ಸಾರಾಂಶ
ಯೋಗ ಬ್ರಹ್ಮ ಋಷಿ ಪ್ರಭಾಕರ ಗುರೂಜಿ ರೂಪಿಸಿದ ಕಾಯಕಲ್ಪ ಕ್ರಿಯಾ ಕಾರ್ಯಕ್ರಮವು ಸಿದ್ದ ಸಮಾದಿ ಯೋಗದ ಅದ್ವೈತ ಆಧಾರಿತ ಸಾಧನೆಯಾಗಿದ್ದು ಇದರ ತರಬೇತಿ ಶಿಬಿರವು ಮಾ.16ರಿಂದ ನಗರದಲ್ಲಿ ಪ್ರಾರಂಭವಾಗಲಿದೆ ಎಂದು ಯೋಗಗುರು ರಮೇಶ್ ಗುರೂಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಯೋಗ ಬ್ರಹ್ಮ ಋಷಿ ಪ್ರಭಾಕರ ಗುರೂಜಿ ರೂಪಿಸಿದ ಕಾಯಕಲ್ಪ ಕ್ರಿಯಾ ಕಾರ್ಯಕ್ರಮವು ಸಿದ್ದ ಸಮಾದಿ ಯೋಗದ ಅದ್ವೈತ ಆಧಾರಿತ ಸಾಧನೆಯಾಗಿದ್ದು ಇದರ ತರಬೇತಿ ಶಿಬಿರವು ಮಾ.16ರಿಂದ ನಗರದಲ್ಲಿ ಪ್ರಾರಂಭವಾಗಲಿದೆ ಎಂದು ಯೋಗಗುರು ರಮೇಶ್ ಗುರೂಜಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿ ಮಾತನಾಡಿ, 20 ವರ್ಷಗಳಿಂದ ಸಿದ್ದ ಸಮಾದಿ ಯೋಗ ನಡೆಯುತ್ತಿದೆ. ಇದರ ಸಂಸ್ಥಾಪಕ ಪ್ರಭಾಕರ ಗುರೂಜಿ ರೂಪಿಸಿರುವ ಕಾಯಕಲ್ಪ ಕ್ರಿಯಾ ಕಾರ್ಯಕ್ರಮವು ತಿಪಟೂರಿನಲ್ಲಿಯೇ ಪ್ರಥಮ ಬಾರಿಗೆ ಆಯೋಜಿಸಲಾಗಿದೆ. ಸಿದ್ದಸಮಾದಿ ಯೋಗ ಬ್ರಹ್ಮೋಪದೇಶ, ನಿತ್ಯ ಸಮಾಧಿಯೋಗ ನಂತರ ಪ್ರಪಂಚದಲ್ಲಿ ವಿಶೇಷವಾಗಿ ಆನಂದ ಕೊಡುವಂತಹ ಕಾರ್ಯಕ್ರಮ. ನಂತರ ಕಾಯಕಲ್ಪ ಕ್ರಿಯಾ ದ್ವೈತ ಸಿದ್ದಾಂತ ಆಧಾರಿತವಾಗಿದೆ. ಇದು ಹನುಮಾನ್ ಸಾಧನೆ ಎಂದು ಕರೆಯಲ್ಪಡುತ್ತದೆ.ನಮ್ಮ ಪೂರ್ವಜರು ನೂರು ವರ್ಷಕ್ಕೂ ಮೇಲ್ಪಟ್ಟು ಜೀವನ ಸಾಗಿಸುತ್ತಿದ್ದರು. ಆದರೆ ಈಗಿನ ದಿನಮಾನದಲ್ಲಿ ೫೦ರಿಂದ ೬೦ ವರ್ಷ ಜೀವನ ನಡೆಸುವುದೇ ದುಸ್ತರವಾಗಿರುವಂತಹ ಕಾಲದಲ್ಲಿ ಕಾಯಕಲ್ಪ ಕ್ರಿಯಾ ಅಭ್ಯಾಸ ಮಾಡುವುದರಿಂದ ನಮ್ಮ ಪ್ರಾಣಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಾಗಿದೆ. ನಮ್ಮ ಜೀವನಶೈಲಿ ಬದಲಾಯಿಸಿಕೊಳ್ಳುವುದು, ಆರೋಗ್ಯವಂತರಾಗಿ ಮತ್ತು ಸಂತೋಷದಿಂದ ಬದುಕುವುದನ್ನು ತಿಳಿಸಿಕೊಡಲಾಗುತ್ತದೆ. ಇದು ಒಂಬತ್ತು ದಿನಗಳ ವಿಶೇಷ ಶಿಬಿರವಾಗಿದ್ದು ಇದರಲ್ಲಿ ೨೪ ಅದ್ಭುತ ವಿದ್ಯೆಗಳನ್ನು ಗುರುಗಳು ಕಲಿಸಿಕೊಡಲಿದ್ದಾರೆ. ಡಾ. ತಿಪ್ಪಾರೆಡ್ಡಿ ಗುರೂಜಿ ಹಾಗೂ ಡಾ.ರಾಜು ಕುಕಡೆಯವರು ತರಗತಿಗಳನ್ನು ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
ತಾಲೂಕು ವೀರಶೈವ-ಲಿಂಗಾಯತ ಸಂಘಟನೆಯ ಅಧ್ಯಕ್ಷ ಹಾಗೂ ಪರಿಸರಪ್ರೇಮಿ ರೇಣುಕಾರಾಧ್ಯ ಮಾತನಾಡಿ ಆಕಾಶ, ಭೂಮಿ, ಗಾಳಿ, ಮಣ್ಣು, ವಾತಾವರಣ ಎಲ್ಲವೂ ಕಲುಷಿತವಾಗುತ್ತಿರುವ ಈಗಿನ ದಿನಮಾನಗಳಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ನಮ್ಮ ಶರೀರ, ಬುದ್ದಿ, ಮನಸ್ಸು, ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಕಾಯಕಲ್ಪ ಕ್ರಿಯ ಒಂದು ವಿಶಿಷ್ಠವಾದ ಕಾರ್ಯಕ್ರಮವಾಗಿದೆ. ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಿರಿಗಂಧ ಜನಪದ ಸಂಸ್ಥೆಯ ಅಧ್ಯಕ್ಷ ಗುರು ಮತ್ತಿತರರಿದ್ದರು.