ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುತ್ತಿರುವ ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಯಕ್ಷಗಾನ ತರಬೇತಿ ಪಡೆದ ಕಾಪು ವಿಧಾನಸಭಾ ಕ್ಷೇತ್ರದ ಎಂಟು ಪ್ರೌಢಶಾಲೆಗಳ ಕಿಶೋರ ಯಕ್ಷಗಾನ ಸಂಭ್ರಮ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಾಳದ ವಠಾರದಲ್ಲಿ ನಡೆಯಿತು.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಡಾ. ಜಿ.ಶಂಕರ್ ಉದ್ಘಾಟಿಸಿ ಮಾತನಾಡಿ, ನಮಗೆ ಬಾಲ್ಯದಲ್ಲಿ ಯಕ್ಷಗಾನವನ್ನು ಕಲಿಯುವ ಅವಕಾಶ ಇರಲಿಲ್ಲ. ಯಕ್ಷಶಿಕ್ಷಣ ಟ್ರಸ್ಟ್ ಮೂಲಕ ಕರಾವಳಿ ಮಾತ್ರವಲ್ಲದೇ ಇತರ ಜಿಲ್ಲೆಯ ಮಕ್ಕಳಿಗೂ ಯಕ್ಷಗಾನವನ್ನು ಕಲಿಯುವ ಅವಕಾಶವನ್ನು ಕಲ್ಪಿಸಿದೆ. ಇದು ತುಂಬಾ ಶ್ಲಾಘನೀಯವಾದಂತಹ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರ ಆಡಳಿತ ಅಧ್ಯಕ್ಷ ಗಿರಿಧರ ಸುವರ್ಣ, ಮಹಾಜನ ಸಂಘದ ಸದಸ್ಯ ಗುಂಡು ಬಿ. ಅಮೀನ್, ಕೋಶಾಧಿಕಾರಿ ಸುಧಾಕರ ಕುಂದರ್ ಅಭ್ಯಾಗತರಾಗಿ ಭಾಗವಹಿಸಿದ್ದರು.ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಅಜಿತ್ ಕುಮಾರ್ ಮತ್ತು ಕಿಶೋರ್ ಸಿ. ಉದ್ಯಾವರ ಸಹಕರಿಸಿದರು.ಸಭೆಯ ಪೂರ್ವದಲ್ಲಿ ಗಣಪತಿ ಪ್ರೌಢಶಾಲೆ ಪಡುಬಿದ್ರಿ ಇಲ್ಲಿಯ ವಿದ್ಯಾರ್ಥಿಗಳಿಂದ, ನಿತಿನ್ ಪಡುಬಿದ್ರಿ ನಿರ್ದೇಶನದಲ್ಲಿ ತರಣಿಸೇನಾ ಕಾಳಗ ಮತ್ತು ಸಭೆಯ ಬಳಿಕ ಮಹಾದೇವಿ ಪ್ರೌಢಶಾಲೆ ಕಾಪು ಇದರ ವಿದ್ಯಾರ್ಥಿಗಳಿಂದ ಸತೀಶ್ ಆಚಾರ್ಯ ನಿರ್ದೇಶನದಲ್ಲಿ ಅಷ್ಟಾಕ್ಷರಿ ಮಂತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡವು.