ಕನ್ನಡಪ್ರಭವಾರ್ತೆ ಬೆಂಗಳೂರು
ಬದುಕಿನಲ್ಲಿ ಹೆಜ್ಜೆಗುರುತು ಮೂಡಿಸಿದ ಸಾಧಕರ ಕೆಲಸಗಳನ್ನು ಇಂದಿನ ಪೀಳಿಗೆಯವರು ಸ್ಮರಿಸುತ್ತಾ ಮುಂದಿನ ಹೆಜ್ಜೆ ಹುಡುಕುತ್ತಾ ಸಾಗಬೇಕು. ಚಿತ್ರ ಸಾಧಕರು, ಲೇಖಕರನ್ನು ಮರೆಯದೆ ಸ್ಮರಿಸಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.ನಗರದ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಬೆಂಗಳೂರು ಆರ್ಟ್ ಫೌಂಡೇಷನ್ ಆಯೋಜಿಸಿದ್ದ ಕಲಾನ್ವೇಷಕರ ಸ್ಮರಣೆ ಕಾರ್ಯಕ್ರಮದಲ್ಲಿ ಕಲಾವಿದರಾದ ಡಾ.ಅ.ಲ.ನರಸಿಂಹನ್ ಹಾಗೂ ಎನ್.ಮರಿಶಾಮಾಚಾರ್ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸಾಧಕರನ್ನು ಸ್ಮರಿಸುವುದು ಉತ್ತಮ ನಡವಳಿಕೆ, ಸಂಸ್ಕೃತಿಯ ಆಸ್ಮಿತೆಯ ಸಂಕೇತ, ಹಿಂದಿನವರು ಮಾಡಿದ ಕೆಲಸಗಳನ್ನು ಇಂದಿನವರು ಮುಂದುವರಿಸಿಕೊಂಡು ಹೋಗಬೇಕು. ಚಿತ್ರ ಸಾಧಕರು, ಲೇಖಕರನ್ನು ಮರೆಯಬಾರದು. ಇದು ಎಲ್ಲ ಕ್ಷೇತ್ರಗಳಲ್ಲಿಯೂ ನಡೆಯಬೇಕು. ಸಂಸ್ಕೃತಿ ಸ್ಥಾಯಿಯಾದುದಲ್ಲ, ಚಲನಶೀಲವಾದುದು ಎಂದರು.ಕಲಾವಿದರೂ ಲೇಖಕರೂ ಆದ ಡಾ.ಅ.ಲ.ನರಸಿಂಹನ್ ಹಾಗೂ ಎನ್.ಮರಿಶಾಮಾಚಾರ್ ಉತ್ತಮ ಕಲಾವಿದರು, ಕವಿಯಾದವನು ಪದಗಳ ಸಂಯೋಜನೆ ಮಾಡಿ ಉತ್ತಮ ಕವಿತೆ ಬರೆಯುತ್ತಾರೆ. ಸಿನಿಮಾ ನಿರ್ದೇಶಕ ದೃಶ್ಯಗಳನ್ನು ಸಂಯೋಜಿಸಿ ಸಿನಿಮಾ ಮಾಡುತ್ತಾನೆ, ಕಲಾವಿದ ಬಣ್ಣಗಳನ್ನು ಸಂಯೋಜಿಸಿ ಉತ್ತಮ ಚಿತ್ರ ರಚಿಸುತ್ತಾರೆ. ಈ ಇಬ್ಬರೂ ಉತ್ತಮ ಕಲಾವಿದರು, ಕಲಾವಿದರು ಭ್ರಮೆಯಿಂದ ಬದುಕಬಾರದು, ಭ್ರಮೆಯಿಂದ ಹೊರಬಂದರೆ ಉತ್ತಮ ಕಲಾವಿದರಾಗುತ್ತಾರೆ.ಕಲಾ ಪ್ರಕಾರ ಯಾವುದೇ ಇರಲಿ ದಾಖಲೀಕರಣ ಮುಖ್ಯ, ಈಗಿನ ತಂತ್ರಜ್ಞಾನ ಮುಂದುವರಿದಿದೆ. ಇದರಲ್ಲಿ ತಂತ್ರವೇ ಹೆಚ್ಚಾಗಿ ಜ್ಞಾನವೇ ಇಲ್ಲವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ಲಲಿತಾ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಮಾತನಾಡಿ, ಈಗ ಚಿತ್ರ ಕಲಾವಿದರ ಸಾವಿಗೂ ಸಂತಾಪ ಸೂಚಿಸುವಷ್ಟೂ ಸೌಜನ್ಯವೂ ಈಗಿನ ಮಾಧ್ಯಮಗಳಿಗೆ ಇಲ್ಲವಾಗಿದೆ. ರಾಜ್ಯದಲ್ಲಿ ಕಲಾವಿದರನ್ನು ಕಡಗಣಿಸಲಾಗುತ್ತಿದೆ ಎಂದು ವಿಷಾದಿಸಿದರು.
ಕೇವಲ ರಚನೆಯಲ್ಲಿ ಹಮ್ಮು ಹೆಚ್ಚಿದ್ದರೆ ಕಲೆ ಬೆಳೆಯುವುದಿಲ್ಲ. ಕಲೆಯನ್ನು ಸಾರ್ವಜನಿಕಗೊಳಿಸಬೇಕು. ನಮ್ಮ ಮೂಲ ಜಾನಪದವನ್ನು ನೆನಪಿಸುವ ಚಿತ್ರಕಲೆ ಇರಬೇಕು. ಜನಪದವನ್ನು ಮರೆತರೆ ಅದು ನಮ್ಮ ಸಂಸ್ಕೃತಿಗೆ ಮಾಡುವ ಮೋಸ. ನಮ್ಮ ಮೂಲ ಜನಪದದಲ್ಲಿದೆ. ಕಲಾವಿದ ಯಾರಬಳಿಯೂ ಹೋಗಿ ಅವಕಾಶಕ್ಕಾಗಿ ಕೈ ಚಾಚಬಾರದು, ಸ್ವಾಭಿಮಾನಿಯಾಗಿರಬೇಕು ಎಂದರು.
ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಸಿ.ಚಂದ್ರಶೇಖರ್, ಕಲಾವಿದ ವಾಸುದೇವ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮರಿಶಾಮಾಚಾರ್ ಅವರ ಪುತ್ರಿಯನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.