ಜಿಲ್ಲೆಗೆ ಕರ್ನಾಟಕ ಸುವರ್ಣ ಸಂಭ್ರಮ ರಥಯಾತ್ರೆ ಆಗಮನ

| Published : Jan 28 2024, 01:19 AM IST

ಸಾರಾಂಶ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಿಂದ ವಿಜಯಪುರ ಜಿಲ್ಲೆಗೆ ರಥಯಾತ್ರೆ ಆಗಮಿಸಿತು. ಈ ವೇಳೆ ಮಕ್ಕಳ ಕೋಲಾಟ, ಜಯಘೋಷ, ಕನ್ನಡ ಕವಿಗಳ ಭಾವಚಿತ್ರಗಳು ರಾರಾಜಿಸಿದವು.

ಕನ್ನಡಪ್ರಭ ವಾರ್ತೆ ಆಲಮೇಲ

ತಾಲೂಕಿನ ಗಡಿಗ್ರಾಮ ದೇವಣಗಾಂವ ಭೀಮಾ ನದಿ ತೀರದ ಸೇತುವೆಯ ಮೇಲೆ ಕರ್ನಾಟಕ ಸುವರ್ಣ ಸಂಭ್ರಮ ರಥಯಾತ್ರೆಗೆ ಅದ್ಧೂರಿ ಸ್ವಾಗತ ಮಾಡಿಕೊಳ್ಳಲಾಯಿತು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಿಂದ ವಿಜಯಪುರ ಜಿಲ್ಲೆಗೆ ರಥಯಾತ್ರೆ ಆಗಮಿಸಿತು.

ಆಲಮೇಲ ತಹಶೀಲ್ದಾರ ಸುರೇಶ ಚಾವಲ ಅವರ ನೇತೃತ್ವದಲ್ಲಿ ದೇವಣಗಾಂವ ಗ್ರಾಪಂ ಅಧ್ಯಕ್ಷೆ ರೇಣುಕಾ ನಡುವಿನಕೇರಿ ರಥಕ್ಕೆ ಪೂಜೆ ಸಲ್ಲಿಸಿ, ಹೂಮಾಲೆ ಹಾಕಿ, ಆರತಿ ಬೆಳಗಿ ಸ್ವಾಗತಿಸಿದರು. ಈ ವೇಳೆ ಶಾಲಾ ಮಕ್ಕಳ ಕೋಲಾಟ, ಜಯಘೋಷ, ಕನ್ನಡದ ಕವಿಗಳ ಭಾವಚಿತ್ರಗಳು, ಕನ್ನಡ ಧ್ವಜ ಎಲ್ಲೆಡೆ ರಾರಾಜಿಸಿದವು.

ಜತೆಗೆ ಡೊಳ್ಳು ಕುಣಿತ, ಹಲಗೆಮೇಳ, ಚಿಟ್ಟಹಲಗೆ, ಮುತ್ತೈದೆಯರು ಕುಂಭ, ಆರತಿಯೊಂದಿಗೆ ರಥದ ಮುಂದೆ ಸಾಗಿದರು. ಕನ್ನಡ ಗೀತೆಗಳ ಗಾಯನಕ್ಕೆ ನೆರೆದಿದ್ದ ಯುವಕರು, ಮಕ್ಕಳು, ಹಿರಿಯರು, ಮಹಿಳೆಯರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಗ್ರಾಮದ ಹಿರಿಯರ ಒತ್ತಾಯಕ್ಕೆ ತಹಶೀಲ್ದಾರ ಸುರೇಶ ಚಾವಲರ ಅವರು ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ವಿವಿಧ ಸಂಘಗಳ ಮಹಿಳೆಯರು ಕೂಡ ಹೆಜ್ಜೆ ಹಾಕಿ ಸಂಭ್ರಮಿಸಿದರು. ಪಿಡಿಒ ಸಂಜು ದೊಡಮನಿ ಅವರೊಂದಿಗೆ ಹಿರಿಯ ಮುಖಂಡರು ಡೊಳ್ಳು ಬಾರಿಸಿ ತಮ್ಮ ಸಂಭ್ರಮ ಹಂಚಿಕೊಂಡರು.

ಈ ವೇಳೆ ತಹಶೀಲ್ದಾರ ಸುರೇಶ ಚಾವಲರ, ಬಿಇಒ ಆರಿಫ್ ಬಿರಾದಾರ, ಎಂ.ಎ.ಅತ್ತಾರ, ಎ.ಎಸ್.ಮುಕಿಹಾಳ, ತಾಪಂ ಎಡಿ ಸಿದ್ದು ಅಂಕಲಗಿ, ಪಿಡಿಒ ಸಂಜು ದೊಡಮನಿ, ರವಿ ಬಿರಾದಾರ, ಪ್ರಾಚಾರ್ಯ ಸುರೇಶ ಗಂಗನಳ್ಳಿ, ಶ್ರೀನಿವಾಸ ಕಾಂಬಳೆ, ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಅಶೋಕ ಕೊಳಾರಿ, ಶ್ರೀಶೈಲ ಮಠಪತಿ, ಪ್ರಭು ವಾಲಿಕಾರ, ಎನ್.ಎ.ಬಂಡಗರ, ಸಿದ್ದಯ್ಯ ಮಠಪತಿ, ಶರಣಪ್ಪ ಗುಬ್ಬೆವಾಡ, ಶಿವಪುತ್ರಗೌಡ ಕಡ್ಲೇವಾಡ, ಸಿದ್ದರಾಮ ಹಂಗರಗಿ, ಷಣ್ಮುಖಪ್ಪ ಸೋಮನಾಯಕ, ದವಲಪ್ಪ ಬಡದಾಳ, ಮುತ್ತು ಕಲಶೆಟ್ಟಿ, ವಿಠ್ಠಲ ಯರಗಲ್, ಶಂಕರಲಿಂಗ ನಡುವಿನಕೇರಿ, ನಿಂಗಪ್ಪ ಅಳ್ಳಗಿ, ಸಿದ್ದು ಹೀರಾಪುರ, ಬಸವರಾಜ ಹೀರಾಪುರ, ಅನೀಲ ಸಿಂದಗಿ, ಪ್ರಕಾಶ ಗಂಗನಳ್ಳಿ, ದತ್ತಾತ್ರೆಯ ಸೊನ್ನ, ಅಶೋಕ ಗಂಗನಳ್ಳಿ, ಶಿವು ಕಾಟಕರ ಸೇರಿದಂತೆ ಇತರರು ಭಾಗವಹಿಸಿದ್ದರು.

ಭೀಮಾ ಸೇತುವೆಯಿಂದ ಪ್ರಗತಿಪರ ಶಿಕ್ಷಣ ಸಂಸ್ಥೆಯ ಆವರಣದವರೆಗೆ ರಥವು ಸಂಚರಿಸಿತು. ಶಾಲಾ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು ರಥಯಾತ್ರೆಯಲ್ಲಿ ಭಾಗವಹಿಸಿದ್ದರು. ಆಲಮೇಲ ಎಸೈ ಕುಮಾರ ಹಾಡಕಾರ ಹಾಗೂ ಸಿಬ್ಬಂದಿ ಬಂದೋಬಸ್ತ್‌ ಕೈಗೊಂಡಿದ್ದರು.