ಸಾರಾಂಶ
ಬಡ ಕುಟುಂಬಗಳಿಂದ ಬಂದ ಮಕ್ಕಳು ಓದಿನ ಜೊತೆ ನಾಡಿನ ಪ್ರೇಕ್ಷಣೀಯ ಸ್ಥಳಗಳ ದರ್ಶನ ಮಾಡುವ ಮೂಲಕ ನಾಡಿನ ಇತಿಹಾಸ, ಹಿರಿಮೆಗಳು, ಸಂಸ್ಕೃತಿ, ಕಲೆಗಳ ಪರಿಚಯ ಮಾಡಿಕೊಳ್ಳಲು ಪ್ರವಾಸೋದ್ಯಮ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೊನ್ನಾಳಿಯಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬಡ ಕುಟುಂಬಗಳಿಂದ ಬಂದ ಮಕ್ಕಳು ಓದಿನ ಜೊತೆ ನಾಡಿನ ಪ್ರೇಕ್ಷಣೀಯ ಸ್ಥಳಗಳ ದರ್ಶನ ಮಾಡುವ ಮೂಲಕ ನಾಡಿನ ಇತಿಹಾಸ, ಹಿರಿಮೆಗಳು, ಸಂಸ್ಕೃತಿ, ಕಲೆಗಳ ಪರಿಚಯ ಮಾಡಿಕೊಳ್ಳಲು ಪ್ರವಾಸೋದ್ಯಮ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಪಟ್ಟಣದ ಹಿರೇಕಲ್ಮಠದಲ್ಲಿ ಶನಿವಾರ ಮುಂಜಾನೆ ಹೊನ್ನಾಳಿಯಿಂದ ನಾಡಿನ ಹಲವಾರು ಪ್ರೇಕ್ಷಣೀಯ ಸ್ಥಳಗಳಿಗೆ ಕರ್ನಾಟಕ ದರ್ಶನ ಕಾರ್ಯಕ್ರಮದಡಿ ತಾಲೂಕಿನ 8ನೇ ತರಗತಿಯಲ್ಲಿ ಓದುತ್ತಿರುವ ಒಟ್ಟು 83 ಎಸ್ಸಿ-ಎಸ್ಟಿ ವರ್ಗದ ಮಕ್ಕಳಿಗೆ 2 ಬಸ್ಗಳಲ್ಲಿ ಹೊರಟ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಬೀಳ್ಕೊಟ್ಟು ಅವರು ಮಾತನಾಡಿದರು.
ಇದೇ ಸಂದರ್ಭ ಮಕ್ಕಳಿಗೆ ಹಾಗೂ ಮಕ್ಕಳೊಂದಿಗೆ ಮಾರ್ಗದರ್ಶಿ ಶಿಕ್ಷಕರಾಗಿ ಹೊರಟ ಪ್ರತಿ ಬಸ್ಗೆ ಇಬ್ಬರು ಶಿಕ್ಷಕರಂತೆ ನಾಲ್ಕು ಶಿಕ್ಷಕರಿಗೆ ಮಕ್ಕಳನ್ನು ಅತ್ಯಂತ ಜಾಗರೂಕತೆಯಿಂದ ಎಲ್ಲಿಯೂ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಮಕ್ಕಳು ಸಹ ಶಿಕ್ಷಕರ ಜೊತೆಯಲ್ಲಿಯೇ ಇದ್ದು ಪ್ರೇಕ್ಷಣಿಯ ಸ್ಥಳಗಳನ್ನು ನೋಡುವ ಜೊತೆಗೆ ಇಲಾಖೆಯವರು ನೀಡಿರುವ ನೋಟ್ ಪುಸ್ತಕದಲ್ಲಿ ಪ್ರತಿ ಸ್ಥಳದ ಮಹತ್ವಗಳ ಬಗ್ಗೆ ಟಿಪ್ಪಣಿ ಬರೆದಿಟ್ಟುಕೊಳ್ಳಬೇಕೆಂದು ಸಲಹೆ ನೀಡಿ, ಶುಭ ಹಾರೈಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ, ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಹ ಶುಭ ಹಾರೈಸಿದರು. ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ನಿರ್ದೇಶಕಿ ಬಿ.ಕಾವ್ಯ, ಬಿ.ಆರ್.ಸಿ. ತಿಪ್ಪೇಶಪ್ಪ, ಇ.ಸಿ.ಓ. ಹನುಮಂತಪ್ಪ, ಶಿಕ್ಷಣ ಮತ್ತು ಪ್ರವಾಸೋದ್ಯ ಇಲಾಖೆಗಳ ಅಧಿಕಾರಿಗಳು ಇದ್ದರು.
ಹೊನ್ನಾಳಿಯಿಂದ ಜೋಗ ಜಲಪಾತ ಮುರ್ಡೇಶ್ವರ, ಉಡುಪಿ, ಭಾಗಮಂಡಲ, ಮೈಸೂರು ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.- - - -18ಎಚ್.ಎಲ್.ಐ2.ಜೆಪಿಜಿ: