ಬಿಜೆಪಿಗೆ ಕೈ ಕೊಟ್ಟ ಇಬ್ಬರು ಶಾಸಕರು!

| Published : Feb 28 2024, 02:35 AM IST / Updated: Feb 28 2024, 08:03 AM IST

bjp

ಸಾರಾಂಶ

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಎಂಟು ವರ್ಷಗಳ ಬಳಿಕ ಮತ್ತೆ ಅಡ್ಡಮತದಾನ ಸದ್ದು ಮಾಡಿದ್ದು, ಪ್ರತಿಪಕ್ಷ ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಎಸ್‌.ಟಿ.ಸೋಮಶೇಖರ್ ಅವರು ವಿಪ್‌ ಉಲ್ಲಂಘಿಸಿ ಆಡಳಿತಾರೂಢ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಎಂಟು ವರ್ಷಗಳ ಬಳಿಕ ಮತ್ತೆ ಅಡ್ಡಮತದಾನ ಸದ್ದು ಮಾಡಿದ್ದು, ಪ್ರತಿಪಕ್ಷ ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಎಸ್‌.ಟಿ.ಸೋಮಶೇಖರ್ ಅವರು ವಿಪ್‌ ಉಲ್ಲಂಘಿಸಿ ಆಡಳಿತಾರೂಢ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. 

ಬಿಜೆಪಿಯ ಮತ್ತೊಬ್ಬ ಶಾಸಕ ಹಾಗೂ ಮಾಜಿ ಸಚಿವ ಶಿವರಾಂ ಹೆಬ್ಬಾರ್ ಅವರು ಬೆಂಗಳೂರಿನಲ್ಲೇ ಇದ್ದರೂ ವಿಧಾನಸೌಧದತ್ತ ಸುಳಿಯದೆ ಗೈರು ಹಾಜರಾಗುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‌ ಪರ ಒಲವು ತೋರಿದ್ದಾರೆ.

ಇದರಿಂದಾಗಿ, ತೀವ್ರ ಕುತೂಹಲ ಕೆರಳಿಸಿದ ರಾಜ್ಯಸಭೆ ಚುನಾವಣೆಯ ಜಿದ್ದಾಜಿದ್ದಿನಲ್ಲಿ ಐದನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕು ಎಂಬ ಬಿಜೆಪಿ-ಜೆಡಿಎಸ್ ತಂತ್ರಗಾರಿಕೆ ವಿಫಲವಾಗಿದ್ದು, ಕಾಂಗ್ರೆಸ್‌ನ ಮೂವರು, ಬಿಜೆಪಿಯ ಒಬ್ಬರು ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್‌ನಿಂದ ಅಜಯ್ ಮಾಕನ್, ಜಿ.ಸಿ.ಚಂದ್ರಶೇಖರ್ ಮತ್ತು ನಾಸಿರ್ ಹುಸೇನ್, ಬಿಜೆಪಿಯಿಂದ ನಾರಾಯಣಸಾ ಕೆ.ಭಾಂಡಗೆ ಗೆಲುವು ಸಾಧಿಸಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲನ್ನಪ್ಪಿದ್ದಾರೆ.

ಫಲ ಕೊಡದ ವಿಪ್‌: ಪಕ್ಷದ ಇತರ ಶಾಸಕರಂತೆ ಈ ಉಭಯ ಶಾಸಕರಿಗೂ ಬಿಜೆಪಿ ವಿಪ್ ಜಾರಿಗೊಳಿಸಿತ್ತು. ಅವರ ಶಾಸಕರ ಭವನದ ಕೊಠಡಿಯ ಬಾಗಿಲಿಗೆ ಅಂಟಿಸಿತ್ತು. ಇ ಮೇಲ್‌, ವಾಟ್ಸಾಪ್‌ ಮೂಲಕವೂ ವಿಪ್‌ ಕಳುಹಿಸಿತ್ತು. ಅವರ ಆಪ್ತ ಸಹಾಯಕರಿಗೂ ವಿಪ್ ಜಾರಿ ಪತ್ರ ರವಾನಿಸಿತ್ತು. ಆದರೂ ಫಲ ನೀಡಲಿಲ್ಲ.

ಅಡ್ಡಮತ ಭೀತಿ: ಮತಗಳ ಕ್ರೋಢೀಕರಣಕ್ಕಾಗಿಯೇ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ತನ್ನ ಎರಡನೇ ಅಭ್ಯರ್ಥಿಯನ್ನಾಗಿ ಕುಪೇಂದ್ರರೆಡ್ಡಿ ಅವರನ್ನು ಕಣಕ್ಕಿಳಿಸಿತು. 

ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕಿಳಿದಾಗಲೇ ಅಡ್ಡಮತದಾನ ಭೀತಿ ಎದುರಾಯಿತು. ಚುನಾವಣೆ ನಡೆಯುವುದು ಖಚಿತವಾಗುತ್ತಿದ್ದಂತೆ ಶಾಸಕರಾದ ಎಸ್‌.ಟಿ.ಸೋಮಶೇಖರ್‌ ಮತ್ತು ಶಿವರಾಂ ಹೆಬ್ಬಾರ್‌ ನಡೆ ನಿಗೂಢವಾಗಿದ್ದು, ಬಿಜೆಪಿ ಮುಖಂಡರಿಗೂ ಇಬ್ಬರ ಮೇಲೆ ಅನುಮಾನ ಇತ್ತು. 

ಈ ಹಿನ್ನೆಲೆಯಲ್ಲಿ ಬಿಜೆಪಿಯ ಮುಖಂಡರು ತನ್ನೆಲ್ಲಾ ಶಾಸಕರಿಗೆ ವಿಪ್‌ ಜಾರಿಗೊಳಿಸಿತ್ತು. ಯಾರು, ಯಾರಿಗೆ ಮತನ್ನು ಚಲಾಯಿಸಬೇಕು ಎಂಬುದು ಸಹ ಪೂರ್ವ ನಿಗದಿಯಾಗಿತ್ತು. ಹೀಗಿದ್ದರೂ ಎಸ್‌.ಟಿ.ಸೋಮಶೇಖರ್‌ ಅಡ್ಡ ಮತದಾನ ಮಾಡುವ ಮೂಲಕ ಸೆಡ್ಡು ಹೊಡೆದಿದ್ದಾರೆ.

ಮಾಕನ್‌ ಪರ ಅಡ್ಡಮತ: ಸೋಮಶೇಖರ್‌ ಅವರು ಪಕ್ಷದ ವಿಪ್‌ ಉಲ್ಲಂಘಿಸಿ ಕಾಂಗ್ರೆಸ್‌ನ ಅಜಯ್ ಮಾಕನ್‌ಗೆ ಮತ ಚಲಾಯಿಸುವ ಮೂಲಕ ಅಡ್ಡಮತದಾನ ಮಾಡಿದರು. ಮತವನ್ನು ಯಾರಿಗೆ ಹಾಕಲಾಗಿದೆ ಎಂಬುದನ್ನು ಪಕ್ಷದ ಏಜೆಂಟ್‌ಗೆ ತೋರಿಸಬೇಕು. 

ಅಂತೆಯೇ ಪಕ್ಷದ ಏಜೆಂಟ್‌ರಾದ ಅರವಿಂದ ಬೆಲ್ಲದ್‌ ಅವರಿಗೆ ತೋರಿಸಿಯೇ ಮತದಾನ ಮಾಡಿದರು. ಈ ವೇಳೆ ಬೆಲ್ಲದ್‌ ಅವರು ಇದು ತಪ್ಪು, ಬೇರೊಂದು ಮತಪತ್ರ ತೆಗೆದುಕೊಂಡು ಸರಿಯಾಗಿ ಮತ ಚಲಾಯಿಸಿ ಎಂದಿದ್ದಾರೆ. 

ಆದರೆ, ಅದನ್ನು ಲೆಕ್ಕಿಸದ ಸೋಮಶೇಖರ್, ನಿಮಗೆ ತೋರಿಸಬೇಕು ಎಂಬ ಕಾರಣಕ್ಕೆ ತೋರಿಸುತ್ತಿದ್ದೇನೆ ಎಂದು ಹೇಳಿ ತಮ್ಮ ಮತಪತ್ರವನ್ನು ಪೆಟ್ಟಿಗೆಯಲ್ಲಿ ಹಾಕಿದರು ಎನ್ನಲಾಗಿದೆ.

ಅಲ್ಲದೆ, ಮತದಾನ ಮಾಡುವುದಕ್ಕೂ ಮೊದಲು ಸೋಮಶೇಖರ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಕೆಲಹೊತ್ತು ಚರ್ಚೆ ನಡೆಸಿ ಮತದಾನ ಮಾಡಿದರು. ಸೋಮವಾರ ರಾತ್ರಿಯೂ ಸೋಮಶೇಖರ್ ಅವರು ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದ ಹೋಟೆಲ್‌ಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.

