ಸಾರಾಂಶ
ನರಗುಂದ: ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಈ ಎರಡನ್ನು ಎದೆಯಿಲ್ಲಿಟ್ಟು ಕಾಪಾಡಬೇಕು. ಪರಕೀಯರಿಂದ ಕಾರ್ಗಿಲ್ ಪ್ರದೇಶ ಕಾಪಾಡಿ ವಿಜಯ ಸಾಧಿಸಿ 25ವರ್ಷಗಳು ಪೂರ್ಣಗೊಂಡಿವೆ. ಕಾರ್ಗಿಲ್ ವಿಜಯ ನಮ್ಮ ದೇಶದ ಹೆಮ್ಮೆ ಆ ಹಿನ್ನೆಲೆಯಲ್ಲಿ ದೊರೆಸ್ವಾಮಿಮಠವು ಸೈನಿಕರಿಗೆ ಗೌರವ ಸೂಚಿಸುವ ಸದುದ್ಧೇಶದಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಜನಜಾಗೃತಿಯನ್ನು ಮಾಡಿದೆ ಇದು ಇತಿಹಾಸದ ಪುಟಗಳಲ್ಲಿ ಅಜರಾಮರ ಎಂದು ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಸ್ವಾತಂತ್ರ್ಯವೀರ ಬಾಬಾಸಾಹೇಬರ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದೊರೆಸ್ವಾಮಿಗಳ ಪುಣ್ಯಸ್ಮರಣೋತ್ಸವ (ನಮ್ಮೂರ ಜಾತ್ರೆ-2024) ನಿಮಿತ್ತ ಕಾರ್ಗಿಲ್ ವಿಜಯೋತ್ಸವ 25ನೇ ವರ್ಷಾಚರಣೆ ಪ್ರಯುಕ್ತ ಚೊಳಚಗುಡ್ಡದಿಂದ ಸಾಗಿಬಂದ ಕಾರ್ಗಿಲ್ ಜ್ಯೋತಿ ರಥಯಾತ್ರೆ ಸ್ವಾಗತ ಹಾಗೂ 25 ಕಾರ್ಗಿಲ್ ಕಲಿಗಳಿಗೆ ಸನ್ಮಾನ ಹಾಗೂ ಕಾರ್ಗಿಲ್ ಕಲಿಗಳ ಯಶೋಗಾಥೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಕಾರ್ಗಿಲ್ ಜಯ ನಮ್ಮ ದೇಶದ ಹೆಮ್ಮೆಯ ಸಂಕೇತ, ಅದು ಸೈನಿಕರ ತ್ಯಾಗ ಬಲಿದಾನದ ಪ್ರತೀಕವಾಗಿದೆ. ನಾನು ನನ್ನದು ಎನ್ನುವ ಮನೋಭಾವನೆ ಬಿಟ್ಟು ನಾವು ನಮ್ಮೋರು ಎಂಬ ದೇಶಾಭಿಮಾನ ಮುಖ್ಯವಾಗಿ ಇಂದಿನ ಮಕ್ಕಳಲ್ಲಿ ಹಾಗೂ ಯುವಸಮುದಾಯದಲ್ಲಿ ರಾಷ್ಟ್ರಾಭಿಮಾನ ಬೆಳೆಯಬೇಕಿದೆ ಎಂದರು.
ಶಾಸಕ ಸಿ.ಸಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶ ನನಗೇನು ಕೊಟ್ಟಿದೆ ಎನ್ನುವ ಬದಲು ದೇಶಕ್ಕೆ ನಾನೇನು ಮಾಡಿದೆ ಎಂದು ಅರಿತುಕೊಳ್ಳಬೇಕಾಗಿದೆ. ದೇಶದ ಪ್ರತಿಯೊಬ್ಬ ಯುವಕರಲ್ಲಿ ದೇಶಾಭಿಮಾನ ಬೆಳೆಸಬೇಕಾಗಿದೆ. ಅಂತಹ ಕಾರ್ಯ ಶ್ರೀಮಠ ಮಾಡುತ್ತಿರುವುದು ಅಭಿನಂದನೀಯ. ನಾವೆಲ್ಲರೂ ದೇಶದಲ್ಲಿ ಇಷ್ಟೊಂದು ಸುಭದ್ರವಾಗಿರುವುದಕ್ಕೆ ಮುಖ್ಯ ಕಾರಣ ನಮ್ಮ ಹೆಮ್ಮೆಯ ಸೈನಿಕರು ಅವರಿಗೆ ಪ್ರತಿಯೊಬ್ಬರು ಗೌರವ ನೀಡಬೇಕು ಎಂದರು.ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಯುವಕರು ಸ್ವಯಂಪ್ರೇರಿತರಾಗಿ ದೇಶ ಸೇವೆಗೆ ಅಣಿಯಾಗಬೇಕು, ನಮ್ಮ ದೇಶದ ಇತಿಹಾಸ ಅರಿತು ಸಂಸ್ಕೃತಿ ಮತ್ತು ಪರಂಪರೆ ವಿಶ್ವಭೂಪಟದಲ್ಲಿ ಎತ್ತಿಹಿಡಿಯಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಗಿಲ್ ಹೋರಾಟ ಮಾಡಿದ ಸೈನಿಕರಿಗೆ ಶ್ರೀ ಮಠದಿಂದ ಶಾಂತಲಿಂಗ ಶ್ರೀಗಳು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಧುರೀಣ ವಿವೇಕ ಯಾವಗಲ್, ಧಾರವಾಡ ಕಾರ್ಗಿಲ್ ಸ್ತೂಪದ ಅಧ್ಯಕ್ಷ ಚಂದ್ರಶೇಖರ ಅಮಿನಗಡ, ಬಸವರಾಜ ಮುಕ್ಕುಪ್ಪಿ, ಸಾವಿತ್ರಿ ಯಶವಂತ ಕೋಲಕಾರ, ಮಾಜಿಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ವೆಂಕಪ್ಪ ಭಾವಿ, ವೀರನಗೌಡ ಪಾಟೀಲ, ಷಣ್ಮುಖಪ್ಪ ಹಳೆಹೊಳಿ, ಬಿ.ಬಿ. ಐನಾಪೂರ, ಚಂದ್ರು ದಂಡಿನ, ಪ್ರಕಾಶಗೌಡ ತಿರಕನಗೌಡ್ರ, ಪತ್ರಯ್ಯ ಹಿರೇಮಠ, ಧರ್ಮರಾಜಪ್ಪ ತೆಗ್ಗಿನಮನಿ, ಬಸಪ್ಪ ನರಸಾಪೂರ, ಗಂಗಯ್ಯಜ್ಜ ವಸ್ತ್ರದ ಹಾಗೂ ಚೊಳಚಗುಡ್ಡದ ನರಗುಂದ ತಾಲೂಕಿನ ಎಲ್ಲ ಮಾಜಿ ಸೈನಿಕರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.