ಸಾರಾಂಶ
ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ: ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಧೋರಣೆ ಖಂಡಿಸಿ ನಗರದ ಪ್ರಧಾನ ಅಂಚೆ ಕಚೇರಿ ಎದುರು ಕನ್ನಡಸೇನೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ರಾಜ್ಯದಲ್ಲಿ ಕನ್ನಡ ಭಾಷೆಗೆ ಹೆಚ್ಚು ಒತ್ತು ಕೊಡುವ ಬದಲು ಬಲವಂತದಿಂದ ಹಿಂದಿ ಹೇರಿಕೆಗೊಳಿಸಿದರೆ ಕನ್ನಡ ಭಾಷೆ ಕಡೆಗಣನೆಯಾಗುತ್ತದೆ. ಕೇಂದ್ರದ ಈ ನಡೆ ತೀವ್ರ ಖಂಡನೀಯ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆ ಮಾಡುವ ನಡೆ ಸರಿಯಲ್ಲ. ಭಾರತ ಎಂದರೆ ಅನೇಕ ಭಾಷೆಗಳು, ಸಾಂಸ್ಕೃತಿಕ ಹಿನ್ನೆಲೆ, ಆಚಾರ ವಿಚಾರ ಒಳಗೊಂಡಿದೆ. ಹಿಂದಿ ಭಾಷಿಗರ ದೇಶವಲ್ಲ. ಉತ್ತರ ಭಾರತದ ಕೆಲವೇ ರಾಜ್ಯಗಳಲ್ಲಿ ಮಾತ ನಾಡುವ ಹಿಂದಿಯನ್ನು ಬಲವಂತವಾಗಿ ಹೇರಿಕೆ ಮಾಡುವ ಮೂಲಕ ದಬ್ಬಾಳಿಕೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಕಿಡಿಕಾರಿದರು.ಕೇಂದ್ರ ಸರ್ಕಾರ ನಮ್ಮ ಮೇಲೆ ಪ್ರತಿ ಹಂತದಲ್ಲಿಯೂ ಹಿಂದಿ ಹೇರುವ ಮೂಲಕ ಒತ್ತಡ ಹೇರುತ್ತಿದೆ. ಹಿಂದಿ ಬಾರದವರಿಗೆ ಕೇಂದ್ರ ಸರ್ಕಾರದ ನೌಕರಿ ಕಡೆಗಣಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಆಯಾ ಸ್ಥಳೀಯ ಪ್ರಾದೇಶಿಕ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.ದೇಶದ ಹಲವು ಉದ್ಯೋಗಗಳ ಪರೀಕ್ಷೆಯಲ್ಲಿ ಹಿಂದಿಯನ್ನು ಬಲವಂತವಾಗಿ ಹೇರಿದ್ದಾರೆ. ಈಗ ಹಿಂದಿ ದಿವಸ್ ಮೂಲಕ ನಮ್ಮ ಮೇಲೆ ಹೇರಿಕೆ ನಡೆಸುತ್ತಿದ್ದಾರೆ. ಬಲವಂತವಾಗಿ ದಬ್ಬಾಳಿಕೆ ಮಾಡಲಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಹಿಂದಿ ದಿನಾಚರಣೆ ವಿರುದ್ಧ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಕನ್ನಡ ಸೇನೆ ಸಂಘಟನಾ ಕಾರ್ಯದರ್ಶಿ ಸತೀಶ್, ಕಾರ್ಮಿಕ ಪಡೆ ಅಧ್ಯಕ್ಷ ನಿಲೇಶ್, ನಗರ ಉಪಾಧ್ಯಕ್ಷ ಹೇಮಂತ್, ಅನ್ವರ್, ಮುಖಂಡರಾದ ಸುಜಿತ್, ಜಮೀರ್, ಟೋನಿ, ಪಾಲಾಕ್ಷಿ, ದೇವರಾಜ್, ಹರೀಶ್, ಅತಿಕ್, ಕುಮಾರ್, ರಂಗನಾಥ್, ಅಶೋಕ್ ಪಾಲ್ಗೊಂಡಿದ್ದರು.
14 ಕೆಸಿಕೆಎಂ 3ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಧೋರಣೆ ಖಂಡಿಸಿ ಚಿಕ್ಕಮಗಳೂರಿನ ಪ್ರಧಾನ ಅಂಚೆ ಕಚೇರಿ ಎದುರು ಕನ್ನಡಸೇನೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.