ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ಕೃಷಿ ಇಲಾಖೆಯು ಬೆಂಗಳೂರಿನ ಜಿಕೆವಿಕೆ ಬಿಡುಗಡೆ ಮಾಡಿರುವ ಸೂರ್ಯಕಾಂತಿ ಬಿತ್ತನೆ ಬೀಜ ‘ಕೆಬಿಎಸ್‌ಎಚ್‌ 90’ ಹೊಸ ತಳಿಯನ್ನು ತಾಲೂಕಿನ 800 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಿದೆ.

ಬೆಂಗಳೂರಿನ ಜಿಕೆವಿಕೆ ಕೃಷಿ ವಿವಿ ಬಿಡುಗಡೆ । ಗುಂಡ್ಲುಪೇಟೆ ತಾಲೂಕಿನ 800 ಹೆಕ್ಟೇರ್‌ನಲ್ಲಿ ಬಿತ್ತನೆ । ಶೇ.80ರಷ್ಟು ಸಹಾಯಧನ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ಕೃಷಿ ಇಲಾಖೆಯು ಬೆಂಗಳೂರಿನ ಜಿಕೆವಿಕೆ ಬಿಡುಗಡೆ ಮಾಡಿರುವ ಸೂರ್ಯಕಾಂತಿ ಬಿತ್ತನೆ ಬೀಜ ‘ಕೆಬಿಎಸ್‌ಎಚ್‌ 90’ ಹೊಸ ತಳಿಯನ್ನು ತಾಲೂಕಿನ 800 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುವ ಗುರಿ ಹೊಂದಿದೆ.

ರೈತರಿಗೆ ಈ ಬೆಳೆ ಬೆಳೆಯಲು ಶೇ.80ರಷ್ಟು ಸಹಾಯಧನವನ್ನು ಕೃಷಿ ಇಲಾಖೆಯೇ ನೀಡಲಿದೆ. ಜೊತೆಗೆ ಬೇಡಿಕೆಯಷ್ಟು ಬಿತ್ತನೆ ಬೀಜ ಪೂರೈಕೆಗೂ ಇಲಾಖೆ ಸಜ್ಜಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಶಶಿಧರ್‌ ತಿಳಿಸಿದ್ದಾರೆ.---

ಗುರಿ:

‘ಕೆಬಿಎಸ್‌ಎಚ್‌ 90’ ತಳಿಯನ್ನು ಪ್ರಾಥಮಿಕ ಹಂತವಾಗಿ ಗುಂಡ್ಲುಪೇಟೆ ತಾಲೂಕಿನ 800 ಹೆಕ್ಟೇರ್‌ ಭೂಮಿಯಲ್ಲಿ ಬೆಳೆಯಲು ಕೃಷಿ ಇಲಾಖೆ ಸಜ್ಜಾಗಿದೆ. ಮುಂಗಾರಿನಲ್ಲಿ ಬೆಳೆ ಸಜ್ಜಾಗಲಿದ್ದು, ಸಫಲವಾದರೆ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ.

---

80% ಸಹಾಯಧನ:

‘ಕೆಬಿಎಸ್‌ಎಚ್‌ 90’ ಬೆಳೆಯಲು ರೈತರು ಯಥೆಪಡುವ ಅಗತ್ಯವಿಲ್ಲ. ಕೃಷಿಕರಿಗೆ ಸಹಾಯವಾಗಿಸಲು ಕೃಷಿ ಇಲಾಖೆಯೇ ಶೇ.80ರಷ್ಟು ಸಹಾಯಧನ ಕೊಡಲಿದೆ.

---

ಹೊಸ ತಳಿ ವಿಶೇಷ:

‘ಕೆಬಿಎಸ್‌ಎಚ್‌ ೯೦’ ತಳಿಯು ಇತರೆ ಬೀಜಗಳಿಗಿಂತ ೧೦ರಿಂದ ೧೨ ದಿನ ಮುಂಚಿತವಾಗಿ ಕಟಾವಿಗೆ ಬರುತ್ತದೆ. ತೆನೆಯ ಮಧ್ಯ ಭಾಗದಲ್ಲಿ ಸಹ ಜಳ್ಳಾಗದೆ ಗಟ್ಟಿ ಕಾಳುಗಳನ್ನು ಕಟ್ಟುತ್ತದೆ. ಬೇರೆ ತಳಿಗಳಿಂದ ರೋಗ/ಕೀಟ ಬಾಧೆ ತೆಗೆದುಕೊಳ್ಳುವ ಶಕ್ತಿ ಹೆಚ್ಚಿದೆ.

