ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಲೋಕಸಭೆ ಮೇಲಿನ ‘ಹೊಗೆ ಬಾಂಬ್’ ದಾಳಿ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಧುಮುಕಿದ ಇಬ್ಬರು ದುಷ್ಕರ್ಮಿಗಳನ್ನು ಹಿಡಿದು, ಹೆಡೆಮುರಿ ಕಟ್ಟಿದವರಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಕರ್ನಾಟಕದ ಮೂವರು ಸಂಸದರು ಸೇರಿದ್ದಾರೆ.‘ಬುಧವಾರ ಲೋಕಸಭಾ ಕಲಾಪ ನಡೆಯುತ್ತಿತ್ತು. ಮಧ್ಯಾಹ್ನ 12.45ರ ವೇಳೆಗೆ ಏಕಾಏಕಿ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಕೆಳಕ್ಕೆ ಧುಮುಕಿದರು. ಧುಮುಕುತ್ತಲೇ ಮಸೂದೆಯೊಂದನ್ನು ವಾಪಸ್ ಪಡೆಯುವಂತೆ ಕೂಗಿದರು, ಅಲ್ಲದೆ ‘ಮುರ್ದಾಬಾದ್’ ಎಂದು ಘೋಷಣೆ ಹಾಕುತ್ತಾ ಸದನದಲ್ಲಿ ಮುನ್ನುಗ್ಗುತ್ತಿದ್ದರು. ಅಷ್ಟರಲ್ಲಿ ಓರ್ವನನ್ನು ಅಲ್ಲಿದ್ದ ನಾಲ್ವರು ಸಂಸದರು ಹಿಡಿದು ನಾಲ್ಕೇಟು ಬಿಗಿದರು. ಇನ್ನೊಬ್ಬ ಓಡಲು ಯತ್ನಿಸಿದಾಗ ನಾನು ಸೇರಿದಂತೆ ಕೋಲಾರ ಸಂಸದ ಮುನಿಸ್ವಾಮಿ ಹಾಗೂ ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೇರಿ ಗಟ್ಟಿಯಾಗಿ ಹಿಡಿದುಕೊಂಡೆವು. ಆಗಲೂ ಆತ ಕೊಸರಿಕೊಂಡು ಹಿಡಿತ ತಪ್ಪಿಸಿಕೊಳ್ಳಲು ಯತ್ನಿಸಿದ. ಆದರೆ, ಆತನ ಯತ್ನ ಫಲಕಾರಿಯಾಗಲಿಲ್ಲ. ಆಗ ಇನ್ನಷ್ಟು ಸಂಸದರು ನಮ್ಮ ನೆರವಿಗೆ ಬಂದರು. ಬಳಿಕ ಇಬ್ಬರನ್ನೂ ಹೊರಗೆ ಕೊಂಡೊಯ್ದು ಪೊಲೀಸರಿಗೆ ಒಪ್ಪಿಸಿದೆವು’ ಎಂದು ಘಟನೆಯ ಸನ್ನಿವೇಶವನ್ನು ಸಂಸದ ನಳಿನ್ ಕುಮಾರ್ ಕಟೀಲ್ ದೆಹಲಿಯಿಂದ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಸಂಸತ್ನಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಜನತೆಯಿಂದ ಆಯ್ಕೆಯಾದ ಜನಪ್ರತಿನಿಧಿಗಳ ಕಲಾಪ ನಡೆಸುವ ಸ್ಥಳಕ್ಕೆ ನುಗ್ಗಿ ಈ ರೀತಿ ಉಗ್ರ ವರ್ತನೆ ತೋರಿಸಿರುವುದು ಸರ್ವಥಾ ದೇಶವಿರೋಧಿ ಕೃತ್ಯವೇ ಸರಿ. ಇಂತಹ ಬೆದರಿಕೆ, ಉಗ್ರ ಕೃತ್ಯಗಳಿಗೆ ಕೇಂದ್ರ ಸರ್ಕಾರ ಎಂದಿಗೂ ತಲೆಬಾಗುವುದಿಲ್ಲ, ಇದನ್ನು ದಿಟ್ಟತನದಿಂದ ಎದುರಿಸಿಯೇ ಸಿದ್ಧ ಎಂದು ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.