ಕನ್ನಡಪ್ರಭ ವಾರ್ತೆ ಪಾವಗಡ

ಕರ್ನಾಟಕ ರಾಜ್ಯ ಮಾದರ ಮಹಾಸಭಾದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಹಾರ ಇಲಾಖೆಯ ನಿವೃತ್ತ ಇನ್ಸ್‌ಪೆಕ್ಟರ್‌ ಕತಿಕ್ಯಾತನಹಳ್ಳಿ ನರಸಿಂಹಪ್ಪ ಹಾಗೂ ಕಾರ್ಯದರ್ಶಿಯಾಗಿ ಪಿ.ಜಿ.ಕುಮಾರ್‌ ಅವಿನಾಶ್ ಸೇರಿ 30ಕ್ಕೂ ಹೆಚ್ಚು ಮಂದಿ ಸಭಾದ ವಿವಿಧ ಘಟಕಗಳ ಪದಾಧಿಕಾರಿಗಳಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ನರಸಿಂಹಪ್ಪ ಮಾತನಾಡಿ, ಅನೇಕ ವರ್ಷಗಳಿಂದ ಮಾದಿಗ ಸಮಾಜ ತುಳಿತಕ್ಕೊಳಗಾಗಿದ್ದು, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿನ್ನಡೆ ಹೊಂದಿದೆ. ಆದ್ದರಿಂದ ಮಾದಿಗ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಹಿರಿಯ ಮುಖಂಡರು ರಾಜ್ಯ ಮಾದರ ಮಹಾಸಭಾ ಸ್ಥಾಪಿಸಿದ್ದಾರೆ. ಇದು ಸಮಶ್ದ ಪ್ರಗತಿಗೆ ಪೂರಕವಾಗಿದೆ. ಈ ಹಿನ್ನೆಲೆ ತಾಲೂಕಿನಲ್ಲಿ ಮಾದಿಗ ಸಮಾಜದಿಂದ 20 ಸಾವಿರ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಸಮಾಜದ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ತಲಾ ₹500 ಸದಸ್ಯತ್ವ ನೋಂದಣಿ ಶುಲ್ಕ ವಿಧಿಸಿದ್ದು,

ಹಿರಿಯ ಮುಖಂಡರ ಸಮ್ಮುಖದಲ್ಲಿ ಈಗಾಗಲೇ ತಾಲೂಕಿನಾದ್ಯಂತ ಹೋಬಳಿ ಘಟಕಗಳನ್ನು ರಚಿಸಲಾಗಿದೆ. ಅನೇಕ ಗ್ರಾಮಗಳಲ್ಲಿ ಸದಸ್ಯತ್ವ ನೋಂದಣಿ ಕಾರ್ಯ ಆರಂಭಿಸಲಾಗಿದೆ. ಮಾದಿಗ ಸಮಾಜ ತಾಲೂಕಿನಾದ್ಯಂತ ಸಂಘಟಿತರಾಗಲು ಮನವಿ ಮಾಡಿ, ಮಾದರ ಮಹಾಸಭಾ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಮಾಜದ ಎಲ್ಲಾ ಮುಖಂಡರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಮಹಾಸಭಾದ ತಾಲೂಕು ಕಾರ್ಯದರ್ಶಿ ಪಿ.ಜಿ.ಕುಮಾರ್‌ ಅವಿನಾಶ್‌ ಮಾತನಾಡಿ, ಮಾದರ ಮಹಾಸಭಾ ಮಾದಿಗ ಸಮಾಜದ ಪ್ರಗತಿಗೆ ಪೂರಕವಾಗಿದೆ. ತಾಲೂಕಿನಲ್ಲಿ ಸಮುದಾಯ ಸಂಘಟಿತರಾಗಿ ಮಾದರ ಮಹಾಸಭಾಕ್ಕೆ ಕೈಜೋಡಿಸುತ್ತಿರುವುದು ಸಂತಸ ತಂದಿದೆ. ಹಿರಿಯ ಮುಖಂಡರ ಸಲಹೆ ಸೂಚನೆಗಳಂತೆ ಮುನ್ನಡೆಯುತ್ತಿದ್ದು, ಈಗಾಗಲೇ ತಾಲೂಕು ಘಟಕ ಹಾಗೂ ತಾಲೂಕು ಸಲಹಾ ಸಮಿತಿ ರಚನೆಯಾಗಿದೆ. ಹೋಬಳಿ ಘಟಕಗಳು ಸ್ಥಾಪನೆಯಾಗುತ್ತಿದ್ದು, ಮಾದರ ಮಹಾ ಸಭಾದ ಸದಸ್ಯತ್ವ ನೋಂದಣಿ ಭರದಿಂದ ಸಾಗುತ್ತಿದೆ ಎಂದು ಹೇಳಿದರು.


ಈ ವೇಳೆ ಅನೇಕ ಮಂದಿ ಸಮಾಜದ ಮುಖಂಡರು ಇದ್ದರು