ಶಿಗ್ಗಾಂವಿ: ತಾಲೂಕಿನ ದುಂಡಶಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ವ್ಯವಸ್ಥಾಪಕರು ವರ್ಗಾವಣೆಯಾಗಿ ೧೫ ದಿನ ಕಳೆದರೂ ಅವರ ಸ್ಥಾನಕ್ಕೆ ಹೊಸ ವ್ಯವಸ್ಥಾಪಕರನ್ನು ನೇಮಕ ಮಾಡದಿರುವುದರಿಂದ ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಅಗತ್ಯ ಸಿಬ್ಬಂದಿ ನಿಯೋಜಿಸಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

ವ್ಯವಸ್ಥಾಪಕರು ಇಲ್ಲದ ಕಾರಣ ಹೊಸ ಬೆಳೆ ಸಾಲಗಳ ಪ್ರಕ್ರಿಯೆ ಸ್ಥಗಿತಗೊಂಡಿದೆ. ರೈತರು ಚಿನ್ನಾಭರಣ ಇಟ್ಟು ಸಾಲ ಪಡೆಯಲು ಸಾಧ್ಯವಾಗದೆ ಸಂಕಷ್ಟ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಗ್ರಾಹಕರು ತಮ್ಮ ಖಾತೆಯಲ್ಲಿರುವ ಹಣವನ್ನು ಪಡೆಯಲು ತೆರಳಿದಾಗ, ₹ ೫೦ ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಹಣಕ್ಕಾಗಿ ಇಂದು-ನಾಳೆ ಬನ್ನಿ ಎಂಬ ಉತ್ತರ ನೀಡಲಾಗುತ್ತಿದೆ ಎಂದು ದೂರಿದ್ದಾರೆ.

ಬ್ಯಾಂಕ್‌ನಲ್ಲಿ ಪಾಸ್‌ಬುಕ್‌ಗಳ ಕೊರತೆ, ಪಾಸ್‌ಬುಕ್ ಪ್ರಿಂಟ್ ಸೌಲಭ್ಯ ಸಮರ್ಪಕವಾಗಿ ಇಲ್ಲದಿರುವುದು ಸೇರಿದಂತೆ ಹಲವು ಸಮಸ್ಯೆಗಳಿಂದ ಗ್ರಾಹಕರು ದಿನನಿತ್ಯ ಪರದಾಡುವಂತಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ಬ್ಯಾಂಕ್ ಸೇವೆಗಳ ವಿಳಂಬವಾಗುತ್ತಿದ್ದು, ಹಿರಿಯ ನಾಗರಿಕರು ಹಾಗೂ ರೈತರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಬ್ಯಾಂಕ್ ಶಾಖೆಗೆ ವ್ಯವಸ್ಥಾಪಕ ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಇಲ್ಲವಾದಲ್ಲಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಹಕರು ಹಾಗೂ ಸಾರ್ವಜನಿಕರು ಎಚ್ಚರಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ, ಮಾನವ ಹಕ್ಕು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ತಾಲೂಕು ಅಧ್ಯಕ್ಷ ಈರಣ್ಣಾ ನಾ.ಸಮಗೊಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಭರಮಗೌಡ ಪಾಟೀಲ, ಹೊಸೂರ ಗ್ರಾ.ಪಂ. ಮಾಜಿ ಅಧ್ಯಕ್ಷ ಚನ್ನಪ್ಪ ಬಿಂದ್ಲಿ, ಕುನ್ನೂರ ಅಂಜುಮನ್ ಸಮಿತಿ ಮಾಜಿ ಅಧ್ಯಕ್ಷ ಆಸ್ಪಕಲಿ ಮತ್ತೇಖಾನ, ಶಂಕರಗೌಡ ಅಜ್ಜನಗೌಡ್ರ, ನೀಲಕಂಠಗೌಡ ವೀ. ಪಾಟೀಲ, ಮಲ್ಲಪ್ಪ ಸೂರಗೊಂಡ, ಪ್ರಭಣ್ಣಾ ಹುರಳಿಕೊಪ್ಪಿ, ಸದ್ದಾಂ ಅರಳಿಕಟ್ಟಿ, ವೀರನಗೌಡ್ರ ದೇಸಾಯಿಗೌಡ್ರ, ಹೊಸೂರ ಶಿವನಗೌಡ್ರ ಪಾಟೀಲ, ಶೀಲಪ್ಪ ಲಮಾಣಿ ಅವರು ಪ್ರತಿಭಟನೆಗೆ ಮುಂದಾಗುವ ಮೊದಲೇ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.