---

ಪಾಯಿಂಟರ್ಸ್‌:

80-90 ದಿನಗಳಲ್ಲಿ ಬೆಳೆ ಕಟಾವು

ಹೆಕ್ಟೇರ್‌ಗೆ 20-25 ಕ್ವಿಂಟಲ್‌ ಬೀಜ

ಡೌನಿ ಮಿಲ್ಡ್ಯು, ಹೆಡ್‌ರಾಟ್‌ ಸಹಿಷ್ಣು

ಮಳೆಯಾಶ್ರಿತ ಕಡೆಗಳಲ್ಲಿ ಉತ್ತಮ

ನೀರು ಕಡಿಮೆ ಇದ್ದರೂ ಫಸಲು

---

ಸುಧಾರಣಾ ಕ್ರಮ:

೧:

1 ಎಕರೆ ಖುಷ್ಕಿ ಜಮೀನಿಗೆ 2 ಕೇಜಿ ಬೀಜ ಉಳುಮೆ. 2 ಅಡಿ ಅಂತರದ ಸಾಲು ಗಿಡದಿಂದ ಗಿಡಕ್ಕೆ 1 ಅಡಿ ಅಂತರ. 15-20 ದಿನಗಳೊಳಗೆ ಪ್ರತಿ ಸಾಲಿನಲ್ಲಿ 1 ಅಡಿ ಅಂತರದಲ್ಲಿ ಗುಣಿಗೆ ಒಂದರಂತೆ 1 ಆರೋಗ್ಯ ಸಸಿ ಉಳಿಸಿ ಮಿಕ್ಕೆಲ್ಲವನ್ನು ತೆಗೆಯಬೇಕು.

೨:

ಅಜಿಟೊಬ್ಯಾಕ್ಟರ್‌ ಜೈವಿಕ ಗೊಬ್ಬರ ೧೫೦ ಗ್ರಾಂ ಬಳಸಬೇಕು. ಗೊಬ್ಬರದಿಂದ ಬೀಜೋಪಚಾರ ಮಾಡಬೇಕು. ನಂತರ ಅರ್ಧ ಗಂಟೆ ನೆರಳಿನಲ್ಲಿ ಒಣಗಿಸಿ ಬಿತ್ತಬೇಕು.

೩:

ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್‌ 1 ಎಕರೆ ಖುಷ್ಕಿ ಜಮೀನಿಗೆ ೨.೫ ಟನ್‌, ನೀರಾವರಿಗೆ ೩ ಟನ್‌ ಬಳಸಬೇಕು. ಬಿತ್ತನೆಗೆ ೨ ವಾರ ಬದಲು ಮೊದಲೇ ಮಣ್ಣಿಗೆ ಸೇರಿಸಬೇಕು.

4:

ರಾಸಾಯನಿಕ ಗೊಬ್ಬರ ಸಾರ ಜನಕ ಖುಷ್ಕಿ ಜಮೀನಿಗೆ ೧೫ ಕೆಜಿ, ರಂಜಕ ೨೦ ಕೆಜಿ, ಪೊಟ್ಯಾಷ್‌ ೧೫ ಕೆಜಿ ಹಾಕಬೇಕು. ನೀರಾವರಿ ಜಮೀನಿಗೆ ಎಕರೆಗೆ ೩೬ ಕೆಜಿ ಸಾರಜನಕ, ೩೬ ಕೆಜಿ ರಂಜಕ, ೨೫ ಕೆಜಿ ಪೊಟ್ಯಾಷ್‌ ಹಾಕಬೇಕು.

5.

ಅರ್ಧ ಪ್ರಮಾಣದ ಸಾರಜನಕ, ಪೂರ್ಣ ಪ್ರಮಾಣದ ರಂಜಕ ಹಾಗೂ ಪೊಟ್ಯಾಷ್‌ ರಸ ಗೊಬ್ಬರಗಳನ್ನು ಬಿತ್ತನೆ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು. ಬಿತ್ತನೆಯಾದ ೩೦ರಿಂದ ೩೫ ದಿನಗಲ್ಲಿ ಉಳಿದ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಟ್ಟು ಅಂತರ ಬೇಸಾಯ ಮಾಡಬೇಕು.

6.

ಲಘು ಪೋಷಕಾಂಶ ಸತು ೪ ಕೆಜಿ ಹಾಕಬೇಕು (ಸತುವಿನ ಸಲ್ಫೇಟ್‌ ಬಳಕೆಯಿಂದ ಕಾಳು ಮತ್ತು ಎಣ್ಣೆ ಇಳುವರಿಯಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ) ಬೋರಾಕ್ಸ್‌ ೬ ಕೆಜಿ (ಬೋರಾಕ್ಸ್‌ ಪ್ರತಿ ಲೀಟರ್‌ ನೀರಿಗೆ ೨ ಗ್ರಾಂನಂತೆ ಬೆರೆಸಿ ಹೂ ಅರಳುವ ಹಂತದಲ್ಲಿ ತೆನೆಯ ಮೇಲೆ ಸಿಂಪಡಿಸುವುದರಿಂದ ಕಾಳು ಕಟ್ಟುವಿಕೆ ಮತ್ತು ಕಾಳಿನ ತೂಕ ಹೆಚ್ಚಳವಾಗಲಿದೆ.