ನಮ್ಮದು ಈಗ ಎನ್‌ಡಿಎ ಕುಟುಂಬ : ಅಭ್ಯರ್ಥಿ ಆಯ್ಕೆಯಲ್ಲಿ ಯಾವ ಜಂಜಾಟವೂ ಇಲ್ಲ - ಕುಮಾರಸ್ವಾಮಿ

| Published : Oct 19 2024, 12:31 AM IST / Updated: Oct 19 2024, 01:04 PM IST

ನಮ್ಮದು ಈಗ ಎನ್‌ಡಿಎ ಕುಟುಂಬ : ಅಭ್ಯರ್ಥಿ ಆಯ್ಕೆಯಲ್ಲಿ ಯಾವ ಜಂಜಾಟವೂ ಇಲ್ಲ - ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ನವರು ಯಾವ ಅಭ್ಯರ್ಥಿಯನ್ನಾದರೂ ಹಾಕಲಿ,   ನಮ್ಮದು ಕೇವಲ ದೇವೇಗೌಡರ ಕುಟುಂಬ ಅಲ್ಲ, ನಮ್ಮದು ಈಗ ಎನ್‌ಡಿಎ ಕುಟುಂಬ. ಎನ್‌ಡಿಎ ಕುಟುಂಬದಿಂದ ಒಬ್ಬ ಅಭ್ಯರ್ಥಿ ಇರುತ್ತಾನೆ. ಅಭ್ಯರ್ಥಿ ಆಯ್ಕೆಯಲ್ಲಿ ಯಾವ ಜಂಜಾಟವೂ ಇಲ್ಲ.

 ಮಂಡ್ಯ : ಹಣದ ದಾಹದಿಂದ ನಾಡಪ್ರಭು ಕೆಂಪೇಗೌಡರು ಕಟ್ಟಿದ್ದ ಕೆರೆ- ಕಟ್ಟೆಗಳನ್ನು ನುಂಗಿ ಹಾಕಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಡಾವಣೆ ಹೆಸರಿನಲ್ಲಿ ಕೆರೆ, ಕಾಲುವೆಗಳನ್ನು ಮುಚ್ಚಿದ್ದಾರೆ. ಕೆರೆಗಳು, ರಾಜ ಕಾಲುವೆಗಳನ್ನೂ ಉಳಿಸಿಲ್ಲ. ನಿಮ್ಮ ಭೂ- ಹಣದ ದಾಹದಿಂದ ಬೆಂಗಳೂರು ಇಂದು ಈ ರೀತಿ ಆಗಿದೆ. ಪುಟ್ಟೇನಹಳ್ಳಿ, ಬಿಳೇಕೆಳ್ಳನಹಳ್ಳಿ ಕೆರೆಗಳನ್ನು ಮುಚ್ಚಿ ಡಾಲರ್ಸ್ ಕಾಲೋನಿ ಮಾಡಿದರು. ನನ್ನ ಬಗ್ಗೆ ಮಾತನಾಡುವವರು ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕೆಂದು ಟೀಕಿಸಿದರು.

ಕುಮಾರಸ್ವಾಮಿ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಇವರಿಗಿಲ್ಲ. ಮಳೆ ಬಂದರೆ ಇವರು ಅರ್ಧ ಗಂಟೆಯಲ್ಲಿ ಮೋಟಾರು ಹಾಕಿ ನೀರನ್ನು ಖಾಲಿ ಮಾಡುತ್ತಾರಾ? ನಾನು ಜಲಜೀವನ್ ಮಿಷನ್‌ಗಾಗಿ 110 ಹಳ್ಳಿಗಳನ್ನು ಬೆಂಗಳೂರಿಗೆ ಸೇರಿಸಿದ್ದು, ಈಗ 110 ಹಳ್ಳಿಗೆ ನೀರು ಕೊಡುತ್ತೇವೆ ಎಂದು ಹೇಳಿದ್ದಾರೆ. ಅದರಲ್ಲಿ 50 ಲಕ್ಷ ಜನರಿಗೆ ನೀರು ಕೊಡುತ್ತೇವೆ ಎಂದು ಡಿಸಿಎಂ ಹೇಳಿದ್ದಾರೆ. 110 ಹಳ್ಳಿಗಳಲ್ಲಿ 50 ಲಕ್ಷ ಜನ ಇರಲು ಸಾಧ್ಯನಾ? ಹಾಗಿದ್ದರೆ ಬೆಂಗಳೂರು ಜನಸಂಖ್ಯೆ ಎಷ್ಟು? ಸುಳ್ಳು ಹೇಳಲು ಇತಿಮಿತಿ ಬೇಡವೇ ಎಂದು ಕಿಡಿಕಾರಿದರು.

