ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ತಳಗವಾದಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ 75 ಯೂನಿಟ್‌ಗೂ ಹೆಚ್ಚಿನ ರಕ್ತ ಸಂಗ್ರಹವಾಯಿತು.

ನಾಡಪ್ರಭು ಕೆಂಪೇಗೌಡ ಯುವಕರ ಬಳಗದಿಂದ ಮಿಮ್ಸ್ ರಕ್ತಕೋಶದ ಸಹಯೋಗದೊಂದಿಗೆ ನಡೆದ ಶಿಬಿರವನ್ನು ದಾವಣಗೆರೆ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್ ಬೇವಿನಮಟ್ಟಿ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಬೆಂಗಳೂರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವುದಕ್ಕೆ ನಾಡಪ್ರಭು ಕೆಂಪೇಗೌಡರೇ ಪ್ರಮುಖ ರೂವಾರಿ ಎಂದರು.

ಕೆಂಪೇಗೌಡರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರ ಆಡಳಿತದಲ್ಲಿ ಜಾತ್ಯತೀತವಾಗಿ ಅವಕಾಶ ಕಲ್ಪಿಸಿ ಎಲ್ಲರ ಅಭಿವೃದ್ಧಿಗೆ ಮುಂದಾಗಿದ್ದರು. ಆದರ್ಶ ಆಡಳಿತಗಾರ ಕೆಂಪೇಗೌಡರ ದೂರದೃಷ್ಟಿಯು ಪ್ರಸ್ತುತ ರಾಜಕಾರಣಿಗಳಿಗೆ ಮಾದರಿಯಾಗುತ್ತದೆ ಎಂದರು.

ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಬಹಳಷ್ಟಿದೆ. ಉತ್ಪಾದಿಸಲಾಗದ ರಕ್ತದಿಂದ ಮತ್ತೊಂದು ಜೀವ ಉಳಿಸುವ ಕಾರ್ಯ ಮಾಡಬಹುದು. ಆರೋಗ್ಯವಂತರು ವರ್ಷಕ್ಕೆ ಕನಿಷ್ಠ ಮೂರು ಬಾರಿ ರಕ್ತದಾನ ಮಾಡುವುದರಿಂದ ಆರೋಗ್ಯದ ರಕ್ಷಣೆಯೂ ಸಹ ಆಗಲಿದೆ ಎಂದರು.


ಮಹನೀಯರ ಜಯಂತಿಯಲ್ಲಿ ಇಂಥ ಒಳ್ಳೆಯ ಕಾರ್ಯ ಮಾಡುತ್ತಿರುವುರು ಶ್ಲಾಘನೀಯ. ಮಹನೀಯರ ಜಯಂತ್ಯುತ್ಸವದ ಸ್ಮರಣೆಯಲ್ಲಿ ರಕ್ತದಾನದಂಥ ಉತ್ತಮ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಬಣ್ಣಿಸಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್ ಮಾತನಾಡಿ, ನಾವು ಮಾಡುವ ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದೆ. ಜನರಲ್ಲಿ ರಕ್ತದಾನದ ಮಹತ್ವ ಮತ್ತು ಅರಿವಿನ ಕೊರತೆಯಿಂದ ರಕ್ತದ ಕೊರತೆ ಕಾಡುತ್ತಿತ್ತು. ಆದರೆ, ಪ್ರಸ್ತುತ ಸಮಾಜದಲ್ಲಿ ಹಲವು ಸಂಘ ಸಂಸ್ಥೆಗಳು ಅದರ ಮಹತ್ವ ತಿಳಿಸುವ ಮೂಲಕ ಯುವ ಸಮೂಹವನ್ನು ರಕ್ತದಾನದತ್ತ ಸೆಳೆಯುತ್ತಿದೆ ಎಂದರು.

ಸಂಜೆ ಸರ್ಕಾರಿ ಪದವಿ ಕಾಲೇಜು ಆವರಣದಿಂದ ಎತ್ತಿನಗಾಡಿನಲ್ಲಿ ಕೆಂಪೇಗೌಡರ ಭಾವಚಿತ್ರವನ್ನು ಕೋಲಾಟ, ಪೂಜಾಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಯುವಕರ ನೃತ್ಯ ಗಮನ ಸೆಳೆಯಿತು.

ನಾಡಪ್ರಭು ಕೆಂಪೇಗೌಡ ಯುವಕರ ಬಳಗದ ಸದಸ್ಯರು, ಗ್ರಾಮದ ಎಲ್ಲ ಪಕ್ಷಗಳ, ಸಂಘ ಸಂಸ್ಥೆಗಳ ಪ್ರಮುಖರು ಭಾಗಿಯಾಗಿದ್ದರು.

ಉಚಿತ ಆರೋಗ್ಯ ಮತ್ತು ವೈದ್ಯಕೀಯ ಶಿಬಿರ:

ಯುನಿವರ್ಸಲ್ ಸೇವಾ ಟ್ರಸ್ಟ್‌ನಿಂದ ಬೆಂಗಳೂರಿನ ಜಾಸ್ ಕ್ಲಿನಿಕ್ ಮತ್ತು ಕಾವೇರಿ ಆಸ್ಪತ್ರೆ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ಮತ್ತು ವೈದ್ಯಕೀಯ ಶಿಬಿರ ಡಾ.ಪಿ.ಸಿ.ಜಗದೀಶ್ ನೇತೃತ್ವದ ತಂಡ 300ಕ್ಕೂ ಅಧಿಕ ಮಂದಿಯ ಮೂಳೆ-ಕೀಲು ನೋವಿನ ತಪಾಸಣೆ, ಪರೀಕ್ಷೆ, ಚಿಕಿತ್ಸೆ ಮತ್ತು ಮಾರ್ಗದರ್ಶನ ನೀಡಿದರು.

ಡಾ.ಪಿ.ಸಿ.ಜಗದೀಶ್ ಮಾತನಾಡಿ, ಈ ಶಿಬಿರಗಳಿಂದ ಬಡ ಮತ್ತು ಮಧ್ಯಮವರ್ಗದವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಜನರ ಆರೋಗ್ಯ ರಕ್ಷಣೆಗೆ ತಪಾಸಣೆ ಅಗತ್ಯವಿದೆ. ಪ್ರತಿಯೊಬ್ಬರಲ್ಲೂ ಕಾಡುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ವಹಿಸುವ ಅವಶ್ಯಕತೆ ಇದೆ ಎಂದರು.