ಕನಕಗಿರಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮಟ್ಕಾ,ಮರುಳು ಮಾಫಿಯಾ ಹಾಗೂ ಇಸ್ಪೀಟ್ ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ನಾರಾಯಣಗೌಡ ಬಣದ ಕರವೇ ಕಾರ್ಯಕರ್ತರು ಗುರುವಾರ ತಹಸೀಲ್ದಾರ್‌ ಕಚೇರಿಗೆ ಮನವಿ ಸಲ್ಲಿಸಿದರು.

ತಾಲೂಕಾಧ್ಯಕ್ಷ ಹರೀಶ ಪೂಜಾರ ಮಾತನಾಡಿ, ಕನಕಗಿರಿ ತಾಲೂಕಿನ ಸುತ್ತಮುತ್ತಿನ ಗ್ರಾಮಗಳ ಹೊಲದಲ್ಲಿ ಮತ್ತು ಹಳ್ಳ-ಕೊಳ್ಳಗಳಲ್ಲಿ ಅಕ್ರಮವಾಗಿ ಮರಳನ್ನು ಮಾರಾಟ ಮಾಡಲಾಗುತ್ತಿದ್ದು, ಈ ಬಗ್ಗೆ ಹಲವು ಬಾರಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೂ ಅಕ್ರಮ ದಂಧೆ ತಡೆಯಲು ಸಾಧ್ಯವಾಗಿಲ್ಲ. ಮಟ್ಕಾ ದಂಧೆಯಂತೂ ಪಟ್ಟಣ ಹಾಗೂ ಹಳ್ಳಿಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಅನೇಕ ಬಡ ಕುಟುಂಬಗಳು ಬೀದಿಗೆ ಬರುವಂತಾಗಿವೆ. ಇಸ್ಪಿಟ್ ಆಟ ಗ್ರಾಮ, ಪಟ್ಟಣದಲ್ಲಿ ನಡೆಯುತ್ತಿರುವ ವಿಚಾರ ಗಮನಕ್ಕಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.

ನಗರ ಘಟಕದ ಅಧ್ಯಕ್ಷ ಬಸವರಾಜ ಕೋರಿ ಮಾತನಾಡಿ, ಕನಕಗಿರಿ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆಗಳ ಎಗ್ಗಿಲ್ಲದೆ ನಡೆಯುತ್ತಿರುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ಹೋದಾಗ ಸ್ಥಳೀಯ ಅಧಿಕಾರಿಗಳು ಮಟ್ಕಾ ಹಾಗೂ ಇಸ್ಪೀಟ್, ಮರುಳು ದಂಧೆಕೋರರಿಗೆ ಜತೆ ಭಾಗಿಯಾಗಿದ್ದರಿಂದಲೇ ದಿನದಿಂದ ದಿನಕ್ಕೆ ಅಕ್ರಮ ದಂಧೆಗಳು ಹೆಚ್ಚಾಗಲು ಕಾರಣವಾಗಿವೆ. ಅಕ್ರಮ ದಂಧೆಗಳಲ್ಲಿ ಪ್ರಭಾವಿಗಳ ಕೈವಾಡವಿದ್ದು, ಪೊಲೀಸ್ ಅಧಿಕಾರಿಗಳು ಅಕ್ರಮ ದಂಧೆಕೋರರನ್ನು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ದೇಸಾಯಿಗೌಡ, ಇಮಾಮಸಾಬ್‌ ಮೇಸ್ತ್ರಿ, ಹನುಮಂತರೆಡ್ಡಿ ದೊಡ್ಡಬಸವ, ಹನುಮೇಶ ಭಜಂತ್ರಿ, ಲಕ್ಷ್ಮಣ್ ಚಿಟಿಗಿ, ವಿಷ್ಣುರೆಡ್ಡಿ ಮಾದಿನಾಳ, ತಿರುಪತಿ ನಾಯಕ ಕಲಿಕೇರಿ ಸೇರಿದಂತೆ ಇತರರಿದ್ದರು.