ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ನಚಿಕೇತನ ಕಥೆಯ ಮೂಲಕ ಒಂದು ರೂಪಕವಾಗಿ ಸಾರ್ವಕಾಲಿಕವಾದ ಸಾವಿನ ಬಗ್ಗೆ ಮಾತ್ರವಲ್ಲ ಮನುಷ್ಯನ ಅಸ್ತಿತ್ವದ ಬಗ್ಗೆ ಮತ್ತು ಅರ್ಥಪೂರ್ಣ ಬದುಕನ್ನು ಬಾಳಿ ಜೀವನದ ಸಾರ್ಥಕ್ಯವನ್ನು ಕಂಡುಕೊಳ್ಳುವ ಬಗೆಯನ್ನು ಕಠೋಪನಿಷತ್ತು ವಿವರಿಸುತ್ತದೆ ಎಂದು ಅಂಕಣಕಾರ ಹಾಗೂ ಸಂಸ್ಕೃತಿ ವಿಮರ್ಶಕ ಡಾ.ಬಿ.ಭಾಸ್ಕರ ರಾವ್ ಹೇಳಿದರು.ಅವರು ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಸಹಯೋಗದಲ್ಲಿ ಇತ್ತೀಚೆಗೆ ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ಅವರು ‘ಕಠೋಪನಿಷತ್ತು’ ಕುರಿತು ಮಾತನಾಡಿದರು.ಆತ್ಮದ ಅವಿನಾಶತ್ವ ಮತ್ತು ಬ್ರಹ್ಮನ ಅಂತರ್ಯಾಮಿತ್ವವನ್ನು ಕಠೋಪನಿಷತ್ತು ವಿವರವಾಗಿ ತಿಳಿಸುತ್ತದೆ. ಎಲ್ಲ ವಿವಿಧ ಪ್ರಲೋಭನೆಗಳನ್ನು ನಿರಾಕರಿಸುತ್ತಾ ಪ್ರಶ್ನೆ ಕೇಳಿ ಯಮನಿಂದ ಆತ್ಮ ತತ್ವದ ಉಪದೇಶವನ್ನು ನಚಿಕೇತನು ಪಡೆದುಕೊಂಡ. ಪ್ರಶ್ನಿಸುವ ಮತ್ತು ಸತ್ಯವನ್ನು ಸ್ವೀಕರಿಸುವ ಇಂತಹ ಧೈರ್ಯ ಮನುಷ್ಯರಲ್ಲೂ ಬರಬೇಕಾಗಿದೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪ ಇತ್ಯಾದಿ ಸಾಧನೆಗಳಿಂದ ಮನುಷ್ಯ ಸತ್ತ ನಂತರವೂ ಪ್ರಪಂಚ ಆತನನ್ನು ಸದಾ ನೆನಪಿಸಿಕೊಳ್ಳುವಂತೆ ಅಮರತ್ವವನ್ನು ಪಡೆಯಬಲ್ಲ ಎಂಬುದನ್ನೂ ಉಪನಿಷತ್ತು ಸೂಚ್ಯವಾಗಿ ತಿಳಿಸುತ್ತದೆ. ಆಸೆ, ಹೆದರಿಕೆ ಮತ್ತು ದುಃಖವನ್ನು ಮೀರಿ ಮನುಷ್ಯ ತನ್ನ ಮನಶಾಂತಿಯನ್ನು ಹೇಗೆ ಹೊಂದಬಹುದೆಂಬುದನ್ನು ಕಠೋಪನಿಷತ್ತಿನಿಂದ ತಿಳಿದುಕೊಳ್ಳಬಹುದಾಗಿದೆ ಎಂದರು.
ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಏರ್ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಉಪಸ್ಥಿತರಿದ್ದರು. ಸುಧಾಕರ ಶ್ಯಾನುಭೋಗ್ ಪ್ರಾರ್ಥಿಸಿದರು. ಸುಮತಿ ಪಿ. ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಮಿತ್ರಪ್ರಭಾ ಹೆಗ್ಡೆ ವಂದಿಸಿದರು.