ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕೋಗೋಡು ಗ್ರಾಮದ ಯುವಕ ಕೌಶಿಕ್ ಭಾರತೀಯ ಸೇನೆಗೆ ಆಯ್ಕೆಯಾಗಿರುವುದಕ್ಕೆ ಗ್ರಾಮಸ್ಥರು ಅಭಿನಂದನೆಗಳನ್ನು ತಿಳಿಸಿದರು.ಕೋಗೋಡು ಗ್ರಾಮದ ಮೊಗಣ್ಣಯ್ಯ ಹಾಗೂ ಮಲ್ಲಿಗಮ್ಮನವರು ಕೂಲಿಕೆಲಸ ಮಾಡುತ್ತಿದ್ದು, ಇವರ ಪುತ್ರ ಕೌಶಿಕ್ ಅವರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದು, ಈ ಗ್ರಾಮದಲ್ಲಿ ಇವರೊಬ್ಬರೆ ಸೈನ್ಯಕ್ಕೆ ಸೇರಿರುವುದು ವಿಶೇಷವಾಗಿದ್ದು ಇದಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.ಈ ವೇಳೆ ಶಿರಗೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಲಕ್ಷ್ಮೀ ನಾಗರಾಜು ಮಾತನಾಡಿ, ನಮ್ಮ ಗ್ರಾಮದ ಯುವಕ ಕೌಶಿಕ್ ದೇಶ ಸೇವೆ ಮಾಡಲು ಆಯ್ಕೆ ಆಗಿರುವುದು ನಮ್ಮ ಗ್ರಾಮಕ್ಕೆ ಹಾಗೂ ನಮಗೆಲ್ಲ ಹೆಮ್ಮೆ ಎನಿಸಿದೆ. ನಾನು ಎಸ್ಡಿಎಂಸಿ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ನಮ್ಮೂರಿನ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಯುವಕ ಇಂದು ಯೋಧನಾಗಿದ್ದಾರೆ ಅಂದರೆ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ಕೌಶಿಕ್ ಅವರು ಪ್ರಾಥಮಿಕ ಶಿಕ್ಷಣವು ನಮ್ಮ ಗ್ರಾಮದಲ್ಲಿ ಮುಗಿಸಿ ಹೈಸ್ಕೂಲ್ ಹಾಗೂ ಉನ್ನತ ಶಿಕ್ಷಣವನ್ನು ಬೇಲೂರಿನಲ್ಲಿ ಮುಗಿಸಿದ್ದು ಅವರು ಮೊದಲಿಂದನೂ ಯೋಧನಾಗಬೇಕೆನ್ನುವ ಆಸೆಯನ್ನು ಇಟ್ಟುಕೊಂಡಿದ್ದರು. ಅದೇ ರೀತಿ ಯೋಧರಾಗಿದ್ದಾರೆ. ದೇಶ ಸೇವೆ ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಈ ದಿನ ನಮ್ಮ ಗ್ರಾಮದ ಯುವಕನಿಗೆ ದೇಶ ಸೇವೆ ಮಾಡುವ ಭಾಗ್ಯ ಒಲಿದಿದೆ. ನಾಳೆ ಮಧ್ಯಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಲು ತೆರಳುತ್ತಿದ್ದಾರೆ. ಅವರಿಗೆ ಆಯಸ್ಸು ಹಾಗೂ ಹೆಚ್ಚಿನ ಶಕ್ತಿಯನ್ನು ಭಗವಂತ ನೀಡಲಿ. ಎಲ್ಲಾ ವಿದ್ಯಾರ್ಥಿಗಳು ಎಂಜಿನಿಯರ್, ಡಾಕ್ಟರ್ ಹಾಗೂ ಹಲವಾರು ಹುದ್ದೆಗಳನ್ನು ಆಯ್ಕೆ- ಮಾಡಿಕೊಳ್ಳುತ್ತಾರೆ. ಆದರೆ ಸೇನೆಗೆ ಸೇರಲು ಯಾರು ಮುಂದೆ ಬರುವುದಿಲ್ಲ. ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಲು ಪ್ರಯತ್ನಪಡಬೇಕು. ನಮ್ಮ ಗ್ರಾಮದಲ್ಲಿ ಪ್ರಥಮ ಬಾರಿಗೆ ದೇಶ ಸೇವೆ ಮಾಡಲು ತೆರಳುತ್ತಿರುವುದು ಗ್ರಾಮವೇ ಸಂತೋಷ ಪಡುವಂತಹ ವಿಷಯವಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನರಸಿಂಹ, ಉಮೇಶ್ ಕೆ. ಟಿ, ಅಣ್ಣಿ, ಮಲಿಗಮ್ಮ ಮುಂತಾದವರು ಹಾಜರಿದ್ದರು.