ಸೋಮಶೇಖರ್‌ ಅವರು ಕಳೆದ ಕೆಲ ತಿಂಗಳುಗಳಿಂದ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಪರ ಹೆಚ್ಚು ಗುರುತಿಸಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆ ಸತತ ಒಡನಾಟ ಹೊಂದಿದ್ದರು. 

ಸಭೆ-ಸಮಾರಂಭಗಳಲ್ಲಿ ಶಿವಕುಮಾರ್‌ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಮಾತ್ರವಲ್ಲದೇ, ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಅವರ ಕಾರ್ಯದ ಬಗ್ಗೆ ಕಾಂಗ್ರೆಸ್‌ನವರೂ ನಾಚುವಂತೆ ಬಹಿರಂಗವಾಗಿಯೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ಭರವಸೆ ನೀಡಿ ‘ಕೈ’ಹಿಡಿದ ಶಾಸಕ ": ಆದರೆ, ಸೋಮವಾರ ತಮ್ಮನ್ನು ಸಂಪರ್ಕಿಸಿದ ಬಿಜೆಪಿ ನಾಯಕರೊಂದಿಗೆ ನಾಜೂಕಾಗಿಯೇ ಮಾತನಾಡಿದ್ದ ಸೋಮಶೇಖರ್‌, ಯಾವುದೇ ಕಾರಣಕ್ಕೂ ಪಕ್ಷದ ವಿರುದ್ಧ ಮತ ಚಲಾಯಿಸುವುದಿಲ್ಲ ಎಂಬ ಭರವಸೆ ನೀಡಿದ್ದರು. 

ಆದರೆ, ಅಂತಿಮವಾಗಿ ಅಧಿಕೃತವಾಗಿಯೇ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡುವ ಮೂಲಕ ಕಾಂಗ್ರೆಸ್‌ನತ್ತ ದೃಢ ಹೆಜ್ಜೆ ಇಟ್ಟರು.

ದೂರ ಉಳಿದು ಕೈಗೆ ಹತ್ತಿರವಾದ ಹೆಬ್ಬಾರ್‌:ಇನ್ನು ಶಿವರಾಂ ಹೆಬ್ಬಾರ್‌ ಮತದಾನದಿಂದ ದೂರು ಉಳಿದು ಕಾಂಗ್ರೆಸ್‌ಗೆ ಪರವಾಗಿರುವುದನ್ನು ತೋರಿಸಿದ್ದಾರೆ. ಶಿವರಾಂ ಹೆಬ್ಬಾರ್‌ ಅವರು ಮತದಾನ ಮಾಡಲು ಆಗಮಿಸುತ್ತಾರೆ ಎಂದು ಬಿಜೆಪಿಗರು ನಿರೀಕ್ಷಿಸಿದ್ದರು. 

ಆದರೆ, ಮತದಾನದ ಅವಧಿ ಮುಗಿಯುವವರೆಗೂ ಬಾರದಿದ್ದಾಗ ಮತದಾನದಿಂದ ದೂರ ಉಳಿದಿರುವುದು ಖಚಿತವಾಯಿತು. ಮತದಾನಕ್ಕೆ ಆಗಮಿಸದ ಶಿವರಾಂ ಹೆಬ್ಬಾರ್ ಅವರಿಗೆ ಕರೆತರಲು ನಡೆಸಿದ ಪ್ರಯತ್ನ ವಿಫಲವಾಯಿತು. 

ವಿಪಕ್ಷ ನಾಯಕ ಆರ್. ಅಶೋಕ್, ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಸತತವಾಗಿ ಮೊಬೈಲ್‌ ಕರೆ ಮಾಡಿದರೂ ಕೊನೆಯವರೆಗೂ ಅದು ಸ್ವಿಚ್ಡ್‌ ಆಫ್ ಆಗಿತ್ತು.

ರಾಜ್ಯದಿಂದ ಗೆದ್ದವರು
* ಅಜಯ್‌ ಮಾಕನ್‌ - ಕಾಂಗ್ರೆಸ್‌
* ಜಿ.ಸಿ.ಚಂದ್ರಶೇಖರ್‌ - ಕಾಂಗ್ರೆಸ್‌
* ನಾಸಿರ್‌ ಹುಸೇನ್‌ - ಕಾಂಗ್ರೆಸ್‌
* ನಾರಾಯಣಸಾ ಭಾಂಡಗೆ - ಬಿಜೆಪಿ