ಕಸ್ತೂರಿ ರಂಗನ್ ವರದಿ ವರದಿ ಸಂಪೂರ್ಣವಾಗಿ ತಿರಸ್ಕಾರ: ಖಂಡ್ರೆ

| Published : Dec 24 2024, 12:47 AM IST

ಸಾರಾಂಶ

. ಜನರ, ಜನಪ್ರತಿನಿಧಿಗಳ ಬೇಡಿಕೆಯಂತೆ ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಾಡಿದ್ದೇವೆ ಎಂದು ಕೇಂದ್ರಕ್ಕೆ ಪುನರುಚ್ಚರಿಸಿದ್ದೇವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಕನ್ನಡಪ್ರಬ ವಾರ್ತೆ ಸುಬ್ರಹ್ಮಣ್ಯ

ಕಸ್ತೂರಿ ರಂಗನ್ ವರದಿ ಬಗೆಗಿನ ಆತಂಕ, ಗೊಂದಲಗಳನ್ನು ನಮ್ಮ ಸರ್ಕಾರ ನಿವಾರಣೆ ಮಾಡಿದೆ. ಕಸ್ತೂರಿ ರಂಗನ್ ವರದಿಯನ್ನು ನಾವು ತಿರಸ್ಕಾರ ಮಾಡಿದ್ದೇವೆ. ಶತಮಾನಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ ಮತ್ತು ಅರಣ್ಯದಂಚಿನ ಜನರೇ ಅರಣ್ಯ ರಕ್ಷಿಸುತ್ತಿದ್ದಾರೆ‌. ಅರಣ್ಯ ರಕ್ಷಣೆಗೆ ಈಗಾಗಲೇ ನಮ್ಮಲ್ಲಿ ಯೋಜನೆಗಳಿವೆ. ಜನರ, ಜನಪ್ರತಿನಿಧಿಗಳ ಬೇಡಿಕೆಯಂತೆ ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಾಡಿದ್ದೇವೆ ಎಂದು ಕೇಂದ್ರಕ್ಕೆ ಪುನರುಚ್ಚರಿಸಿದ್ದೇವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದರು.

ಜನರು ಪಶ್ಚಿಮ ಘಟ್ಟ ಸಂರಕ್ಷಣೆಗೂ ಆದ್ಯತೆ ನೀಡಬೇಕು. ಜಂಟಿ ಸರ್ವೆಗೆ ಕಂದಾಯ, ಅರಣ್ಯ ಇಲಾಖೆ ಸಚಿವರು, ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಜಂಟಿ ಸುತ್ತೋಲೆ ಹೊರಡಿಸಿ, ಇಡೀ ಕರ್ನಾಟಕ ರಾಜ್ಯದ 31 ಜಿಲ್ಲೆಗಳಲ್ಲಿ ಜಂಟಿ ಸರ್ವೆ ನಡೆಸಲು ಸಮಿತಿಗಳನ್ನು ರಚಿಸಲಾಗಿದೆ. ಅದರಂತೆ ಮುಂದಿನ ಆರು ತಿಂಗಳಲ್ಲಿ ಜಂಟಿ ಸರ್ವೆ ನಡೆಸಿ ವಾಸ್ತವದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಈ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಯಲಿದೆ ಎಂದರು.ಸುಬ್ರಹ್ಮಣ್ಯ ಸಮೀಪದ ಕೊಲ್ಲಮೊಗ್ರು ಗ್ರಾಮದ ಕಡಮಕಲ್ಲು- ಕೊಡಗಿನ ಗಾಳಿಬೀಡು ಸಂಪರ್ಕ ರಸ್ತೆ ಅಭಿವೃದ್ಧಿ ಬಗ್ಗೆ ಸಭೆಯಲ್ಲಿ ಚರ್ಚಿಸಿ ರಸ್ತೆ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಕುಮಾರಪರ್ವತ ಚಾರಣಿಗರಿಗೆ ಸೌಲಭ್ಯ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಕಾಡಾನೆ ದಾಳಿ ನಿಯಂತ್ರಿಸಲು ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.ಸಂಸದ ಸಾಗರ್ ಖಂಡ್ರೆ, ಡಿಸಿಎಫ್ ಆಂತೋಣಿ ಮರಿಯಪ್ಪ, ಎಸಿಎಫ್ ಪ್ರವೀಣ್ ಕುಮಾರ್, ಆರ್‌ಎಫ್‌ಒಗಳಾದ ವಿಮಲ್ ಬಾಬು, ಮಂಜುನಾಥ್, ಸಂಧ್ಯಾ, ದೇವಳದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ ಮತ್ತಿತರರು ಉಪಸ್ಥಿತರಿದ್ದರು.