ಕರ್ನಾಟಕ ದರ್ಶನ: 4 ದಿನದ ಪ್ರವಾಸಕ್ಕೆ ನಿಶಾನೆ ಬಿಇಒ

| Published : Feb 01 2024, 02:01 AM IST

ಸಾರಾಂಶ

ಪ್ರವಾಸದ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಇತಿಹಾಸ, ವಿಶೇಷತೆ ಮತ್ತು ಮಹತ್ವವನ್ನು ತಿಳಿಯಬೇಕು ಎಂದು ವಿದ್ಯಾರ್ಥಿಗಳಿಗೆ ಬಿಇಒ ಹನುಮಂತಪ್ಪ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಹರಿಹರ

ಕರ್ನಾಟಕ ದರ್ಶನ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ೧೦೧ ವಿದ್ಯಾರ್ಥಿಗಳ ೪ ದಿನಗಳ ಪ್ರವಾಸಕ್ಕೆ ಬಿಇಒ ಹನುಮಂತಪ್ಪ ನಗರದ ಗುರುಭವನದ ಮುಂಭಾಗ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾಲೂಕಿನ ಸರ್ಕಾರಿ ಶಾಲೆಯ ೮ನೇ ತರಗತಿಯಲ್ಲಿ ಓದುತ್ತಿರುವ ಎಸ್ಸಿ, ಎಸ್‌ಟಿ, ಅಲ್ಪಸಂಖ್ಯಾತರ ಹಾಗೂ ಒಬಿಸಿ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಆಯ್ಕೆಮಾಡಿ ನಾಲ್ಕು ದಿನಗಳ ಕರ್ನಾಟಕ ದರ್ಶನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ವಿದ್ಯಾರ್ಥಿಗಳೊಂದಿಗೆ ನಾಲ್ಕು ಜನ ಶಿಕ್ಷಕರು ಹಾಗೂ ಪ್ರವಾಸೋಧ್ಯಮ ಇಲಾಖೆಯ ೨ ಜನ ಗೈಡ್‌ಗಳು ಇರುತ್ತಾರೆ, ಅಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪ್ರವಾಸದ (ಬ್ಯಾಗ್, ಟೀ ಶರ್ಟ್, ಟೋಪಿ, ಪೆನ್ನು, ಪುಸ್ತಕ, ಐಡಿ ಕಾರ್ಡ್) ಕಿಟ್‌ನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಹರಿಹರದಿಂದ ತುಮಕೂರು, ಬೆಂಗಳೂರು ವಸತಿ, ಶಿವನಸಮುದ್ರ, ತಲಕಾಡು, ಕೆ.ಆರ್.ಎಸ್. ಬೃಂದಾವನ ಗಾರ್ಡನ್, ಮೈಸೂರು ವಸತಿ, ಮೈಸೂರು, ಶ್ರವಣಬೆಳಗೊಳ ವಸತಿ ಮತ್ತು ಶ್ರವಣಬೆಳಗೊಳದಿಂದ ಹರಿಹರ ವಾಪಸ್ಸಾಗಲಿದ್ದಾರೆ ಎಂದರು.

ಪ್ರವಾಸದ ಸ್ಥಳಗಳಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಇತಿಹಾಸ, ವಿಶೇಷತೆ ಮತ್ತು ಮಹತ್ವವನ್ನು ತಿಳಿಯಬೇಕು ಶಿಕ್ಷಕರು ಹಾಗೂ ಮಾರ್ಗದರ್ಶಕರು ಹೇಳಿದ ಹಾಗೆ ಪ್ರವಾಸದಲ್ಲಿ ನಡೆದುಕೊಂಡು ಸುರಕ್ಷಿತವಾಗಿ ಮರಳಿ ಬನ್ನಿ ಎಂದು ಇದೇ ವೇಳೆ ಶುಭಾ ಹಾರೈಸಿದರು.

ಈ ಸಮಯದಲ್ಲಿ ಪ್ರವಾಸೋದ್ಯಮ ಇಲಾಖೆಯ ಮಹೇಶ್ವರಪ್ಪ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಹನುಮಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಪ್ಪ, ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ್, ಕಾರ್ಯದರ್ಶಿ ದನ್ಯಕುಮಾರ್, ಜಿಲ್ಲಾ ಸಹ ಕಾರ್ಯದರ್ಶಿ ಲಿಂಗರಾಜ್, ಕರ್ನಾಟಕ ದರ್ಶನ ನೋಡಲ್ ಅಧಿಕಾರಿ ಮಂಜುನಾಥ, ಕೆ.ಪಿ.ಎಸ್ ಬನ್ನಿಕೋಡು ಉಪಪ್ರಾಂಶುಪಾಲ ಕೊಟ್ರೇಶ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಹಾಗೂ ಇತರರು ಉಪಸ್ಥಿತರಿದ್ದರು.