ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಟಿ. ರಘುಮೂರ್ತಿ ಚಾಲನೆ ನೀಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕರ್ನಾಟಕದ ರಾಜಧಾನಿ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಜೀವನ ಮತ್ತು ಸಾಧನೆ ಸರ್ವಕಾಲಕ್ಕೂ ಅನುಕರಣೀಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ನಗರದ ತಾಲೂಕು ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆಂಪೇಗೌಡರ ದೂರದೃಷ್ಟಿ ಎಷ್ಟರ ಮಟ್ಟಿಗೆ ಇತ್ತೆಂಬುದನ್ನು ನಾವು ಇಂದಿನ ಬೆಂಗಳೂರನ್ನು ನೋಡಿದರೆ ಅರ್ಥವಾಗುತ್ತದೆ. ವಿವಿಧ ಭಾಷೆ, ಧರ್ಮ, ಜಾತಿ, ಉದ್ಯೋಗ, ಅತಿ ಬಡವನಿಂದ ಶುರುವಾಗಿ ಅತ್ಯಂತ ಶ್ರೀಮಂತನವರೆಗೂ ಬೆಂಗಳೂರು ಆಶ್ರಯ ನೀಡಿದೆ. ಇಂತಹ ಬೆಂಗಳೂರು ನಿರ್ಮಾಣಕ್ಕೆ ಪಣತೊಟ್ಟು ಕಟ್ಟಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಆದ್ದರಿಂದಲೇ ಇವರನ್ನು ನಾಡಪ್ರಭು ಎಂದು ಕರೆಯಲಾಗುತ್ತದೆ ಎಂದು ಹೇಳಿದರು.ಜಾಗತಿಕ ಮಟ್ಟದಲ್ಲೂ ಬೆಂಗಳೂರು ಹೆಸರಾಗಿದೆ. ನಾನಾ ದೇಶಗಳಿಂದ ಇಲ್ಲಿಗೆ ಹೂಡಿಕೆ ಮಾಡಲು ದಾಪುಗಾಲು ಹಾಕುತ್ತಿದ್ದಾರೆ. ಇಂತಹ ಬೆಂಗಳೂರಿಗೆ ಯಾವುದೇ ಜಾತಿ, ಧರ್ಮಗಳ ಬೇಲಿ ಹಾಕದೇ ಜಾತ್ಯಾತೀತವಾಗಿ ಕಟ್ಟಿದವರು ಕೆಂಪೇಗೌಡರು. ಇಂತಹ ಬೆಂಗಳೂರಿಗೆ ಕೆರೆ ಕಟ್ಟೆಗಳನ್ನು ಕಟ್ಟಿಸಿದ ಕೀರ್ತಿ ನಾಡಪ್ರಭುವಿಗೆ ಸಲ್ಲಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ಸಿ.ಶಿವಲಿಂಗಪ್ಪ ಕೆಂಪೇಗೌಡರ ಕುರಿತು ಉಪನ್ಯಾಸ ನೀಡಿದರು. ಗದ್ದಿಗೆ ತಿಪ್ಪೇಸ್ವಾಮಿ, ಕಲಮರಹಳ್ಳಿ ಶಿವಣ್ಣ, ಹೆಗ್ಗೆರೆ ಆನಂದಪ್ಪ, ಚನ್ನಕೇಶವ, ರವೀಶ್, ಬಿ.ಎನ್.ಪ್ರದೀಪ್, ಶಿವಲಿಂಗಪ್ಪ, ವೀರಭದ್ರಯ್ಯ, ಶಶಿಧರ, ರಮೇಶ್ ಗೌಡ, ಮಹಾಲಿಂಗಪ್ಪ, ರಂಗೇಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಪರಶುರಾಂಪುರ ತಾಲೂಕು ಆಗದಿದ್ದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ರಘುಮೂರ್ತಿ ಉವಾಚನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟಿ.ರಘುಮೂರ್ತಿ ಕ್ಷೇತ್ರದ ಜನರು ನನ್ನನ್ನು ಮೂರು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಇವರ ಋಣ ತೀರಿಸಲೇಬೇಕು. ಮೂರು ಅವಧಿಯಲ್ಲಿ ನಾನು ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಪರಶುರಾಂಪುರ ತಾಲೂಕು ಕೇಂದ್ರವನ್ನಾಗಿ ಮಾಡಲು ಅವಿರತ ಶ್ರಮ ಪಡುತ್ತಿದ್ದೇನೆ. ಸರ್ಕಾರ ಇಂತಹ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡುವುದಿಲ್ಲ ಎಂದು ಹೇಳಿದರು. ಚುನಾವಣೆ ಸಮಯದಲ್ಲಿ ಇದೇ ಹೇಳಿಕೆ ನೀಡಿದ್ದ ಶಾಸಕರು ಮತ್ತೆ ಪುನರುಚ್ಚರಿಸುವ ಮೂಲಕ ಪರಶುರಾಂಪುರ ಹೋಬಳಿ ಜನರ ಬಹುದಿನಗಳ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಂತಾಗಿದೆ. ಈ ಕುರಿತು ಸದನದಲ್ಲಿ ಅನೇಕ ಬಾರಿ ಸರ್ಕಾರದ ಗಮನ ಸೆಳಿದಿದ್ದರು. ಕಳೆದ ಚಳಿಗಾಲದ ಅಧಿವೇಶನದಲ್ಲಿ ಕಂದಾಯ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಅವರನ್ನು ಸದನದಲ್ಲಿ ಒತ್ತಾಯಿಸಿ, ನಾನು ಕ್ಷೇತ್ರದ ಜನರಿಗೆ ಮಾತು ಕೊಟ್ಟಿದ್ದೇನೆ. ಸರ್ಕಾರ ತಾಲೂಕು ಕೇಂದ್ರವನ್ನಾಗಿ ಘೋಷಿಸಲೇ ಬೇಕು ಎಂದು ಒತ್ತಾಯಿಸದ್ದನ್ನ ಸ್ಮರಿಸಬಹುದು.