ಸಾರಾಂಶ
ಮಂಗಳೂರು: ಕರ್ಣಾಟಕ ಬ್ಯಾಂಕ್ ಅಂತರ್ ವಲಯ ಎರಡು ದಿನಗಳ ಕ್ರಿಕೆಟ್ ಕೆಬಿಎಲ್ ಸೆಂಟಿನರಿ ಕಪ್ 2024ಗೆ ನಗರದ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಮೈದಾನದಲ್ಲಿ ಶನಿವಾರ ಮುಂಜಾನೆ ಚಾಲನೆ ದೊರೆಯಿತು.ಬಣ್ಣದ ಬಲೂನುಗಳನ್ನು ಆಗಸದಲ್ಲಿ ತೇಲಿ ಬಿಡುವ ಮೂಲಕ ಟೂರ್ನಿಗೆ ಚಾಲನೆ ನೀಡಿದ ಬ್ಯಾಂಕಿನ ಜನರಲ್ ಮ್ಯಾನೇಜರ್ ಬಿ.ಎಸ್.ರಾಜ ಮಾತನಾಡಿ, 100 ಸಾರ್ಥಕ ವರ್ಷಗಳನ್ನು ಪೂರೈಸಿರುವ ಕರ್ಣಾಟಕ ಬ್ಯಾಂಕಿನ ಕುಟುಂಬದ ಸದಸ್ಯರಾಗಿರುವ ನಾವು ಆಗಲೇ ಗೆಲುವಿನ ಟ್ರೋಫಿ ಎತ್ತಿದ್ದೇವೆ. ಎರಡು ದಿನಗಳ ಬ್ಯಾಂಕಿನ ನೌಕರರ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಅದು ನಮ್ಮದೇ ತಂಡವಾಗಿರಲಿದೆ ಎಂದು ಹೇಳಿದರು.ದೈಹಿಕ ಕ್ಷಮತೆ ಮತ್ತು ಉದ್ಯೋಗದಲ್ಲಿ ಉತ್ತಮ ಸೇವಾ ಪರಂಪರೆ- ಪರಸ್ಪರ ಸಂಬಂಧ ಹೊಂದಿರುವ ವಿಷಯಗಳು. ಉತ್ತಮ ದೈಹಿಕ ಕ್ಷಮತೆ ಹೊಂದಿರುವ ಅಧಿಕಾರಿಗಳು, ನೌಕರರು ಉದ್ಯೋಗ ನಿರ್ವಹಣೆ ವಿಷಯದಲ್ಲೂ ಹೆಚ್ಚು ಧನಾತ್ಮಕ ಹಾಗೂ ಉತ್ಪಾದಕತೆಯ ಸಾಮರ್ಥ್ಯ ಹೊಂದಿರುತ್ತಾರೆ. ಕರ್ಣಾಟಕ ಬ್ಯಾಂಕ್ ಆರಂಭದ ದಿನಗಳಿಂದಲೂ ಬ್ಯಾಂಕಿನ ಒಳಗೆ ಹಾಗೂ ಹೊರಗೆ ಎರಡೂ ಕಡೆ ಉತ್ತಮ ಕ್ರೀಡಾಪಟುಗಳ ಬೆಳವಣಿಗೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.16 ತಂಡ: ಡೆಲ್ಲಿ ಸ್ಪಾರ್ಟನ್ಸ್, ಮೈಸೂರು ಮಹಾರಾಜಾಸ್, ಅಹ್ಮದಾಬಾದ್ ಆಸೆಸ್, ಮುಂಬೈ ಸ್ಟಾರ್ಸ್, ಕಲಬುರ್ಗಿ ನೈಟ್ಸ್, ಉಡುಪಿ ಫೈಟರ್ಸ್, ತುಮಕೂರು ವಾರಿಯರ್ಸ್, ಚೆನ್ನೈ ಚಾಂಪಿಯನ್ಸ್, ಕೋಲ್ಕತಾ ನೈಟ್ ರೈಡರ್ಸ್, ಹೈದರಾಬಾದ್ ಟೈಟಾನ್ಸ್, ಹುಬ್ಬಳ್ಳಿ ಹೀರೋಸ್, ಬೆಂಗಳೂರು ಗ್ಲಾಡಿಯೇಟರ್ಸ್, ಬೆಂಗಳೂರು ಲಯನ್ಸ್, ಶಿವಮೊಗ್ಗ ಸುಪರ್ ಸ್ಟೈಕರ್ಸ್, ಮಂಗಳೂರು ವಾರಿಯರ್ಸ್ ಮತ್ತು ಮಂಗಳೂರು ಸ್ಪಾರ್ಟನ್ಸ್ ಒಟ್ಟು ಬ್ಯಾಂಕಿನ ವಿವಿಧ ವಲಯಗಳ 16 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ.
ಬ್ಯಾಂಕಿನ ಜನರಲ್ ಮ್ಯಾನೇಜರ್ಗಳಾದ ನಿರ್ಮಲ್ ಕುಮಾರ್, ಸಾಂಡ್ರಾ ಮರಿಯಾ ಲೊರೆನಾ, ಡೆಪ್ಯೂಟಿ ಜನರಲ್ ಮ್ಯಾನೇಜರ್ಗಳಾದ ಗೋಪಾಲಕೃಷ್ಣ ಸಾಮಗ ಬಿ, ರಘುರಾಮ ಎಚ್.ಎಸ್, ವಸಂತ ಹೇರ್ಲೆ, ಅರುಲ್ ರಾಜ್ ಗೋಮ್ಸ್, ಶರತ್ಚಂದ್ರ ಹೊಳ್ಳ, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜೇನ್ ಸಲ್ದಾನ, ಕರ್ನಾಟಕ ಬ್ಯಾಂಕ್ ಅಧಿಕಾರಿಗಳ ಸಂಘಟನೆ (ಕೆಬಿಒಒ) ಪ್ರಧಾನ ಕಾರ್ಯದರ್ಶಿ ಎಸ್.ಸುರೇಶ್ ಹೆಗ್ಡೆ, ಅಖಿಲ ಭಾರತ ಕರ್ಣಾಟಕ ಬ್ಯಾಂಕ್ ನೌಕರರ ಸಂಘಟನೆ (ಎಐಕೆಬಿಇಎ) ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ.ಜಿ ಮುಖ್ಯ ಅತಿಥಿಗಳಾಗಿದ್ದರು.