ಸಾರಾಂಶ
ರಾಮನಗರ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಜನರನ್ನು ಒಟ್ಟುಗೂಡಿಸಿ, ಸಮಗ್ರ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿರುವ ಏಕೈಕ ಸಂಸ್ಥೆಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ವನರಾಜ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕಸಾಪ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಆಂಗ್ಲ ಭಾಷೆಯ ಹೊಡೆತ ತಪ್ಪಿಸಲು ನಾಡು, ನುಡಿ, ಸಂಸ್ಕೃತಿಯನ್ನು ಪ್ರವರ್ಧನೆ ಮಾಡಬೇಕೆನ್ನುವ ಉದ್ದೇಶದಿಂದ ಶ್ರಮಿಸುತ್ತಿದೆ. ಹಲವು ಸಾಹಿತ್ಯದ ಕೊಡುಗೆಗಳನ್ನು ನೀಡುವ ಮೂಲಕ ಹೆಮ್ಮರವಾಗಿ ಬೆಳೆದಿದೆ ಎಂದರು.ನಿವೃತ್ತ ಉಪನ್ಯಾಸಕ ಕರೀಗೌಡ ಮಾತನಾಡಿ, ಎಲ್ಲರ ನಿಕಟ ಮತ್ತು ನಿರಂತರವಾಗಿ ಸಾಹಿತ್ಯದ ಮೂಲಕ ಎಲ್ಲರನ್ನು ಏಕದೃಷ್ಠಿಯಿಂದ ಒಟ್ಟುಗೂಡಿಸುವ ಕನ್ನಡಿಗರ ಜನಸಾಮಾನ್ಯರತ್ತ ಹೆಮ್ಮೆಯ ಸಂಸ್ಥೆಯಾಗಿದೆ. ಕನ್ನಡ ಭಾಷೆಯ ಪ್ರಾತಿನಿಧಿಕ ಸಂಸ್ಥೆಯಾದ ಕಸಾಪ ಕನ್ನಡ ಭಾಷೆಯ ಬೆಳವಣಿಗೆಗೆ ಬಹಳ ಅರ್ಥಪೂರ್ಣವಾಗಿ ಕೆಲಸ ಮಾಡಿದೆ. ದೇಶದಲ್ಲೇ ಅತಿ ದೊಡ್ಡ ಸಂಖ್ಯೆಯ ಸದಸ್ಯರನ್ನು ಹೊಂದಿದ್ದು, ಎಲ್ಲರಲ್ಲೂ ಅಳವಾದ ಬೇರು ಬಿಟ್ಟಿರುವ ಸಂಸ್ಥೆಯಾಗಿದೆ. ಕಾರ್ಯಕ್ರಮಗಳು ಭಿನ್ನ, ಭಿನ್ನವಾಗಿ ಕೂಡಿದ್ದು, ನಾಡಿನ ಕಲೆ, ಸಾಹಿತ್ಯ ಸಂಸ್ಕೃತಿ ಅಭಿವೃದ್ದಿಗಾಗಿ ಗಟ್ಟಿಯಾಗಿ ಉಳಿದಿದೆ. ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಭಾಷೆ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.
