ಮನೆಯ ಸುತ್ತಲಿನ ಪರಿಸರ ಸ್ವಚ್ಛವಾಗಿರಲಿ: ಡಾ.ನಿಸಾರ್ ಫಾತಿಮ

| Published : Jun 30 2024, 12:45 AM IST

ಸಾರಾಂಶ

ಮನೆ ಪರಿಸರದಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಿದರೆ ಡೆಂಘೀ ರೋಗದಿಂದ ಮುಕ್ತರಾಗಿ ಬದುಕಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತಿಮ ತಿಳಿಸಿದರು. ಆಲೂರಲ್ಲಿ ಆಯೋಜಿಸಿದ ಡೆಂಘೀ ವಿರೋಧಿ ಮಾಸಾಚರಣೆಯಲ್ಲಿ ಮಾತನಾಡಿದರು.

ಡೆಂಘೀ ವಿರೋಧಿ ಮಾಸಾಚರಣೆ

ಆಲೂರು: ಮನೆ ಪರಿಸರದಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಿದರೆ ಡೆಂಘೀ ರೋಗದಿಂದ ಮುಕ್ತರಾಗಿ ಬದುಕಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತಿಮ ತಿಳಿಸಿದರು.

ಪಟ್ಟಣದ ದೊಡ್ಡಿಬೀದಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೊಗ್ಯಾಧಿಕಾರಿಗಳ ಕಚೇರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಜಂಟಿಯಾಗಿ ಏರ್ಪಡಿಸಲಾಗಿದ್ದ ಡೆಂಘೀ ವಿರೋಧಿ ಮಾಸಾಚರಣೆಯಲ್ಲಿ ಮಾತನಾಡಿ, ಪ್ರತಿ ಶುಕ್ರವಾರ ಪ್ರತಿ ವಾರ್ಡು, ಹಳ್ಳಿಗಳಲ್ಲಿ ಮನೆಗಳಿಗೆ ಭೇಟಿ ನೀಡಿ ಮನೆಗಳ ಪರಿಸರದಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಲು ಆಶಾ ಕಾರ್ಯಕರ್ತೆಯರು ಸೂಚನೆ ನೀಡುತ್ತಿದ್ದಾರೆ. ಪ್ರತಿಯೊಬ್ಬರೂ ಮತ್ತು ಪ್ರತಿಯೊಂದು ಇಲಾಖೆ ಮತ್ತು ಸಮುದಾಯದ ಸಹಕಾರದೊಂದಿಗೆ ಸೇರಿ ಡೆಂಘೀ ಜ್ವರವನ್ನು ನಿಯಂತ್ರಿಸೋಣ. ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಮನೆಗಳ ಬಳಿ ಬಂದಾಗ ಅವರು ನೀಡುವ ಸಲಹೆಗಳನ್ನು ಪಡೆದು ಆರೋಗ್ಯವಂತರಾಗಿ ಬದುಕೋಣ ಎಂದು ಹೇಳಿದರು.

ತಾಲೂಕಲ್ಲಿ ಮೂವರಿಗೆ ಡೆಂಘೀ ಜ್ವರ ತಗುಲಿದೆ. ಚಿಕಿತ್ಸೆ ನೀಡಲಾಗಿದ್ದು ಗುಣಮುಖರಾಗುತ್ತಿದ್ದಾರೆ. ರೋಗದ ಗಂಭೀರತೆಯನ್ನು ಅರಿತು ಸಮರ್ಪಕ ನಿರ್ವಹಣೆಗಾಗಿ ರಾಜ್ಯಮಟ್ಟದ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳು, ಜಿಲ್ಲಾ ಆಸ್ಪತ್ರೆ ಹಾಗೂ ಆಯ್ದ ತಾಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳ ಸೇವೆ ಲಭ್ಯವಿದೆ ಎಂದು ತಿಳಿಸಿದರು.

ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಜಯಪ್ರಕಾಶ್ ಮಾತನಾಡಿ, ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುವ ಸೊಳ್ಳೆಗಳು ಕಚ್ಚಿ ರಕ್ತದಲ್ಲಿನ ಅಂಶ ಕಡಿಮೆಯಾದಾಗ ಡೆಂಘೀ ಜ್ವರಕ್ಕೆ ತುತ್ತಾಗಬೇಕಾಗುತ್ತದೆ. ಡೆಂಘೀ ಜ್ವರ ಮಾರಣಾಂತಿಕ ಕಾಯಿಲೆಯಲ್ಲ. ವೈದ್ಯರು ನೀಡುವ ಚಿಕಿತ್ಸೆಯಿಂದ ರೋಗಿ ಚೇತರಿಸಿಕೊಳ್ಳುತ್ತಾನೆ ಎಂದರು.

ತಹಸೀಲ್ದಾರ್ ನಂದಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಪಿ.ಶ್ರೀನಿವಾಸ್, ಪಪಂ ಮುಖ್ಯಾಧಿಕಾರಿ ಸ್ಟೀಪನ್ ಪ್ರಕಾಶ್, ಆರೋಗ್ಯ ಇಲಾಖೆ ಸಿಬ್ಬಂದಿ ಸತೀಶ್, ಮೋಹನ್, ಆಶಾ, ಆರೋಗ್ಯ ಕಾರ್ಯಕರ್ತೆಯರು ಇದ್ದರು.