ಸಾರಾಂಶ
ನಿನಾದ’ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನಗಳನ್ನು ಬರೆದ ವಿದ್ಯಾರ್ಥಿಗಳನ್ನು ‘ಪುಸ್ತಕ’ ಬಹುಮಾನದೊಂದಿಗೆ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಹೊರತರಲಾಗುತ್ತಿರುವ ತ್ರೈಮಾಸಿಕ ಪತ್ರಿಕೆ ‘ನಿನಾದ’ ಸಂಚಿಕೆ-5ನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವರ್ಗದವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ವಿದ್ಯಾಸಂಸ್ಥೆಯ ಸಂಸ್ಥಾಪಕ ಅಶ್ವತ್ ಎಸ್.ಎಲ್. ಮಾತನಾಡಿ, ನಿನಾದ ಪತ್ರಿಕೆ ವಿದ್ಯಾರ್ಥಿಗಳಿಗೆ, ಯುವ ಬರಹಗಾರರಿಗೆ ಉತ್ತಮವಾದ ವೇದಿಕೆ ಒದಗಿಸುತ್ತಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಒಳ್ಳೆಯ, ಚಿಂತನಾತ್ಮಕ ಅಂಶಗಳನ್ನು ಬೆಳೆಸಲು ಹಾಗೂ ಕ್ರಿಯಾಶೀಲ ಮನಸ್ಸುಗಳ ಕಟ್ಟಲು ಕ್ರಿಯೇಟಿವ್ ಎಂದಿಗೂ ಸಿದ್ಧವಾಗಿದೆ. ಈಗಾಗಲೇ ನಾಲ್ಕು ಸಂಚಿಕೆಗಳನ್ನು ಪೂರೈಸಿ ಐದನೇ ಸಂಚಿಕೆ ಸಿದ್ಧವಾಗಿ ಲೋಕಮುಖಕ್ಕೆ ಪ್ರಕಟಗೊಳ್ಳುತ್ತಿದೆ. ಹೊಸತನದ ಬರಹಗಳು ಓದುಗರನ್ನು ಖಂಡಿತವಾಗಿಯೂ ತಲುಪುತ್ತವೆ. ಓದುಗರೂ ಸಾಕಷ್ಟು ಇದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಎಳವೆಯಲ್ಲಿಯೇ ಸಾಹಿತ್ಯದ ಕುರಿತು ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.‘ನಿನಾದ’ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನಗಳನ್ನು ಬರೆದ ವಿದ್ಯಾರ್ಥಿಗಳನ್ನು ‘ಪುಸ್ತಕ’ ಬಹುಮಾನದೊಂದಿಗೆ ಗೌರವಿಸಲಾಯಿತು.ಈ ಸಂದರ್ಭ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ, ಆದರ್ಶ ಎಂ.ಕೆ., ಉಪನ್ಯಾಸಕ ವರ್ಗದವರು, ನ್ಯೂಸ್ ಕಾರ್ಕಳದ ಜ್ಯೋತಿ ರಮೇಶ್, ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು. ಉಪನ್ಯಾಸಕ ಲೋಹಿತ್ ಎಸ್.ಕೆ. ನಿರೂಪಿಸಿ ವಂದಿಸಿದರು.