ಕಾವೇರಿ ನದಿ ನಮ್ಮ ಎರಡು ರಾಜ್ಯಗಳ ನಡುವಿನ ವಿವಾದದ ಸಂಕೇತವಾಗದೆ ಸಹೋದರತ್ವ, ಪರಸ್ಪರ ನಂಬಿಕೆ ಮತ್ತು ರಾಷ್ಟ್ರೀಯ ಏಕತೆಯ ಪ್ರತೀಕವಾಗಬೇಕು. ಎರಡು ರಾಜ್ಯದ ರೈತರು ಒಂದೇ ಆಗಿದ್ದಾರೆ. ಅವರಿಗೆ ನೋವು ಕೊಡುವ ಕೆಲಸವನ್ನು ಯಾವ ಸರ್ಕಾರಗಳು ಮಾಡಬಾರದು. ಮೆಟ್ಟೂರು ಅಣೆಕಟ್ಟೆ ಬಳಿ ನೀವೊಂದು ಡ್ಯಾಂ ನಿರ್ಮಿಸಿಕೊಳ್ಳಿ ಅಥವಾ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಒಪ್ಪಿಗೆ ನೀಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ಸಂಕಷ್ಟ ಸೂತ್ರ ರಚಿಸಬೇಕು ಹಾಗೂ ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸಹಕಾರ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ತಮಿಳುನಾಡು ಸಿಎಂಗೆ ಕಾವೇರಿ ತೀರ್ಥ ಮತ್ತು ಮಂಡ್ಯದ ಬೆಲ್ಲವನ್ನು ರವಾನಿಸಿದರು.ನಗರದ ಅಂಚೆ ಕಚೇರಿ ಎದುರು ಸೇರಿದ ಕಾರ್ಯಕರ್ತರು ತೀರ್ಥ ಮತ್ತು ಬೆಲ್ಲವನ್ನು ಅಂಚೆ ಮೂಲಕ ಕೊರಿಯರ್ ಮಾಡಿದರು. ಕಾವೇರಿ ನದಿ ನಮ್ಮ ಎರಡು ರಾಜ್ಯಗಳ ನಡುವಿನ ವಿವಾದದ ಸಂಕೇತವಾಗದೆ ಸಹೋದರತ್ವ, ಪರಸ್ಪರ ನಂಬಿಕೆ ಮತ್ತು ರಾಷ್ಟ್ರೀಯ ಏಕತೆಯ ಪ್ರತೀಕವಾಗಬೇಕು. ಎರಡು ರಾಜ್ಯದ ರೈತರು ಒಂದೇ ಆಗಿದ್ದಾರೆ. ಅವರಿಗೆ ನೋವು ಕೊಡುವ ಕೆಲಸವನ್ನು ಯಾವ ಸರ್ಕಾರಗಳು ಮಾಡಬಾರದು. ಮೆಟ್ಟೂರು ಅಣೆಕಟ್ಟೆ ಬಳಿ ನೀವೊಂದು ಡ್ಯಾಂ ನಿರ್ಮಿಸಿಕೊಳ್ಳಿ ಅಥವಾ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಒಪ್ಪಿಗೆ ನೀಡಬೇಕೆಂದು ಒತ್ತಾಯಿಸಿ ಬೆಲ್ಲ, ಕಾವೇರಿ ತೀರ್ಥವನ್ನು ತನಾಡು ಸಿಎಂಗೆ ಕಳುಹಿಸಲಾಯಿತು.
ಬೆಂಗಳೂರು ಮಹಾನಗರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ೧.೫ ರಿಂದ ೨ ಕೋಟಿ ಜನರ ಕುಡಿಯುವ ನೀರಿನ ಭದ್ರತೆಯು ಇಂದು ಗಂಭೀರ ಸವಾಲಾಗಿ ಪರಿಣಮಿಸಿದೆ. ಜನಸಂಖ್ಯೆಯ ಏರಿಕೆ, ಹವಾಮಾನ ವೈಪರೀತ್ಯ ಮತ್ತು ಅನಿಯಮಿತ ಮಳೆಯ ಪರಿಣಾಮವಾಗಿ ಭವಿಷ್ಯದಲ್ಲಿ ನೀರಿನ ಅಭಾವ ಮತ್ತಷ್ಟು ತೀವ್ರವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಹರಿದು ಹೋಗುವ ಹೆಚ್ಚುವರಿ ನೀರನ್ನು ವೈಜ್ಞಾನಿಕವಾಗಿ ಸಂಗ್ರಹಿಸುವ ಉದ್ದೇಶದಿಂದ ಮೇಕೆದಾಟು ಯೋಜನೆಯನ್ನು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿದೆ. ಅದಕ್ಕೆ ತಮಿಳುನಾಡು ಸರ್ಕಾರ ಬೆಂಬಲಿಸಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಪ್ರಸನ್ನಕುಮಾರ್, ಮಹಾಂತಪ್ಪ, ಹೊಸಹಳ್ಳಿ ಶಿವು, ನಿತ್ಯಾನಂದ, ಎಲ್ಲೇಗೌಡ ಇದ್ದರು.