ಸಾರಾಂಶ
ರಸ್ತೆ ಅಪಘಾತದಲ್ಲಿ ಹೆಚ್ಚಿನ ಯುವಕರು ಸಾವನ್ನಪ್ಪುತ್ತಿದ್ದಾರೆ. ಸಂಚಾರ ನಿಯಮ ಅರ್ಥ ಮಾಡಿಕೊಂಡು ಹೆಲ್ಮೆಟ್ ಧರಿಸಿ ವಾಹನ ಪರವಾನಗಿ ಮತ್ತಿತರ ಮಾಡಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ರಸ್ತೆ ಅಪಘಾತದಲ್ಲಿ ಹೆಚ್ಚಾಗಿ ಯುವ ಜನತೆಯೇ ಸಾವನ್ನಪ್ಪುತ್ತಿದ್ದು, ಈ ಬಗ್ಗೆ ಹೆಚ್ಚಿನ ರೀತಿಯಲ್ಲಿ ಅರಿವು ಮೂಡಿಸಬೇಕಿದೆ ಎಂದು ನೆಹರು ಯುವ ಕೇಂದ್ರದ ನಿವೃತ್ತ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್ ತಿಳಿಸಿದರು.ನಗರದ ಕಾವೇರಿ ಫಿಜಿಯೋಥೆರಪಿ ಕಾಲೇಜಿನಲ್ಲಿ ಮೈ ಭಾರತ ನೆಹರು ಯುವ ಕೇಂದ್ರ, ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಸ್ತೆ ಅಪಘಾತದಲ್ಲಿ ಹೆಚ್ಚಿನ ಯುವಕರು ಸಾವನ್ನಪ್ಪುತ್ತಿದ್ದಾರೆ. ಸಂಚಾರ ನಿಯಮ ಅರ್ಥ ಮಾಡಿಕೊಂಡು ಹೆಲ್ಮೆಟ್ ಧರಿಸಿ ವಾಹನ ಪರವಾನಗಿ ಮತ್ತಿತರ ಮಾಡಿಕೊಳ್ಳಬೇಕು ಎಂದರು.
1947 ರಲ್ಲಿ ನಮ್ಮ ಜನಸಂಖ್ಯೆ 33 ಕೋಟಿ ಇತ್ತು. ಈಗ 2025ಕ್ಕೆ 140 ಕೋಟಿ ಇದೆ. ಇದರಲ್ಲಿ ಸುಮಾರು 45 ಕೋಟಿ ಯುವಕರು ಇದ್ದಾರೆ. ನೆಹರು ಯುವ ಕೇಂದ್ರದಲ್ಲಿ ಯುವಕರಿಗಾಗಿ 5 ಪಾಲಿಸಿ ಇದೆ ಅದರ ಬಗ್ಗೆ ಅರಿವು ಮುಡಿಸುತಿದ್ದೇವೆ. ಭಾರತದಲ್ಲಿ ಒಟ್ಟು 751 ಯುವ ಕೇಂದ್ರವಿದ್ದು, 71 ಕರ್ನಾಟಕದಲ್ಲಿದೆ. ಆದರೂ ನಾವು ಯುವಕರನ್ನು ತಲುಪಲು ಆಗದಿರುವುದು ವಿಷಾದನಿಯ ಎಂದರು.ಸಿದ್ದಾರ್ಥನಗರ ಸಂಚಾರ ಠಾಣೆಯ ಎಸ್ಐ ರಘು ಮಾತನಾಡಿ, ಯುವಜನತೆ ಪೊಲೀಸರು ದಂಡ ವಿಧಿಸುತ್ತಾರೆಂದು ನೋಡುವ ಬದಲು, ಸಂಚಾರ ನಿಯಮಗಳನ್ನು ಪಾಲಿಸಬೇಕು. ಸಿಗ್ನಲ್. ಟ್ರಾಫಿಕ್ ಸೈನ್ ಬೋರ್ಡ್, ಜಿಬ್ರಾ ಕ್ರಾಸಿಂಗ್, ಹೊರ ವರ್ತುಲ ರಸ್ತೆ, ಸೈಕಲ್ ಪಾಥ್, ಫುಟ್ ಪಾತ್ ಬಗ್ಗೆ ತಿಳಿದಿರಬೇಕು ಎಂದು ತಿಳಿಸಿದರು.
ಕಾವೇರಿ ಗ್ರೂಪ್ ಆಫ್ ಇನ್ಸಿಟಿಟ್ಯೂಟ್ ಡೀನ್ ಡಾ.ಎಸ್. ಶ್ರೀಕಂಠಸ್ವಾಮಿ, ಕಾವೇರಿ ಪಿಜಿಯೋಥೆರಪಿ ಕಾಲೇಜು ಉಪ ಪ್ರಾಂಶುಪಾಲ ಡಾ.ಕೆ. ಶ್ರೀಕಾಂತ್, ನೆಹರು ಯುವ ಕೇಂದ್ರದ ಅಧಿಕಾರಿ ಅಭಿಷೇಕ್ ಚಾವರೆ, ಸಹಾಯಕ ಪ್ರಾಧ್ಯಾಪಕಿ ಮೇಘಾ ಮೊದಲಾದವರು ಇದ್ದರು.