ಸಾರಾಂಶ
ಅರಣ್ಯ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಪಶು ಆಸ್ಪತ್ರೆ ವೈದ್ಯರು ಹೀಗೆ ಎಲ್ಲಾ ಇಲಾಖೆಗಳ ಗ್ರಾಪಂ ಮಟ್ಟದ ಅಧಿಕಾರಿಗಳು ಕೆಡಿಪಿ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ತಮ್ಮ ಇಲಾಖೆ ಅಥವಾ ಸಂಸ್ಥೆ ಪ್ರಗತಿ ಬಗ್ಗೆ ಮಾಹಿತಿ ನೀಡಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಮ ಪಂಚಾಯ್ತಿ ಮಟ್ಟದ ಸಮಸ್ಯೆ ಬಗೆಹರಿಸಲು ಅಧ್ಯಕ್ಷ ಹಾಗೂ ಸದಸ್ಯರು ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ನಡೆಸುವ ಮೂಲಕ ಬಗೆಹರಿಸಿದರೆ ಶಾಸಕರಿಗೆ ಹಾಗೂ ಇತರೆ ಜನಪ್ರತಿನಿಧಿಗಳಿಗೆ ಒತ್ತಡ ಕಡಿಮೆಯಾಗುತ್ತದೆ ಎಂದು ಶಾಸಕ ಎಚ್.ಟಿ. ಮಂಜು ಹೇಳಿದರು.ತಾಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಪಂ ವತಿಯಿಂದ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಗ್ರಾಮದಲ್ಲಿ ಚರಂಡಿ ಸಮಸ್ಯೆ, ಕುಡಿಯುವ ನೀರು ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳಿಗೂ ಶಾಸಕರನ್ನು ಹೊಣೆ ಮಾಡಬಾರದು. ಅದು ಗ್ರಾಪಂ ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ ಎಂದರು.
ಅರಣ್ಯ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಪಶು ಆಸ್ಪತ್ರೆ ವೈದ್ಯರು ಹೀಗೆ ಎಲ್ಲಾ ಇಲಾಖೆಗಳ ಗ್ರಾಪಂ ಮಟ್ಟದ ಅಧಿಕಾರಿಗಳು ಕೆಡಿಪಿ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ತಮ್ಮ ಇಲಾಖೆ ಅಥವಾ ಸಂಸ್ಥೆ ಪ್ರಗತಿ ಬಗ್ಗೆ ಮಾಹಿತಿ ನೀಡಬೇಕು. ಗೈರು ಹಾಜರಾದವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವ ಹಕ್ಕು ಗ್ರಾಪಂ ಅಧ್ಯಕ್ಷರಿಗೆ ಇರುತ್ತದೆಂದು ತಿಳಿಸಿದರು.ಸಭೆಯಲ್ಲಿ ಬಲ್ಲೇನಹಳ್ಳಿ ಗ್ರಾಪಂ ಅಧ್ಯಕ್ಷೆ ಸೌಮ್ಯ ಪುಟ್ಟೇಗೌಡ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ಮೋದೂರು ಶ್ರೀನಿವಾಸ್, ಉಪಾಧ್ಯಕ್ಷೆ ಸವಿತಾ, ಪಿಡಿಒ ಕೆ.ಎಂ.ರಚನಾ, ಸದಸ್ಯರಾದ ನಂದೀಶ್, ಎಂ.ಕೆ. ಯೋಗೇಂದ್ರ, ದೊಡ್ಡಗಾಡಿಗನಹಳ್ಳಿ ಪ್ರಶಾಂತ್ಕುಮಾರಿ, ಕುಮಾರ್, ಕಾಶಿಮುರುಕನಹಳ್ಳಿ ಚಂದ್ರಶೇಖರ್, ಗೀತಾ, ಚೇತನಾ ಬೋರೇಗೌಡ, ಪಲ್ಲವಿ, ವೈದ್ಯಾಧಿಕಾರಿ ಡಾ.ಯೋಜನ್, ಅರಳಕುಪ್ಪೆ ಪ್ರತಾಪ್, ಕುಮಾರಸ್ವಾಮಿ, ಡಾ.ಯೋಜನ್ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಅಂಗನವಾಡಿಗಳು, ಆಶಾ, ಆರೋಗ್ಯ ಕಾರ್ಯಕರ್ತೆಯರು, ಸೊಸೈಟಿಗಳು, ಡೇರಿ ಸಂಘಗಳು, ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ವಿವಿಧ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.