ಸಾರಾಂಶ
ಶ್ರೀಗಳಿಗೆ ಜ.31ರಂದು ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಉತ್ತರ ಭಾರತದ ನಾಗಾಸಾಧು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪದವಿಯ ಪಟ್ಟಾಭಿಷೇಕವು ಜುನಾ ಅಖಾಡದ ಮೂಲಕ ನೆರವೇರಿದೆ. ಇದು ಕರ್ನಾಟಕಕ್ಕೆ ಸಿಕ್ಕಿರುವ ಮೊದಲ ಮಹಾಮಂಡಲೇಶ್ವರ ಪದವಿಯಾಗಿದೆ.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕುಂಭ ಮೇಳದಲ್ಲಿ ರಾಜ್ಯದ ಪ್ರಥಮ ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರು ಫೆ.2ರಂದು ಭಾನುವಾರ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.ಶ್ರೀಗಳಿಗೆ ಜ.31ರಂದು ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಉತ್ತರ ಭಾರತದ ನಾಗಾಸಾಧು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪದವಿಯ ಪಟ್ಟಾಭಿಷೇಕವು ಜುನಾ ಅಖಾಡದ ಮೂಲಕ ನೆರವೇರಿದೆ. ಇದು ಕರ್ನಾಟಕಕ್ಕೆ ಸಿಕ್ಕಿರುವ ಮೊದಲ ಮಹಾಮಂಡಲೇಶ್ವರ ಪದವಿಯಾಗಿದೆ.
ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಈ ಪದವಿಯನ್ನು ಪ್ರದಾನ ಮಾಡುವುದು ಅಖಾಡದ ವಾಡಿಕೆ. ಈ ಪದವಿಗೆ ಅರ್ಹರಾದವರು ಸ್ವತಂತ್ರ ಪೀಠಾಧೀಶರಾಗಿರಬೇಕು. . ಪಟ್ಟಾಭಿಷೇಕಕ್ಕೂ ಮುನ್ನ ಅಖಾಡದಲ್ಲಿರುವ ಕ್ಯಾಬಿನೆಟ್ ಸದಸ್ಯರು ಸ್ವಾಮೀಜಿವರ ಆಧ್ಯಾತ್ಮಿಕ ಸತ್ಸಂಗವನ್ನು ಪರಿಶೀಲಿಸಿ ಬೈಠಕ್ನಲ್ಲಿ ಚರ್ಚಿಸಿ ಗೌರವ ಪ್ರದಾನ ಮಾಡುವುದಾಗಿದೆ. ಶ್ರೀಗಳು ಮುಂದೆ ರಾಷ್ಟ್ರಾದ್ಯಂತ ಧರ್ಮ ಪ್ರಚಾರದ ಜತೆಗೆ ಆಧ್ಯಾತ್ಮದ ಉನ್ನತ ಸಾಧನೆಗಾಗಿ ಧಾರ್ಮಿಕ ಮೌಲ್ಯಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ಅರ್ಹತೆ ಉಳ್ಳವರಾಗಿದ್ದಾರೆಂದು ಪರಿಗಣಿಸಿ ನಾಗಾ ಸಾಧು ಸನ್ಯಾಸಿ ಪರಂಪರೆಯಲ್ಲಿ ಜುನಾ ಅಖಾಡ ಈ ಜವಾಬ್ದಾರಿಯನ್ನು ನೀಡಿದೆ.