- 2ನೇ ದಿನದ ಕಾರ್ಯಕ್ರಮದಲ್ಲಿ ಶಾಸಕ ಕೆ.ದೇವೇಂದ್ರಪ್ಪ ಹರ್ಷ । ಸುವರ್ಣ ಸಂಭ್ರಮದಲ್ಲಿ ಮಿಂದೆದ್ದ ಜನತೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭದಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಆಯೋಜಸಿದ ಎರಡನೇ ದಿನದ ಕಾರ್ಯಕ್ರಮಗಳಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಸಾರ್ವಜನಿಕರು ಭಾಗವಹಿಸಿ ಖುಷಿಪಟ್ಟರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಜಗಳೂರು ಶಾಸಕ ಕೆ.ದೇವೇಂದ್ರಪ್ಪ ಮಾತನಾಡಿ, ಇವತ್ತು ಸುದ್ದಿ ಮಾಧ್ಯಮಗಳ ಜವಾಬ್ದಾರಿ ಜಾಸ್ತಿಯಾಗುತ್ತಿದೆ. ಸತ್ಯದ ಪರವಾಗಿ ಇರುವಂತಹ ಸುದ್ದಿಗಳನ್ನು ಮುಂದಿಡುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಇಂದು ಕನ್ನಡಪ್ರಭ- ಸುವರ್ಣ ನ್ಯೂಸ್ ಸುದ್ದಿಮಾಧ್ಯಮದವರು ತಮ್ಮ ಕರ್ತವ್ಯದ ಬಿಡುವಿಲ್ಲದ ಸಂದರ್ಭದಲ್ಲಿಯೂ ಗುಡಿ ಕೈಗಾರಿಕೆಗಳಿಗೆ, ಸಣ್ಣ ಕೈಗಾರಿಕೆಗಳಿಗೆ, ಮಹಿಳೆಯರಿಗೆ ಪ್ರೋತ್ಸಾಹ ನೀಡುವಂತಹ ಕೆಲಸ ಮಾಡುತ್ತಿದ್ದಾರೆ. ಒತ್ತಡದ ಮಧ್ಯೆ ಬದುಕನ್ನು ರೂಪಿಸುವುದು ಕಷ್ಟ. ಪುರುಸೊತ್ತಿಲ್ಲದ ಬದುಕಿನಲ್ಲಿ ನೈತಿಕ ಸೊತ್ತನ್ನು ಗಳಿಸಲು ಪುರುಸೊತ್ತು ಮಾಡಿಕೊಂಡು ಬಾಳಬೇಕಾಗಿದೆ ಎಂದರು.
ಸರ್ ಎಂ.ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟದಿದ್ದರೆ ಇಂದು ಏನಾಗುತ್ತಿತ್ತು ಪರಿಸ್ಥಿತಿ. ಅಂದು ಅವರು ದೃಢ ಸಂಕಲ್ಪ ಮಾಡಿ ಕನ್ನಡಂಬಾಡಿ ಕಟ್ಟಿದರು. ಇದು ಲಕ್ಷಾಂತರ ಜನರಿಗೆ ಅನುಕೂಲವಾಗಿದೆ. ತೇನ್ ಸಿಂಗ್ ಗೌರಿಶಂಕರ ಹತ್ತಲೋ ಬೇಡವೋ ಎಂದು ಯೋಚನೆ ಮಾಡುತ್ತಾ ಇದ್ದಿದ್ದರೆ ಗೌರಿ ಶಂಕರದ ತುದಿ ಮೇಲೆ ಕಾಲಿಡಲು ಆಗುತ್ತಿರಲಿಲ್ಲ. ಹಾಗೇ ಪ್ರಯತ್ನಿಸಿದರೆ ಫಲ ನಿಶ್ಚಿತ ಎಂದರು.
ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ರಾಜಕೀಯ ಇರಲಿ. ಚುನಾವಣೆ ಮುಗಿದ ನಂತರ ರಾಜಕೀಯ ಬೇಡ. ಅಭಿವೃದ್ಧಿ ಪರ, ಜನಪರ ಕೆಲಸವನ್ನು ಮಾಡಬೇಕು. ಕನ್ನಡಪ್ರಭ ಪತ್ರಿಕೆ ಇಂದು ತನ್ನದೇ ಆದ ಇತಿಹಾಸ, ಮಹತ್ವ, ಹಿನ್ನೆಲೆ ಹೊಂದಿದೆ. ಸತ್ಯವನ್ನು ತಿಳಿಸುವಂತಹ ಕೆಲಸ ಕನ್ನಡಪ್ರಭ ಬಳಗದಿಂದ ಆಗಲಿ ಎಂದರು.
ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಮಾತನಾಡಿ, ಸಾಧನೆ ಅನ್ನುವುದು ಯಾರ ಮನೆಯ ಸ್ವತ್ತೂ ಅಲ್ಲ. ಸಾಧನೆಗೆ ಯಾವುದೇ ಜಾತಿ, ಬಡತನ ಅಡ್ಡ ಬರಲ್ಲ. ನಾವು ಜಾತಿ, ಧರ್ಮ ಎನ್ನುವ ಅಡ್ಡಗೆರೆ ಹಾಕಿಕೊಳ್ಳದೇ ಸಾಧನೆಯತ್ತ ಸಾಗಬೇಕು. ಪ್ರತಿಯೊಬ್ಬರೂ ಸಾಧನೆ ಮಾಡುವ ಪ್ರೇರಣೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ದೂಡಾ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ, ಹಿರಿಯ ವಕೀಲ ಎ.ವೈ.ಪ್ರಕಾಶ, ಜಿಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ ಮಹೇಶ, ಚನ್ನಗಿರಿ ತಾಪಂ ಮಾಜಿ ಅಧ್ಯಕ್ಷ ಲೋಹಿತ್ ಕುಮಾರ, ಮಹಾಂತೇಶ ಒಣರೊಟ್ಟಿ, ಬಿಜೆಪಿ ಮುಖಂಡ ಶ್ರೀನಿವಾಸ ದಾಸಕರಿಯಪ್ಪ, ಕನ್ನಡಪ್ರಭದ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್, ಪತ್ರಿಕಾ ವಿತರಣಾ ವಿಭಾಗದ ಶಿವರಾಜ್, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಕ- ಯುವತಿಯರು, ಹಿರಿಯ ನಾಗರೀಕರು, ಮಹಿಳೆಯರು, ಮಕ್ಕಳು, ಸಂಘ- ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಶನಿವಾರ ನಡೆದ ಕಾರ್ಯಕ್ರಮಗಳಲ್ಲಿ ಬೆಳಗ್ಗೆ ಮುದ್ದುಮಗು ಮತ್ತು ವೇಷಭೂಷಣ ಪ್ರದರ್ಶನ, ಅಡುಗೆ ಮಹಾರಾಣಿ (ಮಹಿಳೆಯರಿಗೆ) ಸ್ಪರ್ಧೆಗಳು ನಡೆದವು. ಸ್ಪರ್ಧೆಯಲ್ಲಿ ಮಹಿಳೆಯರು, ಯುವತಿಯರು ಉತ್ಸಾಹದಿಂದ ಭಾಗವಹಿಸಿದ್ದರು. ಅನಂತರ ಓಪನ್ ಸ್ಟೇಜ್ ಮತ್ತು ವಿವಿಧ ಕಲಾವಿದರಿಂದ ಗಾಯನ ಕಾರ್ಯಕ್ರಮ ನಡೆಯಿತು.ಸಂಜೆ ಕಿಡ್ಸ್ ಅಂಡ್ ಫ್ಯಾಮಿಲಿ ಫ್ಯಾಷನ್ ಶೋ, ಮಿನಿಟ್ ಟು ಮಿನಿಟ್ ಸ್ಪರ್ಧೆಗಳು ನಡೆದವು. ಕಲಾವಿದ ಮಿಮಿಕ್ರಿ ಗೋಪಿ ಹಾಸ್ಯ ಸಂಜೆ ಹಾಗೂ ಕನ್ನಡ ಕೋಗಿಲೆ ಖ್ಯಾತಿಯ ಡ್ಯುಯಲ್ ವಾಯ್ಸ್ ಸಿಂಗರ್ ಮಂಜು ಹಾಸನ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅನಂತರ ದಾವಣಗೆರೆ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
- - -(-ಫೋಟೋಗಳಿವೆ.)
