ಸಾರಾಂಶ
ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ । ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ ಮೂಲ್ಕಿಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಮೂಹ ವಿದ್ಯಾ ಸಂಸ್ಥೆಗಳ ಸಂಯೋಜನೆಯಲ್ಲಿ ಕಟೀಲು ಪದವಿ ಪೂರ್ವ ಕಾಲೇಜಿನ ಶ್ರೀವಿದ್ಯಾ ಸಭಾಭವನದಲ್ಲಿ ಮೂರು ದಿನಗಳ ಕಾಲ ಜರುಗಿದ ನಾಲ್ಕನೇ ವರ್ಷದ ಭ್ರಮರ-ಇಂಚರ ನುಡಿಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಾಧಕ ಹಿರಿಯ ವಿದ್ಯಾರ್ಥಿಗಳಾದ ಸಿ.ಎ. ಚಂದ್ರಶೇಖರ ಶೆಟ್ಟಿ, ಕ್ಯಾಪ್ಸ್ ಫೌಂಡೇಷನ್ ಹಾಗೂ ಕುಡ್ತಿಮಾರುಗುತ್ತು ಭಾಸ್ಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯ, ರಾಷ್ಟ್ರಮಟ್ಟದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಸಮಾಪನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮ್ಮೇಳನ ಅಧ್ಯಕ್ಷ ಲಕ್ಷ್ಮೀಶ ತೋಳ್ಳಾಡಿ ವಹಿಸಿದ್ದರು. ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಮಲಾದೇವೀಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ಆಶಿರ್ವಚನ ನೀಡಿದರು.
ಶ್ರೀ ಕ್ಷೇತ್ರ ಕಟೀಲಿನ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಆನುವಂಶಿಕ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಡಾ. ಗಣೇಶ್ ಅಮೀನ್ ಸಂಕಮಾರ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.ಸಂವಾದ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣಗಳ ಕುರಿತು ಡಾ. ಅನಂತ ಪ್ರಭು ಜಿ. ಮಂಗಳೂರು, ರಂಗಭೂಮಿ, ಸಿನಿಮಾ ಕುರಿತು ಗಿರಿಜಾ ಸಿದ್ದಿ, ಕನ್ನಡ ಭಾಷೆಯ ಸೊಗಸು ಬಗ್ಗೆ ಮನು ಹಂದಾಡಿ ಮಾತನಾಡಿದರು.
ಬಳಿಕ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ನಡೆಯಿತು.--------------------------
ಹೆತ್ತವರನ್ನು ಕಡೆಗಣಿಸಬೇಡಿ: ಈಶ್ವರ ಮಲ್ಪೆನಾಲ್ಕು ಗೋಡೆಯ ಮಧ್ಯೆ ಮಕ್ಕಳನ್ನು ಬೆಳೆಸಬೇಡಿ. ಸಾಧನೆಗಳಿಗೆ ಪ್ರೇರೇಪಿಸಿ. ಮಕ್ಕಳ ಸಾಧನೆ ತಂದೆ, ತಾಯಿಗೆ, ಶಾಲೆಗೆ ಹೆಸರು ತಂದು ಕೊಡುತ್ತದೆ. ಸಮಾಜ ಸೇವೆಗೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದು ಜೀವರಕ್ಷಕ ಈಶ್ವರ ಮಲ್ಪೆ ಹೇಳಿದರು.ಕಟೀಲು ನುಡಿಹಬ್ಬದ ಗೋಷ್ಠಿಯಲ್ಲಿ ಮಾತನಾಡಿದ ಅವರು ತನ್ನ ಮಕ್ಕಳು ವಿಕಲಾಂಗರು. ಮನೆಯಲ್ಲಿ ಕಷ್ಟ ಇದೆ. ಆದರೆ ತಿಳಿದಿರುವ ಈಜಿನ ವಿದ್ಯೆಯಿಂದ ನೂರಾರು ಮಂದಿಯ ಜೀವ ಉಳಿಸಿದ ಸಂತೃಪ್ತಿ ಇದೆ. ಇನ್ನೊಬ್ಬನಿಗೆ ಸಹಾಯ ಮಾಡುವುದು ದೇವರ ಕೆಲಸ, ಎಷ್ಟು ಸಾಧನೆ ಹಣ ಸಂಪಾದನೆ ಮಾಡಿದರೂ ತಂದೆತಾಯಿಯನ್ನು ಮರೆಯಬಾರದು. ನಾನು ಕೆಲವರನ್ನು ಅನಾಥಾಶ್ರಮಕ್ಕೆ ಬಿಟ್ಟಿದ್ದೇನೆ. ಎಂತಹ ಸಂದರ್ಭ ಬಂದರೂ ಹೆತ್ತವರನ್ನು ಕಡೆಗಣಿಸಬೇಡಿ ಎಂದು ಅವರು ಹೇಳಿದರು.
ಕಟೀಲು ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳಾದ ಡಾ. ವೇಣುಗೋಪಾಲ್, ಶಕುಂತಲಾ ನಿರೇಂದ್ರ. ಡಾ. ಶ್ರದ್ಧಾ ಕೆದಿಲಾಯ ಉಪಸ್ಥಿತರಿದ್ದರು.