ದಕ್ಷಿಣ ಭಾರತದಲ್ಲಿ ಮಹಾಮಂಡಲೇಶ್ವರ ಪಟ್ಟ ನೀಡಿದ್ದು ವಿರಳ. ಸ್ವಾಮೀಜಿಗಳ ಪೈಕಿ ಕನ್ಯಾಡಿ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಮೂಲಕ ಕರ್ನಾಟಕಕ್ಕೆ ಬರುವ ಪ್ರಪ್ರಥಮ ಮಹಾಮಂಡಲೇಶ್ವರ ಪದವಿಯಾಗಿದೆ. ಈ ಪಟ್ಟಾಭಿಷೇಕರಾದ ಧಾರ್ಮಿಕ ನಾಯಕನಿಗೆ ರಾಷ್ಟ್ರಾದ್ಯಂತ ವಿಶೇಷ ಸೌಲಭ್ಯ ನೀಡಲಾಗುತ್ತದೆ.ವಾರಾಣಸಿಯ ಪಂಚದಶನಾಮ್ ಜುನಾ ಅಖಾಡದಲ್ಲಿರುವ ಸಾಧು ಸಮಾಜದ ಮಹಾಮಂಡಲೇಶ್ವರ ಆಚಾರ್ಯರಾದ ಅವಧೇಶಾನಂದ ಗಿರಿ ಮಹಾರಾಜರು ಪಟ್ಟಾಭಿಷೇಕವನ್ನು ಶುಕ್ರವಾರ ಮಹಾಕುಂಭಮೇಳದಲ್ಲಿ ನಿರ್ವಹಿಸಿದರು.ಅಂತಾರಾಷ್ಟ್ರೀಯ ಜುನಾ ಅಖಾಡದ ಅಧ್ಯಕ್ಷ ಹರಿಗಿರಿ ಮಹಾರಾಜ್, ಜುನಾ ಅಖಾಡ ಉಪಾಧ್ಯಕ್ಷ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಜುನಾ ಅಖಾಡದ ಉತ್ತಾರಾಖಂಡ ಮಹಾಮಂತ್ರಿ ದೇವಾನಂದ ಮಹಾರಾಜ್, ಕೋಶಾಧಿಕಾರಿ ಧೀರಜ್ ಗಿರಿ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಟ್ರಸ್ಟಿ ತುಕಾರಾಮ್ ಸಾಲ್ಯಾನ್, ಕೃಷ್ಣಪ್ಪ ಗುಡಿಗಾರ್, ರವೀಂದ್ರ ಪೂಜಾರಿ ಆರ್ಲ, ಹರ್ಷಿತ್ ಉಪಸ್ಥಿತರಿದ್ದರು.ಶ್ರೀಗಳು ಕನ್ಯಾಡಿಗೆ ಫೆ.2 ರಂದು ಆಗಮಿಸಲಿದ್ದು, ಮಾರ್ಚ್ ತಿಂಗಳಲ್ಲಿ ಸಾರ್ವಜನಿಕರಿಂದ ಅಭಿನಂದನಾ ಸಮಾರಂಭ ನಡೆಯಲಿದೆ.
ಮಹಾಕುಂಭ ಎಂಬುದು ವಿಶ್ವಕ್ಕೆ ಧಾರ್ಮಿಕ ಪ್ರಜ್ಞೆಯ ದಿಕ್ಕೂಚಿಯಾಗಿತ್ತು. ಐದು ವರ್ಷದ ಮಕ್ಕಳಿಂದ ಹಿಡಿದು 120 ವರ್ಷದ ವೃದ್ಧರ ವರೆಗೆ ತ್ರಿವೇಣಿ ಸಂಗಮದಲ್ಲಿ ಮುಳುಗಿ ಪಾವನರಾಗುತ್ತಾರೆ. 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳದಲ್ಲಿ ಅಮೃತ ಉತ್ಪತ್ತಿಯಾಗುತ್ತದೆ ಎಂಬ ಪ್ರತೀತಿ. ಅದರಲ್ಲೂ 144 ವರ್ಷಕ್ಕೊಮ್ಮೆ ಬರುವ ಈ ಮಹಾಕುಂಭದಲ್ಲಿ ಹಿಮಾಲಯದ ದೊಡ್ಡದೊಡ್ಡ ಸಾಧಕರು ಬಂದು ಆ ನದಿಯ ಪಾವಿತ್ರ್ಯವನ್ನು ಹೆಚ್ಚಿಸುತ್ತಾರೆ. ನಮ್ಮನ್ನು ರಥದ ಮೂಲಕ ಕರೆದೊಯ್ದು ಪುಣ್ಯ ಸ್ನಾನ ಮಾಡಿಸಿದ್ದಾರೆ.- ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ, ಕನ್ಯಾಡಿ ಶ್ರೀರಾಮ ಕ್ಷೇತ್ರ