ಕನ್ನಡ ನಾಡು-ನುಡಿ ಬೆಳವಣಿಗೆಗೆ ಒಗ್ಗಟ್ಟಾಗಬೇಕು

| Published : Nov 02 2023, 01:00 AM IST

ಕನ್ನಡ ನಾಡು-ನುಡಿ ಬೆಳವಣಿಗೆಗೆ ಒಗ್ಗಟ್ಟಾಗಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ ಸಾಗರ ದೇಶದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಕನ್ನಡಿಗರು ನೀಡಿರುವ ಕೊಡುಗೆ ಕನ್ನಡವನ್ನು ಗಟ್ಟಿಗೊಳಿಸಿದೆ. ಇದನ್ನು ಅರಿತು ನಾವು ಕೇವಲ ಕನ್ನಡ ಕಾರ್ಯಕ್ರಮದಲ್ಲಿ ಕನ್ನಡ ಅಭಿಮಾನಿಗಳಾಗದೇ ನಿರಂತರ ನೆಲ-ಜಲ- ಭಾಷೆಗಳಿಗೆ ಗೌರವ ತರುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಚೆನ್ನಮ್ಮಾಜಿ ವೃತ್ತದಲ್ಲಿ ಕೆಳದಿಯಿಂದ ಆಗಮಿಸಿದ ಕನ್ನಡಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು, ಈ ನಾಡಿನ ಭವ್ಯತೆಗೆ ಹೋರಾಟ ಮಾಡಿದ ಮಹನೀಯರ ಆದರ್ಶವನ್ನು ಪಾಲಿಸುವ ಜೊತೆಗೆ ಕನ್ನಡ ನಾಡು ನುಡಿಯ ಬೆಳವಣಿಗೆಗೆ ಒಂದಾಗಿ ಕೆಲಸ ಮಾಡೋಣ ಎಂದರು. ಕನ್ನಡ ನೆಲಜಲ, ಗಡಿ-ಭಾಷೆಯ ವಿಷಯ ಬಂದಾಗ ಪಕ್ಷ ರಾಜಕೀಯವನ್ನು ದೂರವಿಟ್ಟು ಧ್ವನಿ ಎತ್ತೋಣ. ಕರ್ನಾಟಕದ ಸುವರ್ಣ ಸಂಭ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಮುಖ್ಯಮಂತ್ರಿ ಅವರು ಕರೆ ನೀಡಿದ್ದಾರೆ. ರಂಗಕರ್ಮಿ ಚಿದಂಬರ ರಾವ್ ಜಂಬೆ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಾಗರದ ಕೀರ್ತಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ ಎಂದು ಹೇಳಿದರು. ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಮಾತನಾಡಿ, ಯುವಪೀಳಿಗೆಯಲ್ಲಿ ಕನ್ನಡಾಭಿಮಾನವನ್ನು ಬೆಳೆಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ಹೇಳಿದರು. ವಿದ್ಯಾರಣ್ಯ ಯುವಕ ಸಂಘದ ಅಧ್ಯಕ್ಷ ಪ್ರದೀಪ್ ಆಚಾರಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರು, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಪೌರಾಯುಕ್ತ ಎಚ್.ಕೆ. ನಾಗಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿ.ಟಿ.ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು. ಅನಂತರ ಕನ್ನಡಜ್ಯೋತಿಯ ಮೆರವಣಿಗೆಯು ವಿವಿಧ ಇಲಾಖೆ ಮತ್ತು ಶಾಲೆಗಳ ಆಕರ್ಷಕ ಸ್ತಬ್ಧಚಿತ್ರಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. - - - -1ಕೆ.ಎಸ್.ಎ.ಜಿ.2: ಸಾಗರ ಪಟ್ಟಣದ ಚೆನ್ನಮ್ಮಾಜಿ ವೃತ್ತದಲ್ಲಿ ಕೆಳದಿಯಿಂದ ಆಗಮಿಸಿದ ಕನ್ನಡಜ್ಯೋತಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತಿತರ ಗಣ್ಯರು ಸ್ವಾಗತಿಸಿದರು.