯಲ್ಲಿ ನಡೆಸಲಾಗುತ್ತದೆ. ನ.೨೨ ರ ಶುಕ್ರವಾರ ಸಂಜೆ ಹೊಳೆನರಸೀಪುರದ ಶ್ರೀ ಜೈ ವೀರಹನುಮಾನ್ ದೊಡ್ಡಗರಡಿಯ ಅಧ್ಯಕ್ಷರು, ಸದಸ್ಯರ ಸಹಕಾರದಲ್ಲಿ ೩೫ ಜೊತೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯನ್ನು (ಪುರುಷರ ವಿಭಾಗ ಮತ್ತು ಮಹಿಳಾ ವಿಭಾಗ) ಬಯಲು ರಂಗಮಂದಿರ ಮೈಧಾನದಲ್ಲಿ ನಿರ್ಮಿಸಿರುವ ರಣಧೀರ ಕಂಠೀರವ ವೇದಿಕೆಯಲ್ಲಿ ನಡೆಸಲಾಗುತ್ತದೆ ಎಂದು ಹೇಳಿದರು.

ನ.೨೩ ರ ಶನಿವಾರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಸ್ಥಾನದ ಮುಂಭಾಗ ನಿರ್ಮಿಸಿರುವ ರಾಷ್ಟ್ರಕವಿ ಕುವೆಂಪು ವೇದಿಕೆಯಲ್ಲಿ ಸುಗಮ ಸಂಗೀತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ನಡೆಯಲಿದೆ. ನ. ೨೪ರ ಭಾನುವಾರ ಸಂಜೆ ರಥದಲ್ಲಿ ತಾಯಿ ಶ್ರೀ ಭುವನೇಶ್ವರಿಯ ಉತ್ಸವವು ವಿವಿಧ ಜಾನಪದ ಕಲಾಮೇಳ ಹಾಗೂ ಇತರೆ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ವೈಭವದಿಂದ ನಡೆಸಲಾಗುತ್ತದೆ. ಆದ್ದರಿಂದ ನಾಲ್ಕು ದಿನಗಳು ನಡೆಯುವ ನಾಡಹಬ್ಬದಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದರು.

ಪುರಸಭೆ ಮಾಜಿ ಸದಸ್ಯ ಓಲೆ ಕುಮಾರ ಎಚ್.ಜೆ., ಪೈಲ್ವಾನ್ ಧನಂಜಯ, ಕಾಂಗ್ರೆಸ್ ಪಕ್ಷದ ಜಿಲ್ಲಾ ಹಿಂದುಳಿದ ವಿಭಾಗದ ಪ್ರಧಾನ ಕಾರ್ಯದರ್ಶಿ ಉಮೇಶ್ ಲಕ್ಕೇಗೌಡ, ಮುಖಂಡರಾದ ಕಾರ್ತಿಕ್ ಹಾಗೂ ಭರತ್ ಇದ್ದರು.