ನನ್ನ ಮೇಲೆ ಯಾವ ಉದ್ದೇಶಕ್ಕಾಗಿ ತನಿಖೆ?:

ನನ್ನ ಮೇಲೆ ತನಿಖೆ ನಡೆಸುತ್ತಿರುವುದು ಯಾವ ಉದ್ದೇಶಕ್ಕೆ ಎಂಬುದು ತಿಳಿಯುತ್ತಿಲ್ಲ. ನಿನ್ನೆ ಮೊನ್ನೆ ಆಗಿರುವ ದೂರು ಯಾವ ಆಧಾರದ ಮೇಲೆ ಕೊಟ್ಟಿದ್ದೀರಾ? ಮುಖ್ಯಮಂತ್ರಿ ಯಾರನ್ನು ಮನೆಗೆ ಕರೆಸಿದ್ದರು ಎಂಬುದು ನನಗೆ ಗೊತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.

ಮೊನ್ನೆ ಯಾವುದೋ ಒಂದು ಎನ್‌ಸಿಆರ್ ಹಾಕಿಕೊಂಡಿದ್ದಾರೆ. ಎಫ್‌ಐಆರ್ ಮಾಡಿಸಲೇಬೇಕೆಂದು ಮನೆಗೆ ಅಧಿಕಾರಿಗಳನ್ನು ಕರೆಸಿಕೊಂಡಿದ್ದಾರೆ. ಏನೇನೂ ಚರ್ಚೆ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಗೆ ಎಸ್ ಐಟಿ ಅಸ್ತ್ರ:

ಕೇಂದ್ರ ಸರ್ಕಾರಕ್ಕೆ ಇಡಿ, ಐಟಿ ಅಸ್ತ್ರವಾಗಿದೆ ಎಂಬು ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಇವರಿಗೆ ಎಸ್‌ಐಟಿ ಅಸ್ತ್ರವಾಗಿದೆ. ಇದು ಸಿದ್ದರಾಮಯ್ಯ ಇನ್ವೇಸ್ಟಿಕೇಶನ್ ಟೀಮ್, ಶಿವಕುಮಾರ್ ಇನ್ವೇಸ್ಟಿಕೇಶನ್ ಟೀಮ್. ಇವರಿಗೆ ಅಸ್ತ್ರಗಳಾಗಿವೆ. ಈ ಸರ್ಕಾರಕ್ಕೆ ಕುಮಾರಸ್ವಾಮಿಯೇ ಪ್ರಮುಖ ಟಾರ್ಗೆಟ್ ಎಂದರು.

ಚನ್ನಪಟ್ಟಣಕ್ಕೆ ಎನ್‌ಡಿಎ ಅಭ್ಯರ್ಥಿ:

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ನವರು ಯಾವ ಅಭ್ಯರ್ಥಿಯನ್ನಾದರೂ ಹಾಕಲಿ, ಅಚ್ಚರಿಯಾಗಿ ಹಾಕೋತಾರೋ, ಇನ್ಯಾವುದೋ ಅಭ್ಯರ್ಥಿ ಹಾಕೋತಾರೋ, ಹಾಕಿಕೊಳ್ಳಲಿ, ನಮ್ಮದು ಕೇವಲ ದೇವೇಗೌಡರ ಕುಟುಂಬ ಅಲ್ಲ, ನಮ್ಮದು ಈಗ ಎನ್‌ಡಿಎ ಕುಟುಂಬ. ಎನ್‌ಡಿಎ ಕುಟುಂಬದಿಂದ ಒಬ್ಬ ಅಭ್ಯರ್ಥಿ ಇರುತ್ತಾನೆ. ಅಭ್ಯರ್ಥಿ ಆಯ್ಕೆಯಲ್ಲಿ ಯಾವ ಜಂಜಾಟವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೇಕೆದಾಟುಗೆ ನಿಮ್ಮ ಪಾರ್ಟನರ್ ಒಪ್ಪಿಸಿ:

ಮೇಕೆದಾಟು ಯೋಜನೆಗೆ ನಿಮ್ಮ ಪ್ರಧಾನಿಗಳಿಂದ ಅನುಮತಿ ಕೊಡಿಸಿ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಟ್ಯಾಲಿನ್ ಇವರ ಸ್ನೇಹಿತರೇ. ನಿಮ್ಮ ಪಾರ್ಟನರ್ ಹತ್ತಿರ ಮಾತಾಡಿ ಒಪ್ಪಿಸಿ ಕರೆದುಕೊಂಡು ಬನ್ನಿ. ಐದೇ ನಿಮಿಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಹಿ ಹಾಕಿಸಿಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.