ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲುನಾಪೋಕ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಕೇರಿ ಭಗವತಿ ದೇವಾಲಯ ಸಂಪರ್ಕ ರಸ್ತೆ ಸಮೀಪದ ಮೋರಿ ಕಾಡು ಎಂಬಲ್ಲಿ ರಸ್ತೆಯ ಬದಿಯಲ್ಲಿ ದನದ ಚರ್ಮ ಪತ್ತೆಯಾಗಿದ್ದು ಗ್ರಾಮ ಪಂಚಾಯಿತಿ ವತಿಯಿಂದ ಸ್ಥಳ ಶುಚಿಗೊಳಿಸುವ ಕಾರ್ಯ ಶುಕ್ರವಾರ ನಡೆಯಿತು.
ನಾಪೊಕ್ಕು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಪ್ರಮುಖರಾದ ಅಶ್ರಫ್, ಕನ್ನಂಭೀರ ಸುಧಿ ತಿಮಯ್ಯ, ಹಾಗೂ ಸಿಬ್ಬಂದಿ ಹಾಜರಿದ್ದರು.ಈ ಹಿಂದೆ ಅಕ್ರಮ ದನದ ಮಾಂಸ ಮಾರಾಟದ ಬಗ್ಗೆ ಇಲ್ಲಿನ ಗ್ರಾಮಸ್ಥರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದರು. ಈ ಬಗ್ಗೆ ಕನ್ನಡಪ್ರಭ ವಿವರವಾದ ವರದಿಯನ್ನು ಶುಕ್ರವಾರ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತು ಗ್ರಾ.ಪಂ. ಕ್ರಮ ಕೈಗೊಂಡಿದ್ದು, ಸಮಸ್ಯೆ ಪರಿಹಾರವದಂತಾಗಿದೆ.
ಪ್ರಕರಣದ ಹಿನ್ನೆಲೆ:ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಶ್ರೀ ಭಗವತಿ ದೇವಾಲಯಕ್ಕೆ ತರುವ ರಸ್ತೆ ಸಮೀಪದ ಮೋರಿ ಕಾಡು ಎಂಬಲ್ಲಿ ನಾಪೋಕ್ಲು ಕಕ್ಕಬೆ ಮುಖ್ಯ ರಸ್ತೆಯ ಬದಿಯಲ್ಲಿ ಶ್ವಾನ ಗಳಿಗೆ ಆಹಾರವಾಗಿ ಕೊಳೆತು ನಾರುತ್ತಿರುವ ದನದ ಚರ್ಮ ಗುರುವಾರ ಪತ್ತೆಯಾಗಿದ್ದು ಗೋ ಹತ್ಯೆ ಶಂಕೆ ಗ್ರಾಮಸ್ಥರಲ್ಲಿ ವ್ಯಕ್ತವಾಗಿ ಕ್ರಮ ಕೈಗೊಳ್ಳುವವರು ಯಾರು ಎಂದು ಪ್ರಶ್ನಿಸುವಂತಾಗಿದೆ.
ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿನ್ನಪ್ಪ ಮಾತನಾಡಿ ಮುಖ್ಯ ರಸ್ತೆಯ ಮೋರಿ ಕಾಡು ಎಂಬಲ್ಲಿ ದನವನ್ನು ಕೊಂದು ಚರ್ಮವನ್ನು ಎಸೆದಿದ್ದಾರೆ . ಇದರಿಂದಾಗಿ ಇಲ್ಲಿನ ಪರಿಸರ ಮತ್ತು ನೀರು ಕಲುಷಿತವಾಗಿದೆ. ಮೂರು ನಾಲ್ಕು ದಿನದ ಹಿಂದೆ ಘಟನೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ತೀವ್ರ ಅಸಮಾಧಾನವನ್ನು ಉಂಟು ಮಾಡಿದೆ .ಕೂಡಲೇ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ಮುಂದೆ ಇಂತ ದುಷ್ಕೃತ್ಯ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಹಿಂದೂ ಸಂಘಟನೆಯ ಪ್ರಮುಖರಾದ ಕಂಗಾಂಡ ಜಾಲಿ ಪೂವಪ್ಪ ಮಾತನಾಡಿ, ಗೋಹತ್ಯೆ ಮಾಡಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಎಸೆಯಲಾಗುತ್ತಿದೆ. ಪವಿತ್ರ ಗೋಮಾತೆಯನ್ನು ರಕ್ಷಿಸಿ ಬೇಕು. ಹತ್ಯೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭ ಅಮ್ಮಂಡ ಮನು ಮಹೇಶ್ ಉಪಸ್ಥಿತರಿದ್ದರು. ಈ ಹಿಂದೆ ಇದೇ 10 ರಂದು ಅಕ್ರಮ ಗೋ ಹತ್ಯೆ, ಮಾಂಸ ಮಾರಾಟದ ಬಗ್ಗೆ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಕನ್ನಂಬೀರ ಸುದಿ ತಿಮ್ಮಯ್ಯ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ , ಕುಂಡ್ಯೋಳಂಡ ವಿಷು ಪೂವಯ್ಯ ಗ್ರಾಮಸ್ಥರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿತ್ತು . ಆದರೂ ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರಲ್ಲಿ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.