ಸಾರಾಂಶ
ಗದಗ: ರಾಷ್ಟ್ರಮಟ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಮ್ಮ ರಾಜ್ಯವು ಮೂರನೇ ಸ್ಥಾನದಲ್ಲಿರುವುದು ಅತ್ಯಂತ ಗರ್ವದ ಸಂಗತಿಯಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶನಿವಾರ ಜಿಲ್ಲಾಡಳಿತ, ಜಿಪಂ ಪ್ರವಾಸೋದ್ಯಮ ಇಲಾಖೆ, ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಇವುಗಳ ಸಹಯೋಗದಲ್ಲಿ ವಿವಿ ಕೌಶಲ್ಯ ವಿಕಾಸ ಭವನದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾಸರಗೋಡದಿಂದ ಕಾರವಾರದ ವರೆಗೆ 320 ಕಿ.ಮೀ. ಸುಂದರ ಪ್ರವಾಸಿ ತಾಣವಾಗಿದೆ. ಪ್ರವಾಸೋಧ್ಯಮ ಐಶಾರಾಮಿ ಜನರ ಖುಷಿಯ ಉದ್ಯಮ ಅಲ್ಲ. ಪ್ರವಾಸೋದ್ಯಮ ಜನರ ಮನಸ್ಸಿನಲ್ಲಿ ಬದಲಾವಣೆ ತರುವ ಶಕ್ತಿಯನ್ನು ಹೊಂದಿರುವ ವಿಷಯವಾಗಿದೆ. ಕೋಶ ಓದು, ದೇಶ ಸುತ್ತಬೇಕು ಎನ್ನುವ ಗಾದೆ ಇದೆ. ದೇಶ ಸುತ್ತುವುದರಿಂದ ಬದುಕಿನಲ್ಲಿ ಬದಲಾವಣೆ ಆಗಲು ಸಾಧ್ಯವಾಗುತ್ತದೆ ಎಂದರು.
ರಾಜ್ಯ ಸರ್ಕಾರ ಪ್ರವಾಸೋದ್ಯಮಕ್ಕೆ ತನ್ನದೇ ಆದ ನೀತಿ ಹೊಂದಿದೆ. ಪ್ರವಾಸೋದ್ಯಮ ಆದಾಯದ ಮೂಲ ಅಂತ ಹೇಳುತ್ತಾರೆ. ಆದರೆ, ಪ್ರವಾಸೋದ್ಯಮ ದುಡ್ಡಿಗಾಗಿ ಮಾಡುವುದಲ್ಲ. ಜನರ ಬದುಕಿನಲ್ಲಿ ಜ್ಞಾನಾರ್ಜನೆ ಮಾಡುವ ಕೇಂದ್ರವನ್ನಾಗಿ ನಮ್ಮ ಸರ್ಕಾರ ಪರಿವರ್ತನೆ ಮಾಡಿದೆ ಎಂದು ತಿಳಿಸಿದರು.ಭಾರತ ಪ್ರವಾಸೋದ್ಯಮ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ವಿದೇಶದಲ್ಲಿ ಜೋಗ ಜಲಪಾತ, ಲಕ್ಕುಂಡಿಯ ಬಸ್ತಿ, ಬಾದಾಮಿ, ಐಹೊಳೆಯಲ್ಲಿರುವ ಐತಿಹಾಸಿಕ ದೇವಸ್ಥಾನಗಳು ಕಾಣಸಿಗುವುದಿಲ್ಲ. ಜಿಲ್ಲೆಯ 48 ತಾಣ ಸೇರಿ ರಾಜ್ಯದ 1200 ತಾಣಗಳು ಒಳಗೊಂಡು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಗದಗನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ರಾತ್ರಿ ವೇಳೆ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡುವ ಚಿಂತನೆ ಇದೆ ಎಂದರು.
