ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೨ನೇ ಸಂಸ್ಥಾಪನಾ ದಿನಾಚರಣೆ ತಾಲೂಕಿನ ಪ್ರಧಾನ ಕಾರ್ಯದರ್ಶಿ ನಿವಾಸ ಸರೋಜಿನಿಯಲ್ಲಿ ನಡೆಯಿತು.
ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ೧೧೨ನೇ ಸಂಸ್ಥಾಪನಾ ದಿನಾಚರಣೆ ತಾಲೂಕಿನ ಪ್ರಧಾನ ಕಾರ್ಯದರ್ಶಿ ನಿವಾಸ ಸರೋಜಿನಿಯಲ್ಲಿ ನಡೆಯಿತು.
ಸಂಸ್ಥಾಪನಾ ದಿನಾಚರಣೆಯ ಸಂದೇಶವನ್ನು ಖ್ಯಾತ ಸಾಹಿತಿ ಹಾಗೂ ಪ್ರಕಾಶಕ ಕಲ್ಲಚ್ಚು ಮಹೇಶ ನಾಯಕ್ ನೀಡಿ, ದ.ಕ.ದಲ್ಲಿ ಹಲವಾರು ಭಾಷೆಗಳು ಇದ್ದರೂ ಕನ್ನಡಕ್ಕಾಗಿ ಹೋರಾಟ ಮಾಡುವ ಅಗತ್ಯ ಇಲ್ಲಿನ ಕನ್ನಡಿಗರಿಗೆ ಬರಲಿಲ್ಲ ಎನ್ನುವುದು ಹೆಮ್ಮೆಯ ವಿಷಯ. ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಇನ್ನಿತರ ಕನ್ನಡ ಪ್ರೇಮಿಗಳ ಪ್ರಯತ್ನದ ಫಲವಾಗಿ ಸ್ವಾಯತ್ತ ಸಂಸ್ಥೆಯಾಗಿ ರೂಪುತಾಳಿದ ರಾಜ್ಯ ಕಸಾಪ ಇಂದು ಆರ್ಥಿಕವಾಗಿ ಸಬಲವಾಗಿರುವ ಸಂಸ್ಥೆಯಾದರೂ ಇದೀಗ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಹ ರೀತಿಯಲ್ಲಿ ಕಪ್ಪುಚುಕ್ಕೆ ಬಿದ್ದಿದೆ ಎನ್ನುವುದು ವಿಷಾದಕರ. ಅದನ್ನೆಲ್ಲವನ್ನೂ ಮೀರಿಮುಂದೆ ಇದು ಸಮರ್ಥವಾಗಿ ಬೆಳೆಯುವಂತಾಗಬೇಕು ಎನ್ನುವುದೇ ನಮ್ಮೆಲ್ಲರ ಆಶಯ ಎಂದರು.ರಾಜ್ಯ ಮಟ್ಟದಲ್ಲಿ ನಡೆಯುವ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರು ಕಡೆಗಣಿಸಲ್ಪಡುತ್ತಿರುವುದು ನೋವಿನ ವಿಚಾರವಾಗಿದೆ ಎಂದರು.ತಾಲೂಕು ಅಧ್ಯಕ್ಷ ಡಾ.ಮಂಜುನಾಥ ರೇವಣಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಸನತ್ ಕುಮಾರ್ ಜೈನ್, ತಾಲೂಕು ಸಮಿತಿ ಮಹಿಳಾ ಪ್ರತಿನಿಧಿ ಡಾ.ಮೀನಾಕ್ಷಿ ರಾಮಚಂದ್ರ, ಡಾ.ರಾಜಶ್ರೀ, ರವೀಂದ್ರನಾಥ್, ಮುಕುಂದರಾಜ್ ಮತ್ತಿತರರು ಇದ್ದರು.
ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಮುರಲೀ ಮೋಹನ ಚೂಂತಾರು ಪ್ರಾಸ್ತಾವಿಕ ಮಾತನಾಡಿದರು. ಕೋಶಾಧಿಕಾರಿ ಸುಬ್ರಾಯ ಭಟ್ ಸ್ವಾಗತಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ ಪ್ರಸಾದ ವಂದಿಸಿದರು.