ಸಾರಾಂಶ
ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕನ್ನಡ ಭಾಷೆ ಬಗ್ಗೆ ತಮಿಳು ನಟ ಕಮಲ್ ಹಾಸನ್ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಶುಕ್ರವಾರ ನಗರದ ಆಜಾದ್ಪಾರ್ಕ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು ಕಮಲ್ ಹಾಸನ್ ಭಾವಚಿತ್ರವನ್ನು ಶೂ ಕಾಲಿನಿಂದ ತುಳಿದು, ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ಹೊರ ಹಾಕಿದರು.ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್, ಕನ್ನಡಿಗರು ಕಮಲ್ ಹಾಸನ್ ವಿರುದ್ಧ ರಾಜ್ಯಾ ದ್ಯಂತ ಪ್ರತಿಭಟನೆ ನಡೆಸುತ್ತಿದ್ದು ಕೂಡಲೇ ಸಾರ್ವಜನಿಕವಾಗಿ ಅವರು ಕ್ಷಮೆಯಾಚಿಸದೇ ಮೊಂಡುತನ ಮುಂದುವರಿಸಿದರೆ ಅವರ ಚಲನಚಿತ್ರ ಹಾಗೂ ಅವರನ್ನು ರಾಜ್ಯದಲ್ಲಿ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.ಇತ್ತೀಚೆಗೆ ಕನ್ನಡ ನಾಡಿನ ಮಣ್ಣಿನಿಂದಲೇ ಪ್ರಸಿದ್ಧಿ ಪಡೆಯುತ್ತಿರುವ ಗಾಯಕ ಸೋನು ನಿಗಮ್ ಹಾಗೂ ನಟ ಕಮಲ್ ಹಾಸನ್ ಪದೇ ಪದೇ ಭಾಷೆಯನ್ನು ಟೀಕಿಸುವುದು ಅವರ ಯೋಗ್ಯತೆಗೆ ಸರಿಯಲ್ಲ. ಮುಖ್ಯವಾಗಿ ಕಮಲ್ ಹಾಸನ್ನ ಈ ಹಿಂದೆ ಕನ್ನಡ ದಲ್ಲೇ ಅನೇಕ ಚಿತ್ರಗಳಲ್ಲಿ ನಟಿಸಿರುವ ಅವರಿಗೆ ಭಾಷೆ ಅರಿವು ಇಲ್ಲದಿರುವುದು ಶೋಚನೀಯ ಎಂದರು.ಕನ್ನಡದ ಕೆಲವು ಸಿನಿತಾರೆಯರು ತಮಿಳಿನ ಕಮಲ್ ಹಾಸನ್ ಹೇಳಿಕೆ ಸಮರ್ಥಿಸಿಕೊಳ್ಳುವುದು ದುರ್ಧೈವ. ಅಲ್ಲದೇ ಕನ್ನಡ ಕ್ಕಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಡಾ. ರಾಜ್ಕುಮಾರ್ ಪುತ್ರ ಅಂದಿನ ಕಾರ್ಯಕ್ರಮದಲ್ಲಿದ್ದರೂ ಯಾಕೆ ವಿರೋಧಿಸಿಲ್ಲ ಎಂಬುದು ತಿಳಿಯುತ್ತಿಲ್ಲ. ಕನ್ನಡ ಭಾಷೆ, ನೆಲ, ಜಲ ಸ್ವಾಭಿಮಾನದ ಬಗ್ಗೆ ಅಪಮಾನ ಮಾಡಿದರೆ ವಿರೋಧಿಸುವುದು ಪ್ರತಿ ಯೊಬ್ಬ ಕನ್ನಡಿಗರ ಕರ್ತವ್ಯವಾಗಬೇಕು ಎಂದು ಹೇಳಿದರು.ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್. ಶೆಟ್ಟಿ ಮಾತನಾಡಿ, ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಭಾಜನ ವಾದ ಕನ್ನಡ ನಾಡಿನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿರುವ ಕನ್ನಡದ್ರೋಹಿ ಕಮಲ್ ಹಾಸನ್ ಅವರಿಗೆ ನೈತಿಕತೆ ಇಲ್ಲ. ತಮಿಳಿ ಗಿಂತ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎಂಬುದನ್ನು ಮರೆತಿದ್ದಾರೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ಪಂಚಾಕ್ಷರಿ, ಉಪಾಧ್ಯಕ್ಷ ದಶರಥ ರಾಜ್ ಅರಸ್, ಕೋಟೆ ಮಲ್ಲೇಶ್, ತಾಲೂಕು ಅಧ್ಯಕ್ಷ ಮನೋಜ್, ವಕ್ತಾರ ಅಶೋಕ್ ಕುಮಾರ್, ಮುಖಂಡರಾದ ದೇವನೂರು ಅಶೋಕ್, ರುದ್ರೇಶ್, ಇರ್ಷಾದ್ ಅಹ್ಮದ್, ರಾಧಾ, ರೇಖಾ, ಕಿಟ್ಟಿ, ಪೂರ್ಣಿಮಾ, ಶಶಿ ಆಣೂರು, ಚಂದನ್, ನಾಗಲತಾ, ಅನ್ನಪೂರ್ಣ, ರಾಜೇಶ್ವರಿ ಪಾಲ್ಗೊಂಡಿದ್ದರು. 30 ಕೆಸಿಕೆಎಂ 2ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ತಮಿಳು ನಟ ಕಮಲ್ ಹಾಸನ್ ವಿರುದ್ಧ ಚಿಕ್ಕಮಗಳೂರಿನಲ್ಲಿ ಶುಕ್ರವಾರ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.--------------------------------