ಜನಪದ ಸಂಶೋಧಕ ಡಾ. ಎಂ.ಬೈರೇಗೌಡ ಮಾತನಾಡಿ, ಕನ್ನಡ ಭಾಷೆ ಅನನ್ಯ ಮತ್ತು ಅಜರಾಮರವಾದುದು. ಸಮೃದ್ಧತೆ ಅಡಗಿದೆ. ಕೇಂದ್ರ ಕಸಾಪ ಅಜೀವ ಸದಸ್ಯರು ಮತ್ತು ಹಿರಿಯ ಸಾಹಿತಿಗಳ ಆಶಯ ಮತ್ತು ಆಶೋತ್ತರಗಳಿಗೆ ಸ್ವಂದಿಸಿ, ಮೌನ ಕಾಂತ್ರಿಯ ಆಂದೋಲನವಾಗಬೇಕು. ಕನ್ನಡ ನಾಡು ನುಡಿಗಾಗಿ ಕನ್ನಡಿಗರಲ್ಲಿ ಜೀವ ತುಂಬುವ ಕೆಲಸ ಮಾಡಬೇಕಾಗಿದೆ. ಆತ್ಮವಲೋಕನ ಮಾಡಿಕೊಂಡಿ ಮಾದರಿಯಾಗಿ ರಚನಾತ್ಮಕವಾದ ಕೆಲಸಗಳನ್ನ ಮಾಡುವ ಮುಖಾಂತರ ಜಿಲ್ಲಾ ಮತ್ತು ತಾಲ್ಲೂಕು ಕಸಾಪಕ್ಕೆ ಶಕ್ತಿ ತುಂಬುವ ಮೂಲಕ ಕನ್ನಡವನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದು ಹೇಳಿದರು.ಚನ್ನಪಟ್ಟಣ ತಾಲ್ಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ಮತ್ತೀಕೆರೆ ಚಲುವರಾಜು ಮಾತನಾಡಿ, ಕನ್ನಡಿಗರ ಆಶಯದಂತೆ ಕಸಾಪ ಸಂಸ್ಥೆ ಹುಟ್ಟುಹಾಕಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಟ್ಟುಗೂಡಿಸುವ ಕೆಲಸವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಮಾಡಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ, ನಾಡು, ನುಡಿ, ಸಾಹಿತ್ಯ ಬೆಳವಣಿಗೆ ಎನ್ನುವುದ ಕನ್ನಡ ಸಾಹಿತ್ಯ ಪರಿಷತ್ತು ಮೂಲ ತತ್ವವಾಗಿದೆ. ಕನ್ನಡ ಜನರ ಮತ್ತು ಭಾಷೆಯನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಹುಟ್ಟಿದ ಸಂಸ್ಥೆಯೇ ಸಾಹಿತ್ಯ ಪರಿಷತ್ತು. ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಪ್ರತಿಯೊಬ್ಬ ಕನ್ನಡಿಗರು ಪರಭಾಷಾ ವ್ಯಾಮೋಹವನ್ನು ಬಿಟ್ಟು ಮಾತೃಭಾಷೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.ಬೋಧನಾಂಗ, ಪ್ರಕಟಣಾಂಗ, ಸಂಶೋಧನಾಂಗಗಳನ್ನು ತೆರೆದು ರಾಜ್ಯಾದ್ಯಂತ ವಿಸ್ತರಿಸಿ ಮನೆ, ಮನಗಳಿಗೆ ಸಾಹಿತ್ಯವನ್ನು ಉಣಬಡಿಸಿದ ಕೀರ್ತಿ ಸಾಹಿತ್ಯ ಪರಿಷತ್ತಿಗೆ ಸಲುತ್ತದೆ. ಜತೆಗೆ ಹಿರಿಯರ ಆಶಯದಂತೆ ನೆಲಮೂಲ ಸಂಸ್ಕೃತಿಯಾದ ಕಲೆ, ಸಾಹಿತ್ಯ, ಜಾನಪದದಿಂದ ನಾವುಗಳು ಕನ್ನಡಿಗರಲ್ಲಿ ಕನ್ನಡತನವನ್ನು ಮೈಗೂಡಿಸುವ ಕೆಲಸ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಕಸಾಪ ತಾಲೂಕು ಸಂಚಾಲಕ ಬಿ.ಟಿ.ರಾಜೇಂದ್ರ, ಜಿಲ್ಲಾ ಸಂಚಾಲಕ ಪುಟ್ಟಸ್ವಾಮಿ ಚಕ್ಕರೆ, ಹಿರಿಯರಾದ ಇಂಜಿನಿಯರ್ ಶಿವಣ್ಣ, ಹಾಜರಿದ್ದರು.9ಕೆಆರ್ ಎಂಎನ್ 1.ಜೆಪಿಜಿ
ರಾಮನಗರದಲ್ಲಿ ಜಿಲ್ಲಾ ಕಸಾಪ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ವನರಾಜ್, ಮತ್ತು ಸಂಶೋಧಕರಾದ ಡಾ. ಎಂ. ಬೈರೇಗೌಡ. ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಹಾಗೂ ಕಸಾಪ ಪದಾಧಿಕಾರಿಗಳು.