ಧಾರವಾಡ:

ನಾಡೋಜ ಡಾ. ಚನ್ನವೀರ ಕಣವಿ ಕನ್ನಡ ಕಾವ್ಯಲೋಕದ ಮುಕಟಮಣಿಯಾಗಿ ಕನ್ನಡ ಸಾರಸ್ವತಲೋಕವನ್ನು ಶ್ರೀಮಂತಗೊಳಿಸಿದ್ದಾರೆಂದು ನಾಡೋಜ ಡಾ. ಕುಂ. ವೀರಭದ್ರಪ್ಪ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಡಾ. ಚನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಕನ್ನಡ ಯುವ ಲೇಖಕರಿಗಾಗಿ ಆಯೋಜಿಸಿದ್ದ ಕಾವ್ಯ ಮತ್ತು ಕಥೆ ಸ್ಪರ್ಧೆಯ ಬಹುಮಾನ ವಿತರಣೆಯಲ್ಲಿ `ಕಣವಿ ದಂಪತಿಗಳು’ ವಿಷಯ ಕುರಿತು ಮಾತನಾಡಿದರು.

1950ರ ದಶಕದಲ್ಲಿ ಸಾಹಿತಿಗಳು, ಕವಿಗಳು ಪಟ್ಟ ಪಾಡುಗಳು ಅನೇಕ. ಆದರೆ, ಈಗಿನ ತಲೆಮಾರಿನ ಯುವ ಲೇಖಕರಿಗೆ ಅಂತಹ ಕಷ್ಟಗಳಿಲ್ಲ. ಯುವ ಲೇಖಕರಿಗೆ ಪ್ರತಿಭೆಯೆ ‘ಗಾಡ್ ಫಾದರ್’ ಆಗಬೇಕು ಎಂದ ಅವರು, ಲೇಖಕರು ಕಷ್ಟಪಟ್ಟಷ್ಟು ಅವರಿಂದ ಉತ್ಕೃಷ್ಟ ಸಾಹಿತ್ಯ ರಚಿಸಲು ಸಾಧ್ಯ. ಕಣವಿಯವರು ಬರೆದ ಸಾವಿರಾರು ಕಾವ್ಯಗಳಲ್ಲಿ ಉತ್ಕೃಷ್ಟತೆ ಇದೆ. ಬಹುಮಾನ ಬಾರದ ಕಾವ್ಯ ಹಾಗೂ ಕಥೆಗಳು ಅಲಕ್ಷಿಸದೆ ಅವೂ ಸಹ ಓದುವಂತಾಗಬೇಕು ಎಂದು ಹೇಳಿದರು.

ಸಾಹಿತಿ ಡಾ. ಜಿ.ಎಂ. ಹೆಗಡೆ, ಕಣವಿ ಹಾಗೂ ಶಿವರುದ್ರಪ್ಪನವರ ಸ್ನೇಹ ಕುರಿತು ಮಾತನಾಡಿ, ಡಾ. ಚನ್ನವೀರ ಕಣವಿ ನಾಲ್ಕು ದಶಕಗಳ ಕಾಲ ಕಾವ್ಯ ಕೃಷಿ ಮಾಡಿದ್ದಾರೆ. ಜಿ.ಎಸ್. ಶಿವರುದ್ರಪ್ಪ ಹಾಗೂ ಡಾ. ಚನ್ನವೀರ ಕಣವಿ ಸಮಕಾಲೀನರಾಗಿದ್ದರೂ ಅವರಿಬ್ಬರ ಕಾವ್ಯ ರಚನಾ ಶೈಲಿ ವಿಭಿನ್ನವಾಗಿತ್ತು. ಅವರಿಬ್ಬರ ಸ್ನೇಹ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.


ಸ್ಪರ್ಧೆಗೆ ಬಂದ ಕಾವ್ಯ ಕುರಿತು ಡಾ. ಎಂ.ಡಿ. ಒಕ್ಕುಂದ ಹಾಗೂ ಕಥಾ ಸ್ಪರ್ಧೆಗೆ ಬಂದ ಕಥೆಗಳ ಕುರಿತು ಶ್ರೀಧರ ಗಸ್ತಿ ಮಾತನಾಡಿದರು. ಡಾ. ಸುಮಿತ್ರಾ ಕಾಡದೇವರಮಠ ಕಣವಿಯವರ ಕವಿತೆ ಕುರಿತು ಹಾಡಿದರು. ಡಾ. ಶಿವಾನಂದ ಕಣವಿ ಇದ್ದರು.

ಕಾವ್ಯ ಸ್ಪರ್ಧೆಯಲ್ಲಿ ಮಣಿಕಂಠ ಗೊದಮನಿ ಮತ್ತು ರೈಹಾನಾ ಕೊಯ್ಲತ್ತಡ್ಕಮನೆ ಪ್ರಥಮ, ಯಶಸ್ವಿನಿ ಎಂ. ಎನ್. ದ್ವಿತೀಯ, ಸುರೇಶ ಹಳ್ಳಿ ತೃತೀಯ ಸ್ಥಾನ ಪಡದರೆ, ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ವಿದ್ಯಾಶ್ರೀ ಹಡಪದ ಪ್ರಥಮ, ಶರೀಫಾ ಬೇಗಂ ದ್ವಿತೀಯ ಹಾಗೂ ಶಿವಕುಮಾರ ಚೆನ್ನಪ್ಪನವರ ಹಾಗೂ ಪೃಥ್ವಿರಾಜ್ ಟಿ.ಬಿ. ತೃತೀಯ ಸ್ಥಾನ ಪಡೆದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ಡಾ. ಜಿನದತ್ತ ಅ. ಹಡಗಲಿ ವಂದಿಸಿದರು.