ಕಮಲ್‌ ಹಾಸನ್‌ ವಿರುದ್ಧ ಕರವೇ ಗಜಸೇನೆ ಪ್ರತಿಭಟನೆ

| Published : May 30 2025, 12:25 AM IST

ಸಾರಾಂಶ

ಕರ್ನಾಟಕ ಕನ್ನಡ ಬಗ್ಗೆ ಸಾಕಷ್ಟು ಇತಿಹಾಸ ಹೊಂದಿರುವ ಕನ್ನಡ ಭಾಷೆ ತಮಿಳುನಿಂದ ಹುಟ್ಟಿದೆ ಎಂದು ಹಗುರವಾಗಿ ಮಾತನಾಡಿದ ಬಹುಭಾಷಾ ಚಿತ್ರನಟ ಕಮಲ್ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ರಬಕವಿಯ ಶ್ರೀಶಂಕರಲಿಂಗ ದೇವಸ್ಥಾನದ ಹತ್ತಿರ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಸಂಘಟನೆ ಗುರುವಾರ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕರ್ನಾಟಕ ಕನ್ನಡ ಬಗ್ಗೆ ಸಾಕಷ್ಟು ಇತಿಹಾಸ ಹೊಂದಿರುವ ಕನ್ನಡ ಭಾಷೆ ತಮಿಳುನಿಂದ ಹುಟ್ಟಿದೆ ಎಂದು ಹಗುರವಾಗಿ ಮಾತನಾಡಿದ ಬಹುಭಾಷಾ ಚಿತ್ರನಟ ಕಮಲ್ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ರಬಕವಿಯ ಶ್ರೀಶಂಕರಲಿಂಗ ದೇವಸ್ಥಾನದ ಹತ್ತಿರ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಸಂಘಟನೆ ಗುರುವಾರ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಮಾಳು ದುರ್ಗನ್ನವರ ಮಾತನಾಡಿ, ಕನ್ನಡ ಸಾವಿರಾರು ವರ್ಷದ ಇತಿಹಾಸ ಹೊಂದಿದೆ. ಅದರ ಬಗ್ಗೆ ಮಾತನಾಡಲು ಬೇರೆ ರಾಜ್ಯದ ನಾಲಾಯಕರಿಗೆ ಯಾರಿಗೂ ಅಧಿಕಾರವಿಲ್ಲ. ಕನ್ನಡ ನಮ್ಮ ಸ್ವತ್ತು, ಕನ್ನಡ ನಮ್ಮ ತಾಯಿ, ಕನ್ನಡ ನಮ್ಮ ರಕ್ತ, ನಮ್ಮ ಭಾಷೆ ಬಗ್ಗೆ ನಮ್ಮ ನಾಡಿನ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸುವುದಿಲ್ಲ ಎಂದರು.

ಕನ್ನಡ ಭಾಷೆ ಬಗ್ಗೆ ಹಗುರವಾಗಿ ಮಾತನಾಡಿದ್ದ ತಮಿಳು ನಟರಿಗೆ ಸರ್ಕಾರ ತಕ್ಕ ಪಾಠ ಕಲಿಸಬೇಕು. ಕರ್ನಾಟಕದಲ್ಲಿ ಇತರೆ ಭಾಷೆಯ ಚಲನಚಿತ್ರ ಬಿಡುಗಡೆಗೆ ಅನುಮತಿ ನೀಡಬಾರದು. ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರಾಗಬೇಕೆಂದು ದುರ್ಗನ್ನವರ ಹೇಳಿದರು.

ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿದ ತಮಿಳುನಾಡು ಕಮಲ್ ಹಾಸನ್ ಕ್ಷಮೆ ಯಾಚನೆ ಮಾಡದೆ ಹೋದರೆ ಮುಂದಿನ ದಿನಮಾನಗಳಲ್ಲಿ ಕರವೇ ಗಜ ಸೇನೆ ಉಗ್ರ ಹೋರಾಟಕ್ಕೂ ಸಿದ್ಧರಿದ್ದೇವೆಂದು ಮಹ್ಮದ್‌ಹುಸೇನ್ ಲೆಂಗ್ರೆ ತಿಳಿಸಿದರು. ಇದೇ ವೇಳೆ ಕಮಲ್ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿ ಬೆಂಕಿ ಹಚ್ಚಲಾಯಿತು. ತಹಸೀಲ್ದಾರ ಗಿರೀಶ ಸ್ವಾದಿಯವರಿಗೆ ಮನವಿ ಸಲ್ಲಿಸಲಾಯಿತು.ಉಪಾಧ್ಯಕ್ಷ ಶಹನೂರ ಗೋಲಬಾವಿ, ಕಾಡಪ್ಪ ಜಿರಾಳಿ, ಶಿವಪ್ಪ ದೊಡಮನಿ, ಪರಶುರಾಮ್ ಬೆಕ್ಕೇರಿ, ಗೋಪಾಲ ಪಾಟೀಲ, ಸಂತೋಷ ರಾವಳ ಸೇರಿದಂತೆ ಅನೇಕರಿದ್ದರು.