ಸಾರಾಂಶ
ವಿಧಾನಸಭೆ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಮುಂದುವರಿಸಿರುವ ಧರಣಿಯ ನಡುವೆಯೇ ಸದನದ ಕಲಾಪವನ್ನು ನಡೆಸಲಾಯಿತು.
ಕಲಾಪದಲ್ಲಿ ಬಾವಿಗಿಳಿದು ಧರಣಿ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಸದಸ್ಯರು ಶುಕ್ರವಾರವೂ ಮುಂದುವರಿಸಿದರು. ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸುಗಮ ಕಲಾಪಕ್ಕೆ ಸಹಕರಿಸುವಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಮಾಡಿದ ಮನವಿಗೆ ಪ್ರತಿಪಕ್ಷ ಸದಸ್ಯರು ಸ್ಪಂದಿಸದ ಹಿನ್ನೆಲೆಯಲ್ಲಿ ಆರೋಪ-ಪ್ರತ್ಯಾರೋಪಗಳಿಂದ ಗದ್ದಲದ ವಾತಾವರಣ ಉಂಟಾಯಿತು. ಬಳಿಕ ಸಭಾಧ್ಯಕ್ಷರು ಕಲಾಪವನ್ನು 10 ನಿಮಿಷ ಮುಂದೂಡಿದರು. ಸುಮಾರು ಒಂದು ತಾಸಿಗಿಂತ ಹೆಚ್ಚಿನ ಕಾಲದ ಬಳಿಕ ಸದನ ಸೇರಿದಾಗ ಪ್ರತಿಪಕ್ಷದವರು ಧರಣಿ ಮುಂದುವರಿಸಿದರು. ಧರಣಿಯನ್ನು ಹಿಂಪಡೆದು ಸುಗಮ ಕಲಾಪಕ್ಕೆ ಸಹಕರಿಸುವಂತೆ ಸಭಾಧ್ಯಕ್ಷರು ಮನವಿ ಮಾಡಿದರೂ ಪ್ರತಿಪಕ್ಷದವರು ಸೊಪ್ಪು ಹಾಕದೆ ಧರಣಿ ಮುಂದುವರಿಸಿದರು.
ಪ್ರತಿಪಕ್ಷದವರು ಪ್ರತಿಭಟನೆ ವಾಪಸ್ ಪಡೆದುಕೊಳ್ಳದಿದ್ದಾಗ ಧರಣಿಯ ನಡುವೆಯೇ ದಿನ ಕಲಾಪವನ್ನು ನಡೆಸಲಾಯಿತು. ಪ್ರತಿಪಕ್ಷದವರ ಯಾವುದೇ ಆರೋಪ, ಟೀಕೆಗಳಿಗೆ ಕಿವಿಗೊಡದೆ ಸಭಾಧ್ಯಕ್ಷರು ಕಲಾಪವನ್ನು ನಡೆಸಿದರು. ಮಳೆಯ ಅನಾಹುತ ಕುರಿತ ಚರ್ಚೆ ಅಜೆಂಡಾದಲ್ಲಿ ಇಲ್ಲದಿದ್ದರೂ ಚರ್ಚೆ ನಡೆಸಿದ ಸಭಾಧ್ಯಕ್ಷರ ನಡೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸದನದ ನಿಯಮ ಉಲ್ಲಂಘಿಸಿ ಕಲಾಪ ನಡೆಸಲಾಗುತ್ತಿದೆ. ಅಜೆಂಡಾದಲ್ಲಿ ಇಲ್ಲದಿದ್ದರೂ ಚರ್ಚೆಗೆ ಅವಕಾಶ ನೀಡಲಾಗಿದೆ. ಇದು ಸರಿಯಲ್ಲ ಎಂದು ಟೀಕಿಸಿದರು. ಆದರೂ ಸಭಾಧ್ಯಕ್ಷರು ತಮ್ಮ ಪಾಡಿಗೆ ಸದನವನ್ನು ಮುಂದುವರಿಸಿದರು. ಕೊನೆಗೆ ದಿನದ ಕಲಾಪವನ್ನು ಮುಗಿಸಿ ಸೋಮವಾರಕ್ಕೆ ಮುಂದೂಡಿಕೆ ಮಾಡಿದರು.
==ಪ್ರತಿಪಕ್ಷಗಳ ಟೀಕೆಗಳಿಗೆ, ಘೋಷಣೆಗಳಿಗೆ ಸೊಪ್ಪು ಹಾಕದ ಸರ್ಕಾರ ಸದನವನ್ನು ಗದ್ದಲ ನಡುವೆಯೇ ನಡೆಸಿತು. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮ ವರ್ಗಾವಣೆ ಕುರಿತ ಚರ್ಚೆಗೆ ಉತ್ತರ ನೀಡಿದರು. ಬಳಿಕ ಸದನವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಯಿತು. ಶುಕ್ರವಾರ ಸದನ ಆರಂಭಗೊಂಡಾಗ ಬಿಜೆಪಿ-ಜೆಡಿಎಸ್ ಶಾಸಕರು ಬಾವಿಯಲ್ಲಿ ಧರಣಿ ಮುಂದುವರೆಸಿದರು. ಸರ್ಕಾರ ವಿರುದ್ಧ ಘೋಷಣೆ ಕೂಗಿದರು.