ಸಾರಾಂಶ
ರಾಜ್ಯದಲ್ಲಿ ಕನ್ನಡ ಅಸ್ತಿತ್ವವನ್ನು ಕಾಯ್ದುಕೊಂಡಿದ್ದರೆ ಅದಕ್ಕೆ ಆಟೋ ಚಾಲಕರು ಪ್ರಮುಖ ಕಾರಣ ಎಂದು ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದಲ್ಲಿ ಕನ್ನಡ ಅಸ್ತಿತ್ವವನ್ನು ಕಾಯ್ದುಕೊಂಡಿದ್ದರೆ ಅದಕ್ಕೆ ಆಟೋ ಚಾಲಕರು ಪ್ರಮುಖ ಕಾರಣ ಎಂದು ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಹೇಳಿದರು.ನಗರದ ಹೊಸಹಳ್ಳಿ ವೃತದ ಎಸ್.ಡಿ.ಜಯರಾಮ್ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಜಾತ್ರೆಗೆ ಆಹ್ವಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಟೋ ಚಾಲಕರು ಆಟೋ ನಿಲ್ದಾಣಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ.ರಾಜಕುಮಾರ್, ವಿಶ್ವೇಶ್ವರಯ್ಯ, ಎಸ್.ಡಿ.ಜಯರಾಂ ಆಟೋ ನಿಲ್ದಾಣ ಎಂದು ಹೆಸರಿಡುವ ಮೂಲಕ ಅವರ ಹೆಸರುಗಳನ್ನು ಚಿರಸ್ಥಾಯಿಯಾಗಿ ಇರಿಸಿದ್ದಾರೆ. ಅದೇ ರೀತಿ ಆಟೋಗಳ ಮೇಲೆ ಸಾಹಿತ್ಯಗಳನ್ನು ರಚಿಸುವ ಮೂಲಕ ನಿತ್ಯ ಕನ್ನಡ ಸಾಹಿತ್ಯವನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.ಎಸ್.ಡಿ.ಜಯರಾಮ್ ಆಟೋ ನಿಲ್ದಾಣದಲ್ಲಿ ಪ್ರತಿ ವರ್ಷವೂ ಕನ್ನಡ ರಾಜ್ಯೋತ್ಸವ ಹಾಗೂ ಇತಿಹಾಸ ಪುರುಷರ ಜನ್ಮದಿನವನ್ನು ಆಚರಿಸುತ್ತಾ ಬಂದಿದ್ದಾರೆ. ರಾಮನಗರದ ಮಾಜಿ ಶಾಸಕ ಲಿಂಗಪ್ಪ ಅವರು ಆಟೋ ಚಾಲಕರಿಗೆ ನಿವೇಶನ ಒದಗಿಸಿಕೊಟ್ಟಿದ್ದಾರೆ. ಅದೇ ರೀತಿ ಇಲ್ಲಿನ ಶಾಸಕರು ಸ್ಥಳೀಯ ಆಟೋ ಚಾಲಕರಿಗೆ ನಿವೇಶನ ಒದಗಿಸಿಕೊಡಬೇಕು. ಸುರಕ್ಷಿತವಾದ ಆಟೋ ನಿಲ್ದಾಣ ನಿರ್ಮಿಸಿಕೊಡುವಂತೆ ಒತ್ತಾಯಿಸಿದರು.
ರಾಜ್ಯೋತ್ಸವದ ಯಶಸ್ಸಿಗೆ ಆಟೋ ಚಾಲಕರು ಸಾಕಷ್ಟು ಶ್ರಮಿಸಿದ್ದಾರೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕುವೆಂಪುರವರ ಮಾತಿನಂತೆ ಕನ್ನಡಕ್ಕಾಗಿ ಹೋರಾಡಿದವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದರು.ರಾಜ್ಯದಲ್ಲಿ ಪರಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಸುವರ್ಣ ಕರ್ನಾಟಕ ಸಂಭ್ರಮದ ಸಂದರ್ಭದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.20ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ ಆಯೋಜಿಸಲಾಗಿದೆ. ಮನೆ ಮಂದಿಯೆಲ್ಲ ಕುಟುಂಬ ಸಮೇತರಾಗಿ ಭಾಗವಹಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಜಯರಾಂ ಆಸ್ಪತ್ರೆಯ ಡಾ.ಮಾದೇಶ್, ಶಂಕರೇಗೌಡ, ಎಂ.ಸಿ.ಲಂಕೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ನಿಂಗಣ್ಣ, ನಟರಾಜ, ಕೃಷ್ಣಣ್ಣ, ದೇವರಾಜ್ ಮತ್ತಿತರರಿದ್ದರು.