ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ಮೈಸೂರು, ಹುಣಸೂರು, ಎಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ವಿಕಸಿತ ಕೃಷಿ ಸಂಕಲ್ಪಅಭಿಯಾನದ 12ನೇ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಹುಣಸೂರು ತಾಲೂಕಿನ ಕರಣಕುಪ್ಪೆ, ಚಿಲ್ಕುಂದ ಹಾಗೂ ಕೊತ್ತೇಗಾಲ, ಮೈಸೂರು ತಾಲೂಕಿನ ದೂರ, ಮುರುಡಗಹಳ್ಳಿ ಹಾಗೂ ತಳೂರು, ಎಚ್.ಡಿ.ಕೋಟೆ ತಾಲೂಕು ಮಾಗುಡಿಲು ಗಣೇಶಗುಡಿ, ಅನ್ನೂರು, ಹೊಸಹಳ್ಳಿ, ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಯಿತು.
ಕರಣಕುಪ್ಪೆ ಗ್ರಾಪಂ ಅಧ್ಯಕ್ಷ ಪಾಪಣ್ಣ ಮಾತನಾಡಿ, ತಂಬಾಕು ಬೆಳೆಯುವುದನ್ನು ಕಡಿಮೆ ಮಾಡಿ ಪರ್ಯಾಯವಾಗಿ ತೋಟಗಾರಿಕೆ ಬೆಳೆಗಳು ಹಾಗೂ ತರಕಾರಿ ಬೆಳೆಗಳನ್ನು ಬೆಳೆಯಲು ರೈತರಿಗೆ ಕರೆ ನೀಡಿದರು.ಪಿಡಿಒ ಟಿ.ಎಂ. ಪ್ರದೀಪ್ ಮಾತನಾಡಿ, ರಾಜ್ಯ ಸರ್ಕಾರ ತೋಟಗಾರಿಕೆ ಇಲಾಖೆಯಲ್ಲಿ ದೊರಕುವ ವಿವಿಧ ಸಾಲ- ಸೌಲಭ್ಯಗಳ ಕುರಿತು ರೈತರಿಗೆ ತಿಳಿಸಿದರು.
ಸಹಾಯಕ ತೋಟಗಾರಿಕೆ ಅಧಿಕಾರಿ ರವಿ ತಂಬಾಕು ಬೆಳೆಗೆ ಪರ್ಯಾಯವಾಗಿ ತೋಟಪಟ್ಟಿ ಬೆಳೆಗಳನ್ನು ಬೆಳೆಯಲು ರೈತರಿಗೆ ಕರೆ ನೀಡಿದರು.ಬೆಂಗಳೂರಿನ ರಾಷ್ಟ್ರೀಯ ಪಶು ಆಹಾರ ಮತ್ತು ಶರೀರ ಕ್ರಿಯಾಶಾಸ್ತ್ರ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಕಾಜಲ್ ಶಂಕರ್ ರಾಯ್ ಮಾತನಾಡಿ, ಇತ್ತೀಚೆಗೆ ಕ್ರಾಸ್ ಬ್ರೀಡ್ ಹಸುಗಳಲ್ಲಿ ಬಂಜೆತನ ಹೆಚ್ಚಾಗಿದ್ದು, ಇದರ ಸಮಸ್ಯೆಗೆ ಖನಿಜ ಮಿಶ್ರಣ ಮತ್ತು ಹಾರ್ಮೋನ್ ಗಳನ್ನು ಬಳಸಬೇಕು ಎಂದರು.
ರಾಷ್ಟ್ರೀಯ ಡೇರಿ ಅಧ್ಯಯನ ಸಂಸ್ಥೆ ವಿಜ್ಞಾನಿ ಡಾ. ಶಿವಸ್ವಾಮಿ ಮಾತನಾಡಿ, ರೈತರು ಕೃಷಿ ಜೊತೆಗೆ ಹೈನುಗಾರಿಕೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದು ಎಂದು ತಿಳಿಸಿದರು.ಬೆಂಗಳೂರಿನ ಭಾರತೀಯ ಪಶು ಚಿಕಿತ್ಸೆ ಸಂಶೋಧನೆ ಸಂಸ್ಥೆಯ ಡಾ. ಬಸವರಾಜ್ ಸಜ್ಜಣ್ಣನವರು ಪಶುಗಳ ಆರೈಕೆ ಕುರಿತು ಮಾಹಿತಿ ನೀಡಿದರು.
ಡಾ. ರಕ್ಷಿತ್ ರಾಜ್ ಅವರು ವಿವಿಧ ಮೇವು ಬೆಳೆಗಳ ಕುರಿತು ಮಾಹಿತಿ ನೀಡುತ್ತಾ, ದೇಸಿ ತಳಿ ಹಸುಗಳ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ. ರೈತರು ರೈತ ಉತ್ಪಾದಕ ಕಂಪನಿ ಸ್ಥಾಪಿಸಿಕೊಂಡು ದೇಸಿ ಹಸುಗಳನ್ನು ಸಾಕಾಣೆ ಮಾಡಿ, ದೇಸಿ ಹಾಲನ್ನು ರೈತ ಉತ್ಪಾದಕ ಲಾಂಛನದಡಿ ನಗರ ಪ್ರದೇಶಗಳಿಗೆ ಮಾರಾಟ ಮಾಡಿ ಹೆಚ್ಚಿನ ಲಾಭಗಳಿಸಬಹುದು ಎಂದರು.ಡಾ.ಜಿ.ಎಂ. ವಿನಯ್ ಅವರು ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಮೂಲ ಉದ್ದೇಶ ಹಾಗೂ ಪೂರ್ವ ಮುಂಗಾರಿನಲ್ಲಿ ಉತ್ತಮ ತಳಿ ಆಯ್ಕೆ ಹಾಗೂ ಕೃಷಿ ತಾಂತ್ರಿಕತೆಗಳ ಕುರಿತು ಮಾಹಿತಿ ನೀಡಿದರು.
ಡಾ.ವೈ.ಪಿ. ಪ್ರಸಾದ್ ಅವರು ರೈತರಿಗೆ ಕೃಷಿ ತಾಂತ್ರಿಕತೆ, ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿದರು. ರೈತರು ರೈತ ಉತ್ಪಾದಕರ ಕಂಪನಿ ಸ್ಥಾಪಿಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಪಡೆದು, ತಮ್ಮ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ತಿಳಿಸಿದರು.ಶಾಮರಾಜ್ ಮಾತನಾಡಿ, ತೆಂಗಿನ ಸಮಗ್ರ ಬೆಳೆ ನಿರ್ವಹಣೆ, ಸಮಗ್ರ ಪೋಷಕಾಂಶ ನಿರ್ವಹಣೆ, ತೆಂಗಿನಲ್ಲಿ ಅತೀ ಹೆಚ್ಚಾಗಿ ಕಾಣಿಸಿಕೊಳ್ಳುವ ಹರಳು ಉದುರುವುದು ಹಾಗೂ ಕೆಂಪು ಮೂತಿ ಮತ್ತು ಕಪ್ಪು ಮೂತಿ ಹುಳಗಳ ಸಮಗ್ರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಡಾ. ದೀಪಕ್ ಅವರು ಆಹಾರ ಪದಾರ್ಥಗಳ ಮೌಲ್ಯವರ್ಧನೆ ಹಾಗೂ ಮೌಲ್ಯವರ್ಧನೆ ಕೇಂದ್ರ ಸ್ಥಾಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ದೊರಕುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಎಲ್ಲಾ ಗ್ರಾಮಗಳಿಂದ 2000ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.