ಗದಗ ನೆಲ ಐತಿಹಾಸಿಕ ಪ್ರವಾಸಿ ತಾಣ: ಜಿಲ್ಲೆಯ ನೆಲ ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಇಲ್ಲಿಂದ 20 ಕಿ.ಮೀ ಸುತ್ತಲೂ ವಿಶ್ವ ಪಾರಂಪರಿಕ ಸ್ಥಳ ಆಗಲು ಅರ್ಹತೆ ಪಡೆದ ಸ್ಥಳಗಳಾಗಿವೆ. ಹತ್ತಿರದ ಲಕ್ಕುಂಡಿಯಲ್ಲಿ ತಲಾ 101 ಭಾವಿ, ದೇವಸ್ಥಾನಗಳಿವೆ. ವಿಶಾಲವಾದ ಕೆರೆ, ದೊಡ್ಡಬಸಪ್ಪನ ದೇವಾಲಯದ ಶೈಲಿ ಡಂಬಳದಲ್ಲಿದೆ. ಪ್ರಾಚಿನವಾದ ದೇವಾಲಯ, ಪರಿಸರ, ಸೌಹಾರ್ದಯುತ ಬದುಕು ಮುಳಗುಂದದಲ್ಲಿ ಸಿಗುತ್ತವೆ. ಗದಗ ತಾಲೂಕು ಸೇರಿದಂತೆ ಜಿಲ್ಲೆಯ ಸೂಡಿ, ಕೋಟುಮಚಗಿ, ಗಜೇಂದ್ರಗಡ, ನರಗುಂದ ಇವೆಲ್ಲವೂ ಪ್ರವಾಸಿ ತಾಣಗಳಾಗಿವೆ. ಇವೆಲ್ಲವುಗಳು ಗದಗ ಜಿಲ್ಲೆಯಲ್ಲಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ. ರಾಜ್ಯ ಸರ್ಕಾರದಿಂದ 1200 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಅದರಲ್ಲಿ 48 ತಾಣಗಳು ಗದಗ ಜಿಲ್ಲೆಯಲ್ಲಿವೆ ಎನ್ನುವುದು ನಮ್ಮ ಹೆಮ್ಮೆಯಾಗಿದೆ. ಕಪ್ಪತ್ತಗುಡ್ಡ, ಪ್ರಾಣಿ ಸಂಗ್ರಹಾಲಯ ಸೇರಿದಂತೆ ಹಲವಾರು ಪ್ರದೇಶಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೆಲವೇ ತಿಂಗಳಲ್ಲಿ ಯುನೆಸ್ಕೊದಿಂದ ಲಕ್ಕುಂಡಿ ಐತಿಹಾಸಿಕ ವಿಶ್ವ ಪಾರಂಪರಿಕ ಸ್ಥಳ ಅಂತ ಗುರುತಿಸುವ ಕಾಲ ಬರಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.ಲಕ್ಕುಂಡಿಯಲ್ಲಿ ಈಗಾಗಲೇ ಉತ್ಖನನ ಪ್ರಾರಂಭಿಸಲಾಗಿದೆ. ಒಂದೇ ದಿನದಲ್ಲಿ 1100 ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸಲಾಗಿದೆ. ನಮ್ಮ ಸುತ್ತ-ಮುತ್ತಲೂ ಐತಿಹಾಸಿಕ ಪ್ರಾಚ್ಯಾವಶೇಷ ಸಂಪತ್ತು ಇದೆ. ಇದರ ಬಗ್ಗೆ ವಿಶೇಷ ಅಭಿಮಾನ ಇದೆ. ವಿದೇಶಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಅತೀ ಹೆಚ್ಚು ಪ್ರವಾಸಿ ತಾಣಗಳಿವೆ ಎಂದರು.ನಂತರ ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿ ಜಯ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಬಿ.ಬಿ.ಅಸೂಟಿ, ಸಿದ್ದು ಪಾಟೀಲ, ಪ್ರಭು ಬುರಬುರೆ, ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಸುರೇಶ ನಾಡಗೌಡರ, ಎಸ್ಪಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್, ಡಾ. ಶರಣು ಗೋಗೇರಿ, ಗಂಗಪ್ಪ ಎಂ, ಕೊಟ್ರೇಶ್ ವಿಭೂತಿ, ಪ್ರಶಾಂತ್ ಜೆ. ಸಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.