ಸಾರಾಂಶ
-ಎತ್ತುಗಳಿಗೆ ಸಿಂಗಾರ ಮಾಡಿ ಕಾರ ಹುಣ್ಣಿಮೆ ಹಬ್ಬ ಆಚರಣೆ
ಕನ್ನಡಪ್ರಭ ವಾರ್ತೆ ಯಾದಗಿರಿಮುಂಗಾರನ್ನು ಸ್ವಾಗತಿಸುವ ರೈತರ ಮೊದಲ ಹಬ್ಬ ಕಾರಹುಣ್ಣಿಮೆ ಆಗಿದೆ. ಈ ದಿನದಂದು ಪ್ರಮುಖವಾಗಿ ಸಿಂಗರಿಸಿದ ಎತ್ತುಗಳು, ಹೋರಿಗಳು ಆಕರ್ಷಣೆಯಾಗಿರುತ್ತವೆ. ಅನ್ನದಾತರ ಕೃಷಿ ಕಾರ್ಯಗಳು ಯಶಸ್ವಿಯಾಗಲಿ ಎಂದು ಗೋಗಿ ಹೋಬಳಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪರಶುರಾಮ್ ನಡುಮನಿ ಹೇಳಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ಗ್ರಾಮದಲ್ಲಿ ಬುಧವಾರ ಕಾರಹುಣ್ಣಿಮೆ ದಿನದ ಅಂಗವಾಗಿ ನಡೆದ ಸಿಂಗರಿಸಿದ ಎತ್ತುಗಳ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಹಬ್ಬದ ದಿನ ಎತ್ತುಗಳನ್ನು ಮೈತೊಳೆದು, ಮಿರಿಮಿರಿ ಮಿಂಚುವಂತೆ ಮಾಡುವ ರೈತರು ಕಾರ ಹುಣ್ಣಿಮೆಯಂದು ಎತ್ತುಗಳಿಗೆ ಸ್ನಾನ ಮಾಡಿಸಿ, ಅವುಗಳಿಗೆ ಕೊಂಬಿಗೆ ಗೆಜ್ಜೆ, ಕೊಂಬೆನಸು, ರಿಬ್ಬನ್ ಮತ್ತು ಬಣ್ಣಗಳನ್ನು ಬಳಸಿ ಅಲಂಕರಿಸಿ ಹಣೆಪಟ್ಟಿ ಜೂಲಾಗಳನ್ನು ಹಾಕಿ ಮದುಮಗನಂತೆ ಶೃಂಗರಿಸಿ, ಎತ್ತುಗಳಿಗೆ ಸಿಹಿ ನೈವೇದ್ಯ ಸಲ್ಲಿಸುತ್ತಾರೆ. ನಂತರ ಮಧ್ಯಾಹ್ನ ಅಲಂಕಾರಗೊಂಡಿರುವ ಎತ್ತುಗಳನ್ನು ಊರಿನಲ್ಲಿ ಮೆರವಣಿಗೆ ಮಾಡಲಾಗುತ್ತದೆ ಎಂದು ಯುವ ರೈತ ಸಂತೋಷ ತಿಳಿಸಿದರು. ಈ ವೇಳೆ ಕೃಷಿ ಇಲಾಖೆ ಅಧಿಕಾರಗಳಾದ ಜಗದೀಶ ನೆಲೋಗಿ, ಪ್ರಶಾಂತ, ವಿದ್ಯಾಕುಮಾರ, ಶರಣು ಹೊಸಕೇರಾ ಸೇರಿದಂತೆ ಗ್ರಾಮದ ಹಿರಿಯರು, ಪ್ರಮುಖರು ಹಾಗೂ ರೈತರು ಇದ್ದರು.
-11ವೈಡಿಆರ್10 : ಶಹಾಪುರ ತಾಲೂಕಿನ ಚಾಮನಾಳ ಗ್ರಾಮದಲ್ಲಿ ಬುಧವಾರ ಕಾರ ಹುಣ್ಣಿಮೆ ದಿನದ ಅಂಗವಾಗಿ ನಡೆದ ಸಿಂಗರಿಸಿದ ಎತ್ತುಗಳನ್ನು ಮೆರವಣಿಗೆ ಮಾಡಲಾಯಿತು.