ಕನ್ನಡಪ್ರಭ ವಾರ್ತೆ ಮೈಸೂರು

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯನ್ನು ಸೋಮವಾರ ಜಿಲ್ಲಾಡಳಿತ ವತಿಯಿಂದ ಸ್ವಾಗತಿಸಿ, ಮುಂದಿನ ಪಯಣಕ್ಕೆ ಬೀಳ್ಕೊಡಲಾಯಿತು.ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಜಿಲ್ಲಾಡಳಿತದ ವತಿಯಿಂದ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಲಾಯಿತು. ನಂತರ ಡೊಳ್ಳು ಕುಣಿತದೊಂದಿಗೆ ಮುಂದಿನ ಪಯಣಕ್ಕೆ ರಥಯಾತ್ರೆಗೆ ಬೀಳ್ಕೊಡಲಾಯಿತು.ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ಉಪ ಆಯುಕ್ತ ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷರಾದ ಡಾ.ವೈ.ಡಿ. ರಾಜಣ್ಣ, ಎಂ. ಚಂದ್ರಶೇಖರ್, ಕನ್ನಡಪರ ಸಂಘಟನೆಗಳ ಮುಖಂಡರಾದ ಮೋಹನ್ ಕುಮಾರ್ ಗೌಡ, ರಾಜಶೇಖರ ಕದಂಬ, ಡೈರಿ ವೆಂಕಟೇಶ್, ಕೆ. ಮಹೇಶ್, ಜಾಕೀರ್ ಹುಸೇನ್, ಲತಾ ಮೋಹನ್ ಮೊದಲಾದವರು ಇದ್ದರು.